ಕನ್ನಡಪ್ರಭ ವಾರ್ತೆ ನಾಪೋಕ್ಲು
ಗಾಳಿ ಮಳೆಗೆ ಮರದ ರೆಂಬೆಗಳು ಮುರಿದುಬಿದ್ದಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇಲ್ಲಿಗೆ ಸಮೀಪದ ಚೆರಿಯ ಪರಂಬು ನಿವಾಸಿ ಪಿ.ಎ. ಹುಸೈನಾರ್ ಎಂಬವರ ಮನೆಯ ಮೇಲ್ಚಾವಣಿಗೆ ಅಳವಡಿಸಲಾದ ಹತ್ತಕ್ಕೂ ಹೆಚ್ಚಿನ ಸಿಮೆಂಟ್ ಸೀಟುಗಳು ಬುಧವಾರದ ಗಾಳಿ ಮಳೆಗೆ ಹಾರಿ ಹೋಗಿ ನಷ್ಟ ಸಂಭವಿಸಿದ್ದು ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.ಇಲ್ಲಿಯ ಪೊಲೀಸ್ ಠಾಣೆಯ ಸಮೀಪ ಮೈದಾನದಲ್ಲಿ ನಿಲ್ಲಿಸಲಾದ ಆಟೋ ರಿಕ್ಷಾ ಒಂದರ ಮೇಲೆ ಮರದ ಕೊಂಬೆ ಮುರಿದು ನಷ್ಟ ಸಂಭವಿಸಿದೆ.
ಗುರುವಾರದ ಮಳೆಗೆ ನಾಡು ಕಚೇರಿ, ಪೊಲೀಸ್ ವಸತಿ ಗೃಹದ ಸಮೀಪವಿರುವ ಬಿಟೆಮರ ಕೊಂಬೆ ಒಂದು ಮುರಿದು ಬಿದ್ದು ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟು ಮಾಡಿತು.
ಕಳೆದ ಮೂರು ವಾರಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಮಳೆಗಳಾಗಿದ್ದು ಸುಡುಬಿಸಿಲು ಸೆಕೆಯನ್ನು ಇನ್ನಷ್ಟು ಅಧಿಕಗೊಳಿಸಿದ್ದು ಇದೀಗ ಬುಧವಾರ , ಗುರುವಾರದ ಮಳೆ ಇಲೆಗೆ ತಂಪೆರೆದು ಜನರು ಸೆಕೆಯಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.ಬೆಳೆಗಾರರು ಕೂಡ ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿದ್ದು ಇದೀಗ ರೈತರ ಮುಖದಲ್ಲಿ ಮಂದಹಾಸ ಬೀರಿದೆ.