ಕನ್ನಡಪ್ರಭ ವಾರ್ತೆ ಪೊನ್ನಂಪೇಟೆಕಳೆದ 5 ದಿನಗಳಿಂದ ಬಿಟ್ಟಗಾಲ ಸಮೀಪದ ವಿ. ಬಾಡಗದಲ್ಲಿ ನಡೆಯುತ್ತಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೈಯರ್ಸ್ ಕಪ್-2023ರಲ್ಲಿ ಬಲಿಷ್ಠ ಚೇಂದಿರ ತಂಡ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಫೈನಲ್ನಲ್ಲಿ ಚೇಂದಿರ ತಂಡವು ಕೊಂಗಂಡ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ವಿಜಯದ ಪತಾಕೆ ಹಾರಿಸಿತು.ಪಂದ್ಯದ ಆರಂಭದಿಂದಲೇ ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಹುಮ್ಮಸ್ಸಿನಿಂದ ಆಟ ಆರಂಭಿಸಿದ ಚೇಂದಿರ ತಂಡದ ಆಟಗಾರರು ಆಕ್ರಮಣಕಾರಿ ಆಟವನ್ನಾಡಿದರು. ಆಗಿಂದಾಗೆ ಎದುರಾಳಿಗಳ ಡಿ ಆವರಣದೊಳಗೆ ದಾಳಿ ನಡೆಸುತ್ತಿತ್ತು. ಈ ವೇಳೆ ಚೇಂದಿರ ತಂಡಕ್ಕೆ ದೊರೆತ ಉತ್ತಮ ಪಾಸ್ ಅನ್ನು ಬಳಸಿಕೊಂಡ ತಂಡದ ಅತಿಥಿ ಆಟಗಾರ ಧನುಷ್ 6ನೇ ನಿಮಿಷದಲ್ಲಿ ಮೊದಲನೇ ಫೀಲ್ಡ್ ಗೋಲು ದಾಖಲಿಸಿದರು. ಬಳಿಕ ಆಟದ ವೇಗವನ್ನು ಇನ್ನಷ್ಟು ಹೆಚ್ಚಿಸಿದ ಚೇಂದಿರ ತಂಡದ ಆಟಗಾರರು ಹಲವಾರು ಬಾರಿ ಗೋಲು ಗಳಿಸುವ ಯತ್ನ ಮುಂದುವರಿಸಿದಾಗ ಕೊಂಗಂಡ ತಂಡದ ರಕ್ಷಣಾತ್ಮಕವಾದ ಆಟ ಸಾಕಷ್ಟು ಗೋಲುಗಳಿಗೆ ತಡೆಯೊಡ್ಡಿತು.ಗೋಲು ಬಾರಿಸಿ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿದ್ದ ಕೊಂಗಂಡ ತಂಡ ಬಹಳಷ್ಟು ಬಾರಿ ಎದುರಾಳಿ ತಂಡದ ಡಿ ಆವರಣದೊಳಗೆ ದಾಳಿ ನಡೆಸಿದರೂ ಚೇಂದಿರ ತಂಡದ ಗೋಲ್ ಕೀಪರ್ ತಡೆಗೋಡೆಯಂತೆ ನಿಂತು ಚೆಂಡನ್ನು ತಡೆಯುತ್ತಿದ್ದರು. 2ನೇ ಕ್ವಾರ್ಟರ್ ಅವಧಿ ಆರಂಭಗೊಳ್ಳುತ್ತಿದ್ದಂತೆ ಚೇಂದಿರ ತಂಡದ ಅತಿಥಿ ಆಟಗಾರ ಮಂಜುನಾಥ್ 37ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಅಂತರವನ್ನು ಹೆಚ್ಚಿಸಿದರು. ಬಳಿಕ ಗೋಲು ಗಳಿಸುವ ಪ್ರಯತ್ನಗಳನ್ನು ಉಭಯ ತಂಡಗಳ ಆಟಗಾರರು ನಿರಂತರವಾಗಿ ಮಾಡುತ್ತಿದ್ದರೂ, ಎರಡೂ ತಂಡಗಳ ಆಟಗಾರರ ಸಂಘಟಿತವಾದ ಶ್ರಮದಿಂದಾಗಿ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ವೇಳೆ ಕೊಂಗಂಡ ತಂಡಕ್ಕೆ 6 ಮತ್ತು ಚೇಂದಿರ ತಂಡಕ್ಕೆ 4 ಪೆನಾಲ್ಟಿ ಕಾರ್ನರ್ ದೊರೆತರೂ ಯಾವುದೇ ಗೋಲುಗಳು ತಂಡಗಳ ಪಾಲಾಗಲಿಲ್ಲ. ಕಳೆದ ಬಾರಿಯಂತೆ ಫೈನಲ್ ಪ್ರವೇಶಿಸಿದ್ದ ಕೊಂಗಂಡ ತಂಡ ಈ ಬಾರಿ ಚಾಂಪಿಯನ್ ಪಟ್ಟಕ್ಕಾಗಿ ನಡೆಸಿದ ಹೋರಾಟ ಕೊನೆಗೂ ಫಲ ನೀಡಲಿಲ್ಲ.ಚಂದೂರ ತಂಡಕ್ಕೆ 3ನೇ ಸ್ಥಾನಸೆಮಿಫೈನಲ್ನಲ್ಲಿ ಪರಾಭವಗೊಂಡ ಚಂದೂರ ಮತ್ತು ಕರ್ತಮಾಡ ಕುಟುಂಬ ತಂಡಗಳ ನಡುವೆ ಶನಿವಾರ ಬೆಳಗ್ಗೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚಂದೂರ ತಂಡವು ಕರ್ತಮಾಡ ತಂಡವನ್ನು 7-1 ಗೋಲುಗಳಿಂದ ಮಣಿಸಿತು. ಹ್ಯಾಟ್ರಿಕ್ ಸಾಧನೆಯೊಂದಿಗೆ 6 ಗೋಲುಗಳನ್ನು ಬಾರಿಸಿದ ಚಂದೂರ ತಂಡದ ಅತಿಥಿ ಆಟಗಾರ ಚಿರನ್ ಮೇದಪ್ಪ ಪಂದ್ಯದುದ್ದಕ್ಕೂ ಗಮನ ಸೆಳೆದರು. 