ನುಡಿಜಾತ್ರೆ ನಡೆಸಲು ಹಿರೇಮನ್ನಾಪೂರ ಗ್ರಾಮಸ್ಥರು ಸಜ್ಜು

KannadaprabhaNewsNetwork |  
Published : May 28, 2026, 02:15 AM IST
ಪೋಟೊ27ಕೆಎಸಟಿ1: ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರು ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ 14ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಕಲಾವಿದರ ತವರೂರು ಎನಿಸಿಕೊಂಡಿರುವ ಹಿರೇಮನ್ನಾಪೂರು ಗ್ರಾಮಸ್ಥರು ಎರಡು ದಶಕಗಳ ಹಿಂದೆ (2006ರಲ್ಲಿ) ತಾಲೂಕು ಸಮ್ಮೇಳನ ಆಯೋಜಿಸಿ ಯಶಸ್ವಿ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆಯಬೇಕಿದ್ದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ರದ್ದುಗೊಂಡಿರುವ ಬೆನ್ನಲ್ಲೇ ಕಲಾವಿದರ ತವರೂರು ಹಿರೇಮನ್ನಾಪುರ ಗ್ರಾಮಸ್ಥರು ಕೊಪ್ಪಳ ಜಿಲ್ಲಾ ಸಮ್ಮೇಳನ ಆಯೋಜಿಸುವ ಮೂಲಕ ನುಡಿ ತೇರು ಎಳೆಯಲು ಸಿದ್ಧರಾಗಿದ್ದಾರೆ.

ಈ ಮೊದಲು ಕುಷ್ಟಗಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುದೇನೂರು ಗ್ರಾಮದಲ್ಲಿ ಮಾಡಬೇಕೆಂದು ಸಭೆ ನಡೆಸಲಾಗಿತ್ತು. ಆದರೆ ಕುರುಬನಾಳ ಗ್ರಾಮಸ್ಥರು ತಾಲೂಕು ಸಮ್ಮೇಳನ ನಡೆಸಲು ಮುಂದೆ ಬಂದಿರುವ ಹಿನ್ನೆಲೆ ಕಸಾಪ ಪದಾಧಿಕಾರಿಗಳು ಮುದೇನೂರಿನಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಂದಾದರೂ ಅದು ಕೆಲ ಕಾರಣಾಂತರಗಳಿಂದ ರದ್ದುಗೊಳಿಸಿದರು.

ಕಲಾವಿದರ ತವರೂರು ಎನಿಸಿಕೊಂಡಿರುವ ಹಿರೇಮನ್ನಾಪೂರು ಗ್ರಾಮಸ್ಥರು ಎರಡು ದಶಕಗಳ ಹಿಂದೆ (2006ರಲ್ಲಿ) ತಾಲೂಕು ಸಮ್ಮೇಳನ ಆಯೋಜಿಸಿ ಯಶಸ್ವಿ ಮಾಡಿಕೊಟ್ಟಿದ್ದು, ಪ್ರಸ್ತುತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಮುಂದಾಗಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಸಮ್ಮೇಳನದ ನುಡಿಜಾತ್ರೆಯಲ್ಲಿ ಊಟ, ಉಪಹಾರ ನೀಡುವ ಮೂಲಕ ಆತಿಥ್ಯಕ್ಕೆ ಅಣಿಯಾಗಿದ್ದಾರೆ.

