ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಬಹು ಬೇಡಿಕೆ

KannadaprabhaNewsNetwork |  
Published : Dec 01, 2025, 02:15 AM IST
30ಡಿಡಬ್ಲೂಡಿ1ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಉಪ್ಪಿನ ಬೆಟಗೇರಿಯಲ್ಲಿರುವ ವಸತಿ ನಿಲಯ. | Kannada Prabha

ಸಾರಾಂಶ

ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಬಹು ಬೇಡಿಕೆ ಉಂಟಾಗಿದ್ದು, ಶೇ. 80ರಷ್ಟು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದ ಕೊರತೆ ಇದೆ.

ಬಸವರಾಜ ಹಿರೇಮಠ

ಧಾರವಾಡ: ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ ನಿರೀಕ್ಷೆ ಇಟ್ಟುಕೊಂಡು ವಿದ್ಯಾಕಾಶಿ ಧಾರವಾಡಕ್ಕೆ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಸಿಗದೇ ಪರದಾಡುತ್ತಿರುವುದು ಹೊಸದೇನಲ್ಲ. ಅದರಲ್ಲೂ ಹಿಂದುಳಿದ ವರ್ಗಗಳ ವಸತಿ ನಿಲಯ (ಬಿಸಿಎಂ)ಕ್ಕೆ ಬಹು ಬೇಡಿಕೆ ಉಂಟಾಗಿದ್ದು, ಶೇ. 80ರಷ್ಟು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದ ಕೊರತೆ ಇದೆ.

ಬಿಸಿಎಂ ಇಲಾಖೆಯು ಹಾಸ್ಟೆಲ್‌ ಸೀಟುಗಳಿಗಾಗಿ ಈ ವರ್ಷ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ದಾವಣಗೆರೆ, ಬೆಂಗಳೂರು ಮತ್ತು ಕಲಬುರಗಿಗಳಿಗೆ ಶೇ. 60ರಷ್ಟು ಅಂದರೆ ಅಂದಾಜು 2 ಲಕ್ಷ ಸೀಟುಗಳ ಬೇಡಿಕೆ ಇದ್ದು, ಆದರೆ, ಇಲಾಖೆಯ ಅಧಿಕಾರಿಗಳ ಪ್ರಕಾರ ಈ ಜಿಲ್ಲೆಗಳಲ್ಲಿ 40,000 ಸೀಟುಗಳು ಮಾತ್ರ ಲಭ್ಯ.

ಪ್ರಸಕ್ತ ವರ್ಷವಷ್ಟೇ ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ 15,938 ವಿದ್ಯಾರ್ಥಿಗಳು ಹಾಸ್ಟೆಲ್ ವಸತಿಗಾಗಿ ಅರ್ಜಿ ಸಲ್ಲಿಸಿದರು, ಆದರೆ, ಕೇವಲ 1,690 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಅಂದರೆ ಶೇ. 90ಕ್ಕೂ ಹೆಚ್ಚು ಸೀಟುಗಳನ್ನು ನಿರಾಕರಿಸಲಾಗಿದೆ. ಈ ಕೊರತೆಯು ಬಡ ಮತ್ತು ಅರ್ಹ ವಿದ್ಯಾರ್ಥಿಗಳ ಮೇಲೆ, ವಿಶೇಷವಾಗಿ ಉತ್ತರ ಕರ್ನಾಟಕದ ಗ್ರಾಮೀಣ ತಾಲೂಕುಗಳು ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಸೀಟುಗಳ ಕೊರತೆಯು ಹಲವು ವರ್ಷಗಳಿಂದಲೂ ಇದ್ದು, ಸ್ಥಳಾವಕಾಶದ ಕೊರತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಅರ್ಜಿದಾರರು ತಿರಸ್ಕರಿಸಲಾಗುತ್ತಿದೆ.

ಹೆಚ್ಚುವರಿ ವಿದ್ಯಾರ್ಥಿಗಳು

ಸದ್ಯ ಇರುವ ವಸತಿ ನಿಲಯಗಳಲ್ಲಿ ನಾಲ್ಕು ಅಥವಾ ಐದು ವಿದ್ಯಾರ್ಥಿಗಳಿಗೆ ಮೀಸಲಾದ ಕೊಠಡಿಗಳಲ್ಲಿ ರಾಜಕಾರಣಿಗಳ, ಸಮುದಾಯದ ಒತ್ತಡಕ್ಕೆ ಅಧಿಕಾರಿಗಳು ಏಳೆಂಟು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ಸ್ಥಳಾವಕಾಶ ಕಲ್ಪಿಸುತ್ತಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಸರಿಯಾಗಿ ಸೌಲಭ್ಯಗಳನ್ನು ಕೊಡಲಾಗದೇ ಅಧಿಕಾರಿಗಳು ಪರದಾಡುವಂತಾಗಿದೆ.

