ಹಿಂದೂ-ಮುಸ್ಲಿಂ ಸೌಹಾರ್ದತೆ ಅಗತ್ಯ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork | Published : Mar 4, 2025 12:30 AM

ಸಾರಾಂಶ

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ದೇಶಕ್ಕೆ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ದೇಶಕ್ಕೆ ಅಗತ್ಯವಿದೆ ಎಂದು ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಎಎಂಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್, ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್, ಕಾಳಿಕಾದೇವಿ ಜೀರ್ಣೋದ್ಧಾರ ಸೇವಾ ಸಮಿತಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ-ಮುಸ್ಲಿಂ ಧರ್ಮದ ಸಾಮೂಹಿಕ ಮದುವೆಗಳು ನಡೆದಿರುವುದು ಉತ್ತಮ ಬೆಳವಣಿಗೆ. ಅನ್ನ ನೀಡುವ ರೈತ,

ರಾಷ್ಟ್ರ ಕಟ್ಟುವ ಶಿಕ್ಷಕ, ದೇಶ ಕಾಯುವ ಸೈನಿಕ ಮೂವರಿಗೆ ಗೌರವ ಸನ್ಮಾನ ಶ್ಲಾಘನೀಯ ಎಂದರು.

ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಸಾಮೂಹಿಕ ಮದುವೆಗಳು ಬಡವರಿಗೆ ಅನುಕೂಲ ಆಗುತ್ತವೆ. ಇಂತಹ ಕಾರ್ಯಕ್ರಮಗಳು ಟ್ರಸ್ಟ್‌ ಮೂಲಕ ನಿರಂತರವಾಗಿ ಜರುಗಲಿ ಎಂದರು.

ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಡಾ. ಹಿರಿಶಾಂತವೀರ ಸ್ವಾಮೀಜಿ, ಅಭಿನವ ಚನ್ನಬಸವ ಸ್ವಾಮೀಜಿ, ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಜಿ.ಎಂ. ಚಂದ್ರಶೇಖರಯ್ಯ ವಿವಾಹ ಮಹತ್ವ, ಸಹಬಾಳ್ವೆ ಕುರಿತು ಉಪನ್ಯಾಸ ನೀಡಿದರು. ಆರು ಜೋಡಿಗಳು ಉಚಿತ ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದರು.

ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಹಣ್ಣಿ ಕೈಲಾಸನಾಥ, ಎಸ್.ಎಂ. ಅಶೋಕ, ಕೋಡಿಹಳ್ಳಿ ಕೊಟ್ರೇಶ, ಎಲ್.ಶಿವರಾಜ,

ಡಾ. ಶಿವಕುಮಾರ್ ಬಿ., ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರವಿ, ಮೋಹಿದ್ದೀನ್ ಇತರರು ಉಪಸ್ಥಿತರಿದ್ದರು.

ಎ.ಎಂ.ಪಿ. ವಾಗೀಶ್ ಪ್ರಾಸ್ತಾವಿಕ ಮಾತನಾಡಿದರು. ಹಕ್ಕಂಡಿ ಮಹಾದೇವಪ್ಪ, ಶಿಕ್ಷಕ ಸುರೇಶ ಅಂಗಡಿ, ಸಮಾಜ ಸೇವಕ ನಾಗರಾಜ ಗದ್ದಿಕೇರಿ ಅವರನ್ನು ಸನ್ಮಾನಿಸಲಾಯಿತು.

ಜೀ ಕನ್ನಡ ಸರಿಗಮ ಖ್ಯಾತಿಯ ಶ್ರೀರಾಮ್ ಕಾಸರ, ಕನ್ನಡ ಕಿರುತರೆ ನಟಿ ರಂಜಿನಿ ರಾಘವನ್ ಸಂಗಡಿಗರ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನ ಸೊರೆಗೊಂಡಿತು.

ಯುವರಾಜ್ ಗೌಡ್ರು, ದ್ವಾರಕೀಶ್ ರೆಡ್ಡಿ, ಎಎಂಪಿ ಸಂದೀಪ್, ಶೃತಿ ಕೆ., ನಾಗವೇಣಿ ನಿರ್ವಹಿಸಿದರು.

Share this article