ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರದಿಂದ ಯಾವುದೇ ಕೆಲಸಗಳು ನಿಮಗೆ ಸಿಗುವುದಿಲ್ಲ. ಹೈನುಗಾರಿಕೆ ಅಥವಾ ಟೈಲರಿಂಗ್ ಸೇರಿದಂತೆ ಯಾವುದೇ ಸ್ವಯಂ ವೃತ್ತಿ ಆರಂಭಿಸಿದರೂ ಸಹಕಾರ ನೀಡುವುದಾಗಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭರವಸೆ ನೀಡಿದರು.ಕೊನ್ನಾಪುರ ಗ್ರಾಮದ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪ್ರೇಮಾ ಮತ್ತು ರಂಜಿತ್ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿ, ಮೃತ ಪ್ರೇಮಾಳ ಪುತ್ರಿ ಶಾಸಕರ ಬಳಿ ನಾವು ತುಂಬಾ ತೊಂದರೆಯಲ್ಲಿದ್ದೇವೆ. ಮನೆ ನಿರ್ಮಾಣಕ್ಕೆ, ಕಷ್ಟಗಳನ್ನು ನಿವಾರಿಸಿಕೊಳ್ಳಲು ಮೈಕ್ರೋ ಫೈನಾನ್ಸ್ ಕಂಪನಿಯಿಂದ ಸಾಲ ಮಾಡಿದ್ದೆವು ಎಂದರು.
ಸಾಲದ ಬಡ್ಡಿ ಜಾಸ್ತಿಯಾಗಿದ್ದರಿಂದ ಮನೆ ಹತ್ತಿರ ಮೈಕ್ರೋ ಫೈನಾನ್ಸ್ನವರು ಬಂದು ಗಲಾಟೆ ಮಾಡಿ ಮನೆಯಿಂದ ಹೊರಗೆ ಕಳಿಸಿ ಬೀಗ ಹಾಕಿದರು. ಇದರಿಂದ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡರು. ಅಣ್ಣ ರಂಜಿತ್ ತಾಯಿ ಮೇಲೆ ಅಪಾರ ಪ್ರೀತಿ ಹೊಂದಿದ್ದು ಹಾಗೂ ಮನನೊಂದು ಅವರು ಸಹ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.ಈಗ ಸಂಸಾರ ನೌಕೆ ಸಾಗಿಸುವ ಮೇಟಿ ಇಲ್ಲದಂತಾಗಿದೆ. ನಮಗೆ ಯಾವುದಾದರೂ ನೌಕರಿ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು, ಈಗ ನಾವು ಮಾಡುವ ಸಹಾಯ ಹೆಚ್ಚು ದಿನ ಬರುವುದಿಲ್ಲ. ನೀವುಗಳು ಸ್ವಯಂ ವೃತ್ತಿ ಆರಂಭಿಸಿಕೊಂಡರೆ ನನ್ನಿಂದ ಸಹಕಾರ ನೀಡುತ್ತೇನೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಡ್ಡಿ ವ್ಯವಹಾರದ ಹಾವಳಿಯಿಂದ ತಾಲೂಕಿನ ಮಲಿಯೂರು ಮತ್ತು ಕೊನ್ನಾಪುರದಲ್ಲಿ ಎರಡು ಆತ್ಮಹತ್ಯೆ ಪ್ರಕರಣಗಳು ನಡೆದಿದೆ. ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಾಗ ಡೀಸಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಫೈನಾನ್ಸ್ ಕಂಪನಿ ಏಜೆನ್ಸಿಯವರ ಮನವೊಲಿಸಿ ಆಕೆ ಸಾಲಮನ್ನಾ ಮಾಡಿಸಿ ಪರಿಹಾರ ನೀಡಲು ತಿಳಿಸಿದೆ ಎಂದರು.ಅಡಮಾನವಿಟ್ಟ ಮನೆಯನ್ನು ಬಿಡಿಸಿದೆ ಇವೆಲ್ಲವನ್ನು ಮಾನವೀಯತೆ ದೃಷ್ಟಿಯಿಂದ ಮಾಡಿಸಿದ್ದೇನೆ. ಆಕೆ ಮಗನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಕುಟುಂಬದಲ್ಲಿ ದುಡಿಯುವವರು ಇಲ್ಲದ್ದರಿಂದ ಕುಟುಂಬದವರಿಗೆ ತುಂಬಾ ತೊಂದರೆ ಆಗಿದೆ. ಅವರನ್ನು ಸ್ವಯಂ ವೃತ್ತಿ ಆರಂಭಿಸಿಕೊಳ್ಳಲು ಸಲಹೆ ನೀಡಿದ್ದೇನೆ ಎಂದರು.
ಸಾಲಗಾರರು ಅತುರದಲ್ಲಿ ಮನನೊಂದು ಜೀವ ಹಾನಿ ಮಾಡಿಕೊಳ್ಳಲು ಮುಂದಾಗಬಾರದು. ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಲದ ವಿಷ ವರ್ತುಲದಿಂದ ಹೊರ ಬರಬೇಕೆಂದು ಸಾರ್ವಜನಿಕರಿಗೆ ಸಲಹೆ ನೀಡಿದರು.ಸಾಲಗಾರರಿಗಾಗಿ ಏಕಾಏಕಿ ಕಾನೂನುಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೂ ಬಡಜನರ ರಕ್ಷಣೆಗಾಗಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಬಂಧ ಸುಗ್ರಿವಾಜ್ಞೆ ಜಾರಿಗೆ ತರಲಾಗಿದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಘನತೆ ಜೀವನ ನಡೆಸಿ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ಕುಂತೂರು ಗೋಪಾಲ್, ಚಂದ್ರಕುಮಾರ್, ಶ್ರೀನಿವಾಸಚಾರಿ, ಸಾಗ್ಯ ಕೆಂಪಯ್ಯ, ಎಚ್.ವಿ.ರಾಜಣ್ಣ, ರಾಮಲಿಂಗೇಗೌಡ , ಶಿವನಂಜೇಗೌಡ, ಕೆ.ಬಿ.ಜಯಶಂಕರ್, ಗ್ರಾಮ ಪಂಚಾಯ್ತಿ ಸದಸ್ಯರಾದ ಜಮೀಲ್ ಪಾಷಾ, ಮರಿಸ್ವಾಮಿ, ಮಂಗಳ, ಸೇರಿದಂತೆ ಹಲವರು ಭಾಗವಹಿಸಿದ್ದರು.