ಸಭೆಯಲ್ಲಿ ಅಂತಿಮ ನಿರ್ಣಯ: ಮಂಗಳವಾರ ಸಂಜೆ ಹಿರೇಮನ್ನಾಪೂರು ಗ್ರಾಮದ ಕಾಶಿ ವಿಶ್ವನಾಥ ಹಾಗೂ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಕುರಿತು ಹಿರೇಮನ್ನಾಪೂರ ಗ್ರಾಮಸ್ಥರು ಹಾಗೂ ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸುಮಾರು ಎರಡು ತಾಸು ಸುದೀರ್ಘ ಚರ್ಚೆಯಲ್ಲಿ ಹಿರೇಮನ್ನಾಪೂರ ಗ್ರಾಮಸ್ಥರು ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಮ್ಮೇಳನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಈ ನುಡಿ ಜಾತ್ರೆಯಲ್ಲಿ ಆಗಮಿಸುವ ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಅರ್ಥಪೂರ್ಣ ಆಚರಣೆಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಮಾಜಿ ಜಿಪಂ ಸದಸ್ಯ ದೊಡ್ಡಯ್ಯ ಗದ್ದಡಕಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಶಿವಾನಂದ ಹಿರೇಮಠ, ರವೀಂದ್ರ ಬಾಕಳೆ, ಹನುಮೇಶ ಶೆಟ್ಟರ್ ಗುಮಗೇರಿ, ವೀರಬಸಯ್ಯ ಕಾಡಗಿಮಠ, ಎಸ್.ಜಿ. ಕಡೆಮನಿ, ನಿಂಗಪ್ಪ ಸಜ್ಜನ, ಶರಣಪ್ಪ ಲೈನದ, ಪ್ಯಾಟೆಪ್ಪ ಸೂಡಿ, ಶಿವಪುತ್ರಪ್ಪ ಗುರಿಕಾರ, ದೇವಣ್ಣ ಬಳಿಗಾರ, ಸುರೇಶ ಗೋಟೂರ, ಮಲ್ಲಯ್ಯ ಲೈನದ, ಕೆ ಹುಸೇನಸಾಬ್. ಕೆ.ಇಮಾಮಸಾಬ್, ಪರಸಪ್ಪ ಅಳ್ಳಳ್ಳಿ, ಪುಂಡಲಿಕಪ್ಪ ಬುಡಕುಂಟಿ, ಪ್ರಹ್ಲಾದ್ ದಾಸರ್, ದೊಡ್ಡಬಸಪ್ಪ ಬಂಡಿ, ಗೋಪಾಲ್ ಕಲಾಲ್, ಶಂಕ್ರಪ್ಪ ತೋಟದ, ತಿರುಪತೆಪ್ಪ ಅಕ್ಕಿಹುಗ್ಗಿ, ನಿಂಗಪ್ಪ ಚಾಮಲಾಪುರ, ಜೆ ಪಂಪಣ್ಣ, ಡಾ.ಇಮಾಮಸಾಬ್ ಮದ್ಗಾರ್, ಮಂಜುನಾಥ ಕಜ್ಜಿ, ಗಿರಿಜಾ ಹಿರೇಮಠ, ಜಯದೇವಿ ಹಿರೇಮಠ, ಸುರೇಖಾ ಕಂಪಾಪುರಮಠ, ಗೀತಾ ಕುಷ್ಟಗಿ, ಶಶಿಕಲಾ ಹಸಬಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು, ಯುವಕರು ಸಾಹಿತ್ಯಾಸಕ್ತರು, ಕಲಾವಿದರು, ಗುರುಹಿರಿಯರು ಪಾಲ್ಗೊಂಡಿದ್ದರು.

2006ರಲ್ಲಿ ನಮ್ಮ ಹಿರೇಮನ್ನಾಪೂರು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮಾಡಿಕೊಟ್ಟಿದ್ದು, ಎರಡು ದಶಕಗಳ ನಂತರ ಜಿಲ್ಲಾ ಸಮ್ಮೇಳನ ಆಯೋಜನೆಗೆ ಅವಕಾಶ ಸಿಕ್ಕಿರುವದು ಹೆಮ್ಮೆ ವಿಷಯವಾಗಿದ್ದು, ಅರ್ಥಪೂರ್ಣ ಸಮ್ಮೇಳನಕ್ಕೆ ಮುಂದಾಗುತ್ತೇವೆ ಎಂದು ಗ್ರಾಮದ ಗಣ್ಯರಾದ ದೊಡ್ಡಯ್ಯ ಗದ್ದಡಕಿ ಹಾಗೂ ವೀರಬಸಯ್ಯ ಕಾಡಗಿಮಠ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರೇಮನ್ನಾಪೂರು ಗ್ರಾಮದಲ್ಲಿ ನಡೆಸಲು ಗ್ರಾಮಸ್ಥರ ಸಂಪೂರ್ಣ ಒಪ್ಪಿಗೆ ಮೇರೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದು, ಜೂನ್‌ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಎಂದು ಕುಷ್ಟಗಿ ಕಸಾಪ ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲಿಕಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕ ಗವಿಯಪ್ಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