ಧಾರವಾಡ:
ಹೋಳಿ ಹಬ್ಬ ಬಣ್ಣದ ಸಂಕೇತ ಮಾತ್ರವಲ್ಲ, ಅದು ಬದುಕಿಗೆ ಬಣ್ಣ ತುಂಬಿ ಸಂತೋಷ ಮೂಡಿಸುವ ಹಬ್ಬವಾಗಿದೆ. ಪ್ರತಿಯೊಬ್ಬರಲ್ಲಿ ಇರುವ ಕೆಟ್ಟದನ್ನು ಕಳೆದು, ಒಳ್ಳೆಯದನ್ನು ಪಡೆದುಕೊಳ್ಳುವ ಸಂದರ್ಭ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕವು ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯರ ಪ್ರತಿ ಹಬ್ಬಗಳಿಗೆ ಐತಿಹಾಸಿಕ ಕಾರಣ, ಹಿನ್ನೋಟ, ಮುನ್ನೋಟಗಳಿವೆ. ಕಾಮದಹನ ಕೆಟ್ಟದನ್ನು ಸುಡುವ ಪ್ರತೀಕ. ಬಣ್ಣ ಹಚ್ಚಿಕೊಳ್ಳುವುದು ಉತ್ತಮ ಗುಣಗಳೊಂದಿಗೆ ಹೊಸ ಭವಿಷ್ಯ ಕಟ್ಟಿಕೊಳ್ಳುವ ಪ್ರತೀಕವಾಗಿದೆ. ಹೋಳಿ ಹಬ್ಬವನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡದಲ್ಲಿ ಹಾಡುಗಳನ್ನು ಹೇಳಿ ಆಚರಣೆ ಮಾಡುತ್ತಿರುವುದು ವಿಶೇಷ ಎಂದ ಅವರು, ಈ ಹಬ್ಬದಲ್ಲಿ ಬಣ್ಣ ಹಚ್ಚುವವರನ್ನು ಕಂಡರೆ ಓಡಬೇಡಿ, ಬಣ್ಣ ಬದಲಿಸುವವರನ್ನು ಕಂಡರೆ ದೂರ ಇರಿ ಎಂಬ ಸಲಹೆ ನೀಡಿದರು.ಹಬ್ಬದ ಸಡಗರ ಸಂಭ್ರಮದಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿ, ಮಹಿಳಾ ಅಧಿಕಾರಿಗಳಿಗೆ, ಮಕ್ಕಳಿಗೆ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದ ಸಂದರ್ಭ ಸವಿದರು. ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪದಾಧಿಕಾರಿಗಳಾದ ಮಂಜುನಾಥ ಯಡಹಳ್ಳಿ, ರಾಜಶೇಖರ ಬಾಣದ, ಡಿಎಚ್ಒ ಡಾ.ಶಶಿ ಪಾಟೀಲ, ಜಿಲ್ಲಾ ಆರ್ಸಿಎಚ್ಒ ಅಧಿಕಾರಿ ಡಾ. ಸುಜಾತಾ ಹಸವಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಇದ್ದರು. ಜಾನಪದ ಕಲಾ ತಂಡಗಳಾದ ಸ್ನೇಹ ರಂಗ ಕಲಾ ಬಳಗ ಮತ್ತು ಸಿರಿಗಂಧ ಕಲಾ ತಂಡಗಳು ಜಾನಪದ ಗೀತೆ ಹಾಗೂ ಹೋಳಿ ಹಬ್ಬದ ಹಾಡು ಹಾಗೂ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರು ಹಾಸ್ಯಮಯ ಪ್ರಸಂಗಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು.