ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭವಿಷ್ಯದ ಕಾಂಗ್ರೆಸ್ ನಾಯಕತ್ವವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಾಯಕತ್ವ ವಿಚಾರದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಾಧಿಕತ್ವಕ್ಕೆ ಸಂಬಂಧಿಸಿದಂತೆ ಯತೀಂದ್ರ ಅವರ ಹೇಳಿಕೆ ವೈಯಕ್ತಿಕ. ಕಾಂಗ್ರೆಸ್ ಪಕ್ಷಕ್ಕೆ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗಿದೆ. ಸಿಎಂ ಸಿದ್ದರಾಮಯ್ಯರ ನಂತರ ಯಾವ ನಾಯಕತ್ವವನ್ನು ಗುರುತಿಸುತ್ತದೋ ಅವರ ನಾಯಕತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುನ್ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಪಕ್ಷ ಆರ್.ಎಸ್.ಎಸ್ ಪಥ ಸಂಚಲನವನ್ನು ವಿರೋಧಿಸಿತ್ತಿಲ್ಲ. ಬದಲಾಗಿ ಅನುಮತಿ ಪಡೆಯದೆ ಪಥಸಂಚಲನ ನಡೆಸುವುದಕ್ಕೆ ನಮ್ಮ ವಿರೋಧವಿದೆ. ಆರ್.ಎಸ್.ಎಸ್ ನೂರುವರ್ಷ ತುಂಬಿದ್ದರೂ ಅದು ಇದುವರೆಗೂ ನೋಂದಣಿಯಾಗಿಲ್ಲ. ನೋಂದಣಿಯಾದರೆ ತನ್ನದೇ ಬೈಲಾ ರೂಪಿಸಿಕೊಂಡು ಬೈಲಾ ನಿಯಮದಂತೆ ಕಾರ್ಯಚಟುವಟಿಕೆ ನಡೆಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅದು ಇದುವೆರಗೂ ನೋಂದಣಿಯಾಗಿಲ್ಲ ಎಂದು ದೂರಿದರು.
ಆರ್.ಎಸ್.ಎಸ್ ಭಾರತೀಯ ಸ್ವಾತ್ಯಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಯಾವುದೇ ಆರ್.ಎಸ್.ಎಸ್ ಮುಖ್ಯಸ್ಥ ಸ್ವಾತ್ಯಂತ್ರ ಚಳವಳಿಯಲ್ಲಿ ಪಾಲ್ಗೊಂಡಿಲ್ಲ. ಮಹಾತ್ಮ ಗಾಂಧಿಯವರು ಕೊಲೆಯಾದ ನಂತರ ಸರ್ಧಾರ್ ವಲ್ಲಬಾಯ್ ಪಟೇಲ್ ಅವರು ದೇಶದಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳನ್ನು ಬ್ಯಾನ್ ಮಾಡಿದ್ದರು. ನಂತರ ಕೇವಲ ಸಾಂಸ್ಕೃತಿಕ ಚಟುವಟಿಗಳನ್ನು ಮಾತ್ರ ನಡೆಸುತ್ತದೆ ಎಂದು ಮುಚ್ಚಳಿಕೆ ಬರೆದುಕೊಟ್ಟ ಆ ನಂತರ ಅದರ ಮೇಲಿನ ನಿಷೇಧವನ್ನು ಹಿಂಪಡೆಯಲಾಯಿತು ಎಂದರು.ಆರ್.ಎಸ್.ಎಸ್ ಕೇವಲ ಸಾಮಸ್ಕೃತಿಕ ಸಂಟನೆಯಾಗಿ ಉಳಿದುಕೊಂಡರೆ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ದೇಶದ ಜಾತಿ ಸಂಘಟನೆಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಲೋಕಸಭಾ ಪರಾಜಿತ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಕಿಕ್ಕೇರಿ ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.