ಗೋ ಬ್ಯಾಕ್‌ ಚಳುವಳಿಗೆ ಹೈ ಕಮಾಂಡ್‌ ಉತ್ತರ : ಸಂಸದೆ ಶೋಭಾ

KannadaprabhaNewsNetwork |  
Published : Feb 27, 2024, 01:37 AM IST
ಶೋಭಾ ಕರಂದ್ಲಾಜೆ | Kannada Prabha

ಸಾರಾಂಶ

ಕಳೆದ ಬಾರಿ ಗೋ ಬ್ಯಾಕ್‌ ಶೋಭಾ ಚಳುವಳಿ ಮಾಡಿದ್ರು, ಈ ಬಾರಿಯೂ ಮಾಡುತ್ತಿದ್ದಾರೆ. ಈ ಕೆಲಸವನ್ನು ಕೆಲವರು ದರ್ಪದಿಂದ ಮಾಡುತ್ತಿದ್ದಾರೆ. ಮಾಡಿಸುತ್ತಿದ್ದಾರೆ. ಅದಕ್ಕೆ ನಮ್ಮ ನಾಯಕತ್ವ ಉತ್ತರ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ದುಡ್ಡಿನ ಮದದಿಂದ ಈ ಕೆಲಸ ಮಾಡಿಸುತ್ತಿದ್ದಾರೆ । ಹೈಕಮಾಂಡ್‌ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ಬಾರಿ ಗೋ ಬ್ಯಾಕ್‌ ಶೋಭಾ ಚಳುವಳಿ ಮಾಡಿದ್ರು, ಈ ಬಾರಿಯೂ ಮಾಡುತ್ತಿದ್ದಾರೆ. ಈ ಕೆಲಸವನ್ನು ಕೆಲವರು ದರ್ಪದಿಂದ ಮಾಡುತ್ತಿದ್ದಾರೆ. ಮಾಡಿಸುತ್ತಿದ್ದಾರೆ. ಅದಕ್ಕೆ ನಮ್ಮ ನಾಯಕತ್ವ ಉತ್ತರ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ದುಡ್ಡಿನ ಮದದಿಂದ ಈ ಕೆಲಸ ಮಾಡಿಸುತ್ತಿದ್ದಾರೆ. ನಾನು ಹೈಕಮಾಂಡ್‌ ಯಾವ ಜವಾಬ್ದಾರಿ ವಹಿಸಿದಿಯೋ ಆ ಕೆಲಸವನ್ನು ಅತ್ಯಂತ ಪ್ರಾಮಾಣಿಕ ವಾಗಿ ಅವರ ಹೆಸರಿಗೆ ಒಂದು ಕಪ್ಪು ಚುಕ್ಕಿ ಬರದಂತೆ ರಾಜಕೀಯ ಇಷ್ಟು ವರ್ಷಗಳ ಕಾಲ ಮಾಡಿಕೊಂಡು ಬಂದಿದ್ದೇನೆ ಎಂದರು. ಯಾರೋ ಷಡ್ಯಂತ್ರ ಮಾಡಿದರೆ, ಅದಕ್ಕೆ ನಾನು ಉತ್ತರ ಕೊಡುವುದಿಲ್ಲ, ಹಿರಿಯರು ಮತ್ತು ಹೈ ಕಮಾಂಡ್‌ ಕೊಡ್ತಾರೆ, ಹಿರಿಯರ ಮೇಲೆ ಅಷ್ಟು ವಿಶ್ವಾಸ ಇದೆ. ಈ ಉತ್ತರವನ್ನು ನನ್ನ ಹಿರಿಯರು ನನ್ನ ಪರವಾಗಿ ನೀಡಲಿದ್ದಾರೆ ಎಂದರು.ಪತ್ರ ಯಾರು ಬರೆದರು, ಯಾವ ಹ್ಯಾಂಡ್‌ ರೈಟಿಂಗ್‌ನಲ್ಲಿ ಬರೆದರು, ಯಾರು ಪೋಸ್ಟ್ ಮಾಡಿದ್ರು, ಎಷ್ಟು ಪೋಸ್ಟ್ ಮಾಡಿದ್ರು, ಇದೆಲ್ಲಾ ವರದಿಯನ್ನು ಕೇಂದ್ರ ತರಿಸಿಕೊಂಡಿದೆ. ಯಾವುದೇ ಎಂಪಿ ಚುನಾವಣೆಯಲ್ಲಿ ಮಂತ್ರಿಯ ಬಗ್ಗೆ ವಿರುದ್ಧವಾಗಿ ಬಂದಾಗ ಸಹಜವಾಗಿ ಕೇಂದ್ರ ವರದಿ ತರಿಸಿಕೊಳ್ಳಲಿದೆ ಎಂದು ಹೇಳಿದರು.ಎಂಬಿಪಾ ಗೆ ಟಾಂಗ್‌ಈ ಬಾರಿ ಶೋಭಾ ಕರಂದ್ಲಾಜೆ ಅವರು ಮೊದಲು ತಮ್ಮ ಟಿಕೆಟ್‌ ಉಳಿಸಿಕೊಳ್ಳಲಿ ಎಂದು ಟೀಕೆ ಮಾಡಿರುವ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಟಾಂಗ್‌ ಕೊಟ್ಟಿದ್ದಾರೆ.ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಲ್ಲರಿಗೂ ಗೊತ್ತಿದೆ. ಅವರ ಎಂಎಲ್‌ಎ ಉಳಿಸಿಕೊಳ್ಳಲು ಆಗುವುದಿಲ್ಲ ಎಂಬ ಕಾರಣ ಕ್ಕಾಗಿ ಬಿಜೆಪಿ ಎಂಎಲ್‌ಎ ಗಳಿಗೆ ಕೈ ಹಾಕುವ ಅವರ ದುಷ್ಟ ಬುದ್ಧಿಯನ್ನು ತೋರಿಸುತ್ತಿದ್ದಾರೆ ಎಂದರು.ಚುನಾವಣೆ ಆದ ಮೇಲೆ ಎಲ್ಲವೂ ಹೊರಗೆ ಬರಲಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ನಡುವೆ ಏನು ನಡೆಯುತ್ತಿದೆ ಅದು, ಚುನಾವಣೆ ನಂತರ ಆಚೆ ಬರುತ್ತೆ ಎಂದು ಹೇಳಿದರು.

