ಧಾರಾಕಾರ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಆಶಾ ಕಾರ್ಯಕರ್ತೆ ವಿನೂತ, ತಿಮ್ಮಪ್ಪ ದಂಪತಿ ಸಣ್ಣ-ಪುಟ್ಟ ಗಾಯಗಳಿಗೆ ಈಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಎಚ್. ಕುನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಎಡಬಿಡದೇ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ದಂಪತಿ ಪಾರಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಎಚ್.ಕುನ್ನೂರು ಗ್ರಾಮದ ತಿಮ್ಮಪ್ಪ ಎಂಬವರ ಮನೆ ಹಾನಿಗೀಡಾಗಿದೆ. ರಾತ್ರಿ 8 ಗಂಟೆಯಿಂದ ಬಿರುಗಾಳಿಸಹಿತ ಗುಡುಗು- ಸಿಡಿಲಬ್ಬರದ ಧಾರಾಕಾರ ಮಳೆ ಸುರಿಯಿತು. ರಾತ್ರಿ 11ರ ಹೊತ್ತಿಗೆ ಮನೆ ಪಕ್ಕದಲ್ಲಿದ್ದ ಬೃಹತ್ ಮರ ಬುಡ ಸಮೇತವಾಗಿ ಬಿದ್ದು ಮನೆಗೆ ಹಾನಿಗೀಡಾಗಿದೆ. ಘಟನೆಯಲ್ಲಿ ಆಶಾ ಕಾರ್ಯಕರ್ತೆ ವಿನೂತ, ತಿಮ್ಮಪ್ಪ ದಂಪತಿ ಸಣ್ಣ-ಪುಟ್ಟ ಗಾಯಗಳಿಗೆ ಈಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಟಿವಿ, ದವಸ, ಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಮನೆ ಮೇಲ್ಚಾವಣಿಗೆ ಹಾಕಿದ್ದ ಶೀಟ್, ಹೆಂಚುಗಳು ಹಾನಿಗೊಂಡಿದ್ದು, ಮನೆಯೂ ಭಾಗಶಃ ಜಖಂಗೊಂಡಿದೆ.

ಸೂಕ್ತ ಪರಿಹಾರ ಭರವಸೆ:

ವಿಷಯ ತಿಳಿಯುತ್ತಿದ್ದಂತೆ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಸದಸ್ಯ ಮಂಜಪ್ಪ, ಪಿಡಿಒ ನಾಗರಾಜ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

- - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-6ಎಸ್‌ಎಂಜಿಕೆಪಿ04:

ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಎಚ್. ಕುನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ತಿಮ್ಮಪ್ಪ, ವಿನೂತ ದಂಪತಿಯ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು, ಮೇಲ್ಚಾವಣಿ, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.

Share this article