11ನೇ, 21ನೇ, 25ನೇ, 28ನೇ, 38ನೇ ಮತ್ತು 42ನೇ ನಿಮಿಷದಲ್ಲಿ ಚಿರನ್ ಮೇದಪ್ಪ ಗೋಲು ದಾಖಲಿಸಿದರೆ, 38ನೇ ನಿಮಿಷದಲ್ಲಿ ಸೋಹನ್ ಗೋಲು ಬಾರಿಸಿದರು. ಪರಾಜಿತ ಕರ್ತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಬೆಳ್ಯಪ್ಪ 13ನೇ ನಿಮಿಷದಲ್ಲಿ ಗೋಲು ಹೊಡೆದರು. ಈ ಪಂದ್ಯವನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ಸಂತು ಕುಮಾರ್, ಹಾಕಿ ಕೂರ್ಗ್ ಕಾರ್ಯದರ್ಶಿ ಚೇತನ್, ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಆಟಗಾರರನ್ನು ಪರಿಚಯಿಸುವುದರ ಮೂಲಕ ಉದ್ಘಾಟಿಸಿದರು. ವಿಜೇತ ಮೂರೂ ತಂಡಗಳಿಗೂ ನಗದು ಬಹುಮಾನದೊಂದಿಗೆ ಶುದ್ಧ ಬೆಳ್ಳಿಯ ಹಾಕಿ ಸ್ಟಿಕ್ ಮತ್ತು ಚೆಂಡನ್ನು ಒಳಗೊಂಡ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.
* ವೈಯಕ್ತಿಕ ಪ್ರಶಸ್ತಿಪಂದ್ಯಾವಳಿಯ ವಿವಿಧ 8 ವಿಭಾಗಗಳ ವಿಶೇಷ ಪುರಸ್ಕಾರಗಳು ಘೋಷಣೆ ಮಾಡಲಾಯಿತು. ಪಂದ್ಯಾವಳಿಯ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೊಂಗಂಡ ತಂಡದ ಅತಿಥಿ ಆಟಗಾರ ಮುಕ್ಕಾಟಿರ ಹೇಮಂತ್ ಚಂಗಪ್ಪ, ಅತ್ಯುತ್ತಮ ಹಾಫ್ ಆಟಗಾರ ಪ್ರಶಸ್ತಿಯನ್ನು ಕರ್ತಮಾಡ ತಂಡದ ಅತಿಥಿ ಆಟಗಾರ ಅನ್ನಡಿಯಂಡ ಪೊನ್ನಣ್ಣ, ಅತ್ಯುತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಕೊಂಗಂಡ ತಂಡದ ಅತಿಥಿ ಆಟಗಾರ ಐನಂಡ ನಾಚಪ್ಪ, ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚೇಂದಿರ ತಂಡದ ಜೀವನ್, ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಅಮ್ಮಣಿಚಂಡ ತಂಡದ ಅತಿಥಿ ಆಟಗಾರ ಚೆಪ್ಪುಡೀರ ದಿವಾನ್ ಮುತ್ತಪ್ಪ, ಅತ್ಯುತ್ತಮ ಕಿರಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಕರ್ತಮಾಡ ತಂಡದ ಅತಿಥಿ ಆಟಗಾರ ಐಯ್ಯನೆರವಂಡ ತನುಷ್ ನಾಚಪ್ಪ ಪಡೆದುಕೊಂಡರೆ, ಅತ್ಯುತ್ತಮ ಶಿಸ್ತುಬದ್ಧ ತಂಡದ ಪ್ರಶಸ್ತಿಯನ್ನು ಕೋಲತಂಡ ತಂಡ ಪಡೆದುಕೊಂಡಿತು. ಅಲ್ಲದೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಕೀರ್ತಿಗೆ ಚಂದೂರ ತಂಡದ ಅತಿಥಿ ಆಟಗಾರ ಮೇಚಂಡ ಚಿರನ್ ಮೇದಪ್ಪ ಪಾತ್ರರಾದರು.ಫೈನಲ್ನಲ್ಲಿ ಪಂದ್ಯಾವಳಿ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ನೆಲ್ಲಮಕ್ಕಡ ಪವನ್ ಮತ್ತು ಮೂಕಚಂಡ ನಿರನ್ ನಾಚಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ಲೋಕೇಶ್ ನಂಜಪ್ಪ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.ಪಂದ್ಯಾವಳಿಯ ಹೈಲೈಟ್ಸ್ಒಟ್ಟು ಪಂದ್ಯಗಳು 17ಭಾಗವಹಿಸಿದ ಒಟ್ಟು ಆಟಗಾರರು 306
ಒಟ್ಟು ದಾಖಲಾದ ಗೋಲುಗಳು 87ಆಟಗಾರರಿಗೆ ತೋರಿಸಲ್ಪಟ್ಟ ಹಳದಿ ಬಿಲ್ಲೆ 2
ಆಟಗಾರಿಗೆ ತೋರಿಸಲ್ಪಟ್ಟ ಹಸಿರು ಬಿಲ್ಲೆ 11