ಕದ್ರಿಯಲ್ಲಿ ಡಿ.೨೯ರಂದು ಪೇಜಾವರ ಶ್ರೀ ವಿಶ್ವೇಶತೀರ್ಥರ ನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಹರಿಪಾದ ಸೇರಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ‘ಪೇಜಾವರ ವಿಶ್ವೇಶತೀರ್ಥ ನಮನ-2023’ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕಲ್ಕೂರ ಪ್ರತಿಷ್ಠಾನ ವತಿಯಿಂದ ಡಿ.29ರಂದು ಮಧ್ಯಾಹ್ನ 1.30 ರಿಂದ ನಗರದ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಂಜೆ 3 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಗುರುವಂದನಾ ಸಂಸ್ಮರಣೆ ಮಾಡಲಿದ್ದಾರೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಪುಷ್ಪನಮನ ಸಲ್ಲಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮೀಶ ತೋಳ್ಪಾಡಿ, ಶಿರೂರು ಮಠದ ದಿವಾನ ಎಂ.ಉದಯ ಕುಮಾರ್ ಸರಳತ್ತಾಯ, ಕಟೀಲು ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರು ಸಂಸ್ಮರಣಾ ಭಾಷಣ ಮಾಡುವರು ಎಂದರು.ವಿಶ್ವೇಶತೀರ್ಥರ ಚಿತ್ರ ರಚನಾ ಸ್ಪರ್ಧೆ ಹಾಗೂ ಅವರ ಕುರಿತಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮಧ್ಯಾಹ್ನ 1.30 ರಿಂದ ಕೃಷ್ಣ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ ಪ್ರಸಾದ ವಿತರಣೆ ನಡೆಯಲಿದೆ ಎಂದರು.
18 ಸಾಧಕರಿಗೆ ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಡಾ. ಲಕ್ಷ್ಮೀಶ ತೋಳ್ಪಾಡಿ(ಸಾಹಿತ್ಯ, ಸಂಶೋಧನೆ), ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ (ವೇದ ವಿದ್ವಾಂಸರು), ಪೆರ್ಣಂಕಿಲ ಹರಿದಾಸ ಭಟ್ಟಮುಂಬೈ (ವೈದಿಕರು), ಆಲಂಗಾರು ಈಶ್ವರ ಭಟ್ ಮೂಡುಬಿದಿರೆ( ವೈದಿಕ, ಧಾರ್ಮಿಕ ಸೇವೆ), ಡಾ. ಎಂ.ಮೋಹನ ಆಳ್ವ ಮೂಡುಬಿದಿರೆ (ಶಿಕ್ಷಣ ಸಂಸ್ಕೃತಿ), ಕೆ.ಶ್ರೀಪತಿ ಭಟ್ ಮೂಡುಬಿದಿರೆ (ಉದ್ಯಮ-ಸಮಾಜಸೇವೆ), ಸುಧಾಕರ ಪೇಜಾವರ ದುಬೈ (ಹೊರನಾಡ ಕನ್ನಡ ಸೇವೆ), ಜೋಸೆಫ್ ಮಥಾಯಸ್ ದುಬೈ (ಹೊರನಾಡ ಬಹುಭಾಷಾ ಸಾಹಿತ್ಯ ಸೇವೆ), ಡಾ. ಮೀನಾಕ್ಷಿ ಗೌಡ ಸುಳ್ಯ(ಶಿಕ್ಷಣ, ಸಾಹಿತ್ಯ ಸಂಘಟನೆ), ಡಾ. ಶಿವರಾಮ ಕೆ.ಭಂಡಾರಿ ಮುಂಬೈ (ಕೇಶ ವಿನ್ಯಾಸಗಾರರು), ಡಾ. ಪ್ರಭಾಕರ ಶಿಶಿಲ (ಸಾಹಿತ್ಯ), ನೀಲಾವರ ಸುರೇಂದ್ರ ಅಡಿಗ (ಶಿಕ್ಷಣ, ಸಾಹಿತ್ಯ), ರಾಮಣ್ಣ ಅಡಿಗ ಕದ್ರಿ (ವೈದಿಕರು), ಪಿ.ಎಸ್.ವೆಂಕಟೇಶ ಪಾವಂಜೆ(ಪಾಕಶಾಸ್ತ್ರಜ್ಞ), ಎಸ್.ವಿ.ಭಟ್ ಶಾನಾಡಿ (ಶಿಕ್ಷಣ-ಯಕ್ಷಗಾನ), ಪುಂಡರೀಕಾಕ್ಷ ಉಪಾಧ್ಯಾಯ (ಯಕ್ಷಗಾನ), ಅಶ್ರಫ್ ಶಾ ಮಂತೂರು ದುಬೈ (ವಾಸ್ತು ವಿನ್ಯಾಸಗಾರರು), ಭಾಸ್ಕರ ಸುವರ್ಣ ಸಸಿಹಿತ್ಲು(ಶಿಕ್ಷಣ, ಸಂಸ್ಕೃತಿ) ಅವರಿಗೆ ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಗೌರವಿಸಲಾಗುವುದು ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.