ಸಾಮರ್ಥ್ಯ ಹೆಚ್ಚಲಿ

ಧಾರವಾಡದಲ್ಲಿ ಅನೇಕ ವಿಶ್ವವಿದ್ಯಾಲಯಗಳು, ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಿದ್ದು, ವಸತಿ ನಿಲಯಗಳ ತೀವ್ರ ಬಿಕ್ಕಟ್ಟಿದ್ದು, ವಿದ್ಯಾರ್ಥಿಗಳ ಹೆಚ್ಚಳಕ್ಕೆ ಅನುಗುಣವಾಗಿ ಹಾಸ್ಟೆಲ್ ಸಾಮರ್ಥ್ಯ ಹೆಚ್ಚಿಸಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಅನೇಕ ಬಾರಿ ಧ್ವನಿ ಎತ್ತಿವೆ. ದೊಡ್ಡ ಮಟ್ಟದ ಹೋರಾಟಗಳು ಆಗಿವೆ. ಆದರೆ, ಪ್ರಯೋಜನವಾಗುತ್ತಿಲ್ಲ. ದುರದೃಷ್ಟವಶಾತ್ ಸರ್ಕಾರ ನಿಜವಾದ ಅವಶ್ಯಕತೆಯ ಶೇ.10-15ರಷ್ಟು ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದು ಎಐಡಿಎಸ್ಒ ನಾಯಕರಾದ ಶಶಿಕಲಾ ಮೇಟಿ ಹೇಳುತ್ತಾರೆ.

ಉತ್ತಮ ಫಲಿತಾಂಶ ಬಂದರೂ ನನಗೆ ಹಾಸ್ಟೇಲ್‌ ಸಿಗಲಿಲ್ಲ. ಎರಡ್ಮೂರು ತಿಂಗಳು ಖಾಸಗಿ ಪಿಜಿ ಕೊಠಡಿಗೆ ಹಣ ವ್ಯವಸ್ಥೆ ಮಾಡಿದ್ದು, ನಂತರದಲ್ಲಿ ಅದು ಸಾಧ್ಯವಾಗದೇ, ಪೋಷಕರು ಈಗ ನನ್ನನ್ನು ಮನೆಗೆ ಹಿಂತಿರುಗಿ ಕಾರ್ಖಾನೆಯಲ್ಲಿ ಕೆಲಸ ಮಾಡುವಂತೆ ಕೇಳುತ್ತಿದ್ದಾರೆ ಎಂದು ಹಾವೇರಿ ವಿದ್ಯಾರ್ಥಿ ಅರವಿಂದ ಎಂಬಾತ ತನ್ನ ಸಂಕಷ್ಟ ಹೇಳಿಕೊಂಡನು.

ಶೈಕ್ಷಣಿಕ ಕೇಂದ್ರಗಳಾಗಿ ಮಾರ್ಪಟ್ಟಿರುವ ಧಾರವಾಡ, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ನಗರಗಳು ಸ್ವಾಭಾವಿಕವಾಗಿ ಇತರ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಆದಾಗ್ಯೂ, ಸರ್ಕಾರಿ ಹಾಸ್ಟೆಲ್ ಸೀಟುಗಳು ತಲುಪಲು ಸಾಧ್ಯವಾಗದ ಕಾರಣ, ಅನೇಕರು ದುಬಾರಿ ಖಾಸಗಿ ಹಾಸ್ಟೆಲ್‌ಗಳು ಮತ್ತು ಪಿಜಿ ವಸತಿ ಸೌಕರ್ಯಗಳಿಗೆ ವಿದ್ಯಾರ್ಥಿಗಳು ಮೊರೆ ಹೋಗಬೇಕಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ವೆಚ್ಚ ಭರಿಸಲಾಗದೆ, ಕೆಲವು ವಿದ್ಯಾರ್ಥಿಗಳು ಓದು ನಿಲ್ಲಿಸಿದ ಉದಾಹರಣೆಗಳೂ ಇವೆ.

ಹೊಸ ಹಾಸ್ಟೆಲ್‌ ಬರಲಿ

ಧಾರವಾಡದಂತಹ ಕೆಲವು ಪ್ರಮುಖ ನಗರಗಳು ಮಾತ್ರ ಪದವಿ, ನರ್ಸಿಂಗ್, ತಾಂತ್ರಿಕ, ವೈದ್ಯಕೀಯ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತಿವೆ. ಹೀಗಾಗಿ, ಪ್ರತಿ ವರ್ಷ, ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಈ ನಗರಗಳಿಗೆ ಸೇರುತ್ತಿದ್ದಾರೆ. ಪ್ರತಿ ವರ್ಷ ಧಾರವಾಡದಂತಹ ಶೈಕ್ಷಣಿಕ ನಗರಗಳಿಗೆ ಹೊಸ ವಸತಿ ನಿಲಯಗಳನ್ನು ನಿರ್ಮಿಸುವ ಅಗತ್ಯತೆ ಹೆಚ್ಚಿದೆ.ಪ್ರಸ್ತಾವನೆ

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಹಾಸ್ಟೆಲ್ ಸೀಟುಗಳಿಗೆ ಬೇಡಿಕೆ ವಿಪರೀತ ಇದೆ. ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸೀಟುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಿಸಿಎಂ ಹಾಸ್ಟೆಲ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ 28 ಹೊಸ ಹಾಸ್ಟೆಲ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಬಿಸಿಎಂ ಅಧಿಕಾರಿ ಎಚ್‌. ಭಾನುಮತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