ಶೋಭಾ ವಿರುದ್ಧ ಮುಂದುವರೆದ ಪೋಸ್ಟರ್‌ ವಾರ್‌

ಚಿಕ್ಕಮಗಳೂರು: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿಯವರೇ ನಡೆಸುತ್ತಿರುವ ಪೋಸ್ಟರ್‌ ವಾರ್‌ ಮುಂದುವರೆದಿದೆ.

ಗೋ ಬ್ಯಾಕ್‌ ಶೋಭಾಕ್ಕ ಎನ್ನುವವರು, ಇದೀಗ ಶೋಭಾ ಸಾಕು ಡಿ.ಎನ್‌. ಜೀವರಾಜ್‌ ಬೇಕು ಎನ್ನುವ ಹೊಸ ದಾಳವನ್ನು ಪ್ರಯೋಗ ಮಾಡಿದ್ದಾರೆ. ನಾವು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರಕ್ಕೂ ಬಾರದೆ ಜಿಲ್ಲೆಯ 5 ಕ್ಕೆ 5 ಕ್ಷೇತ್ರ ಸೋತಾಗ ಕನಿಷ್ಟ ಸೌಜನ್ಯಕ್ಕಾದರೂ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಲು ಬಾರದ ಶೋಭಾ ಕರಂದ್ಲಾಜೆಯವರಿಗೆ ಟಿಕೆಟ್‌ ನೀಡಬಾರದು ಎಂಬುದಷ್ಟೆ ನಮ್ಮ ಆಗ್ರಹ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ.ಡಿ.ಸಿ. ಶ್ರೀಕಂಠಪ್ಪನವರ ನಂತರ ಚಿಕ್ಕಮಗಳೂರು ಜಿಲ್ಲೆಗೆ ಬಿಜೆಪಿ ಎಂ.ಪಿ. ಅಭ್ಯರ್ಥಿಯನ್ನು ಸ್ಥಳೀಯರಿಗೆ ಕೊಟ್ಟಿಲ್ಲ, ಚಿಕ್ಕಮಗಳೂರಿನ ಹಿರಿಯ ಬಿಜೆಪಿ ನಾಯಕ ಡಿ.ಎನ್‌. ಜೀವರಾಜ್‌ ಅವರಿಗೆ ಈ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಟಿಕೆಟ್‌ ನೀಡಬೇಕೆಂದು ಮನವಿ ಮಾಡಲಾಗಿದೆ.ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಆಪ್ತರಾಗಿರುವ ಡಿ.ಎನ್‌. ಜೀವರಾಜ್ ಅವರ ಹೆಸರನ್ನು ಮುನ್ನಲೆಗೆ ತರುವ ಮೂಲಕ ಹೊಸ ದಾಳವನ್ನು ಶೋಭಾ ಕರಂದ್ಲಾಜೆ ವಿರೋಧಿಗಳು ಬೀಸಿದ್ದಾರೆ.ಜೀವರಾಜ್‌ ಸ್ಪಷ್ಟನೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನನಗೆ ಟಿಕೆಟ್‌ ಕೊಡಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರೀತಿಗೆ ಹಾಕುತ್ತಿದ್ದರೆ, ಇದನ್ನು ಇನ್ನು ಮುಂದೆ ಹಾಕಬೇಡಿ ಎಂದು ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ನಾನೊಬ್ಬ ನಿಷ್ಟಾವಂತ ಕಾರ್ಯಕರ್ತ. ಪಕ್ಷದ ನಿರ್ಧಾರವನ್ನು ಸ್ವಾಗತ ಮಾಡ್ತೀನಿ. ಈ ಕ್ಷೇತ್ರದಲ್ಲಿ ಖುರ್ಚಿ ಖಾಲಿ ಇಲ್ಲ. ಈಗಾಗಲೇ ಇಲ್ಲಿ ಎಂಪಿ ಇದ್ದಾರೆ, ಕೇಂದ್ರದ ಮಂತ್ರಿ ಸ್ಥಾನದಲ್ಲಿ ಇರುವಾಗ ನಮಗೆ ಟಿಕೆಟ್‌ ಕೊಡಿ ಎಂದು ಕೇಳುವುದು ಸೂಕ್ತವಲ್ಲ. ಈ ರೀತಿ ಕೇಳುವುದಿಲ್ಲ. ಇಲ್ಲಿ ಕಮಲದ ಹೂ ನಮ್ಮ ಅಭ್ಯರ್ಥಿ. ಅವರನ್ನು ಗೆಲ್ಲಿಸುವುದು, ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿ ಯಾಗಿರಬೇಕು ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