ಭಟ್ಕಳ: ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ಸಿಲುಕಿಕೊಂಡವರ ಮೇಲೆ ಗೋಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಹಿಂದೂ ಜಾಗರಣಾ ವೇದಿಕೆಯಿಂದ ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಭಟ್ಕಳ ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆಗೆ ಪರೋಕ್ಷವಾಗಿ ಸಹಕರಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ತರುತ್ತಿರುವುದು ಖಂಡನೀಯ. ತಾಲೂಕಿನ ಚೆಕ್ ಪೋಸ್ಟ್ಗಳನ್ನು ಬಿಗುಗೊಳಿಸಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಸಾಕಿದ ಗೋವುಗಳನ್ನು ಕಳುವು ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕು ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಅಕ್ರಮ ಗೋಸಾಗಾಟ ಮತ್ತು ಗೋ ಹತ್ಯೆಗೆ ಕಡಿವಾಣ ಹಾಕುವಲ್ಲಿ ಮುಂದಾಗಬೇಕು. ಗೋ ಸಾಗಾಟ ಮತ್ತು ಗೋ ಹತ್ಯೆ ಮಾಡುವ ಆರೋಪಿಗಳ ಮೇಲೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ನಿರ್ಧಾಕ್ಷಿಣ್ಯವಾಗಿ ಬಂಧಿಸಬೇಕು. ಗೋ ಸಾಗಾಟಗಾರರ ಮತ್ತು ಗೋ ಹಂತಕರ ಮೇಲೆ ಸಮರ್ಪಕ ಪ್ರಕರಣ ದಾಖಲಿಸದೇ ಬಂಧಿಸದೇ ಇದ್ದಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ತಿಳಿಸಲಾಗಿದೆ.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಪ್ರವೀಣ ಮನವಿ ಸ್ವೀಕಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಜಯಂತ ನಾಯ್ಕ ಬೆಣಂದೂರು, ಪ್ರಮುಖರಾದ ನಾಗೇಂದ್ರ ನಾಯ್ಕ, ಕುಮಾರ ನಾಯ್ಕ ಹನುಮಾನ ನಗರ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮುಂತಾದವರಿದ್ದರು.ಭಟ್ಕಳದ ಹಿಂದೂ ಜಾಗರಣ ವೇದಿಕೆಯಿಂದ ಗೋ ಸಾಗಾಟ ಮತ್ತು ಗೋಹತ್ಯೆಗೆ ಕಡಿವಾಣ ಹಾಕುವಂತೆ ಶಿರಸ್ತೇದಾರರ ಮೂಲಕ ಎಸಿಗೆ ಮನವಿ ಸಲ್ಲಿಸಲಾಯಿತು.