ಹೆಲ್ಮೆಟ್‌ಗೆ ಅಭ್ಯಂತರವಿಲ್ಲ, ಆದರೆ ವಸೂಲಿ ಬೇಡ

KannadaprabhaNewsNetwork | Published : Nov 23, 2024 12:31 AM

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿರುವ ಎಸ್ಪಿ ಆದೇಶದ ಬಗ್ಗೆ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿರುವ ಎಸ್ಪಿ ಆದೇಶದ ಬಗ್ಗೆ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು. ಡಿ.1 ರಿಂದ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ಜಿಲ್ಲಾಧಿಕಾರಿಗಳು ಸ್ಟೇಟಸ್‌ ಇಟ್ಟುಕೊಂಡಿರುವ ಬಗ್ಗೆ ಶಾಸಕ ಶರಣಗೌಡ ಕಂದಕೂರ ಪ್ರಸ್ತಾಪಿಸಿದಾಗ, ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಹೆಲ್ಮೆಟ್‌ ಕಡ್ಡಾಯ ಮಾಡಿರುವ ಎಸ್ಪಿಯವರ ಆದೇಶ ಸಾರ್ವಜನಿಕರ ಗಮನಕ್ಕೆ ತರುವುದಾಗಿತ್ತು ಎಂದರು.

ಡಿಸಿಗೆ ಪ್ರತಿಕ್ರಿಯಿಸಿದ ಶಾಸಕ ಕಂದಕೂರ, ವಾಹನ ಸವಾರರ ಜೀವರಕ್ಷಣೆಗಾಗಿನ ಹೆಲ್ಮೆಟ್‌ ಧರಿಸುವಿಕೆ ಒಪ್ಪುವ ವಿಚಾರ. ಹೆಲ್ಮೆಟ್‌ ಕಡ್ಡಾಯ ಮಾಡಿ, ನನ್ನದೇನೂ ಅಭ್ಯಂತರವಿಲ್ಲ. ಆದರೆ, ನಿಮ್ಮ ಕೆಳಗಿನ ಟ್ರಾಫಿಕ್‌ ಹಾಗೂ ಕೆಲವು ಪೊಲೀಸ್‌ ಅಧಿಕಾರಿಗಳು ಸುತ್ತ ನಾಲ್ಕೂ ಕಡೆಗಳಲ್ಲಿ ಹದ್ದಿನಂತೆ ನಿಂತು ಜನರ ಜೀವ ತಿನ್ನಬೇಡಿ, ಕೈಮುಗಿಯುತ್ತೇನೆ ಎಂದರು .

ಹೆಲ್ಮೆಟ್‌ ಇದ್ದರೂ ಏನಾದರೂ ನೆಪದಲ್ಲಿ ಕೆಲವು ಪೊಲೀಸ್‌ ಅಧಿಕಾರಿಗಳು ಜನರಿಗೆ ತೊಂದರೆ ಕೊಡುತ್ತಾರೆ, ಇದಾಗಬಾರದು. ರಸ್ತೆ ಸುರಕ್ಷತೆ ವಿಚಾರದಲ್ಲಿ ಹೆಲ್ಮೆಟ್‌ ಜೀವರಕ್ಷಣೆ ನಿಜ. ಇದರ ಹೆಸರಲ್ಲಿ ವಸೂಲಿ ಆಗಬಾರದು ಎಂದರು.ಇತ್ತ, ಇದಕ್ಕೆ ದನಿಗೂಡಿಸಿದ ಸಚಿವ ದರ್ಶನಾಪುರ, ಹೆಲ್ಮೆಟ್‌ ಕಡ್ಡಾಯ ಗುಲ್ಬರ್ಗದಲ್ಲಿಲ್ಲ, ಬೀದರಿನಲ್ಲಿಲ್ಲ, ಯಾದಗಿರಿಯಲ್ಲೇಕೆ ಎಂದು ಎಸ್ಪಿಯವರನ್ನು ಪ್ರಶ್ನಿಸಿದರು. ಐಜಿ ಅವರಿಗೆ ಹೇಳಿ ಕಡ್ಡಾಯವಾಗಿ ಎಲ್ಲ ಕಡೆಗಳಲ್ಲಿ ಮಾಡಲು ಹೇಳಿ. ಜನರಿಗೆ ತೊಂದರೆ ಆಗಬಾರದು. ಇದಕ್ಕೆ ಜಾಗೃತಿ ಮೂಡಿಸಬೇಕು. ನಮ್ಮ ಜೀವದ ರಕ್ಷಣೆ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪೃಥ್ವಿಕ್‌ ಶಂಕರ್‌, ಹೆಲ್ಮೆಟ್‌ ಕಡ್ಡಾಯ ಹೊಸ ಆದೇಶವೇನಲ್ಲ. ಹೆಲ್ಮೆಟ್‌ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತದೆ ಎಂದರು.

ಹೆಲ್ಮೆಟ್‌ ಬಳಸಿ, ತಲೆದಂಡ ಉಳಿಸಿ

ಡಿ.1 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್‌ ಧರಿಸಿಯೇ ಸಂಚರಿಸಬೇಕು ಎಂದು ನೂತನ ಎಸ್ಪಿ ಪೃಥ್ವಿಕ್‌ ಶಂಕರ್‌ ಗುರುವಾರ ಸಂಜೆ ಪ್ರಕಟಣೆ ಹೊರಡಿಸಿದ್ದಾರೆ. ರಸ್ತೆ ಸಂಚಾರ ಸುರಕ್ಷತೆ, ಅಪಘಾತಗಳು, ಜೀವಹಾನಿ ತಪ್ಪಿಸಲು ಇದು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಸವಾರರ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.