ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಯಲ್ಲಿನ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ದೇವಾಲಯವು ಮೇ 21ರಂದು ಲೋಕಾರ್ಪಣೆಗೊಳ್ಳಲಿದೆ.ನೂತನ ದೇವಾಲಯದ ಉದ್ಘಾಟನೆ ಮತ್ತು ಆಶೀರ್ವಚನವನ್ನು ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಡಾ. ಬರ್ನಾಡ್ ಮೊರಾಸ್ ನೆರವೇರಿಸಲಿದ್ದು, ಅತೀ ವಂ. ಗುರುಗಳಾದ ಮೈಸೂರು ಧರ್ಮಾಕ್ಷೇತ್ರದ ಜಾನ್ ಅಲ್ಬರ್ಡ್ ಮೆಂಡೋನ್ಸಾ ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಜಾರ್ಜ್ ದೀಪಕ್ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿಗಳಾದ ದಿವಾಕರ್ ಎಂ., ಲಕ್ಷ್ಮೀ ಎಸ್ಟೇಟ್ ಮಾಲೀಕರಾದ ಕೋಗಂಡ ವಿನಯ್ಸೋಮಯ್ಯ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿದ್ದಪ್ಪ, ಉಪಾಧ್ಯಕ್ಷರಾದ ಸುರೇಶ್, ಸದಸ್ಯರಾದ ಅಂತೋಣಿ ಪಿ.ಡಿ.ಜೆರ್ಮಿ, ದಮಯಂತಿ ಪಾಲ್ಗೊಳ್ಳಲಿದ್ದಾರೆ.ಮಡಿಕೇರಿ ವಲಯಾದ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದು ಕಾಣುತ್ತಿರುವ ಭವ್ಯ ದಿವ್ಯ ನವೀನ ದೇವಾಲಯಕ್ಕೆ 10 ಹಲವು ಧರ್ಮಗುರುಗಳು ಕನ್ಯಾಸ್ತ್ರೀಯರು ಮತ್ತು ಭಕ್ತರ ತ್ಯಾಗ ಪರಿಶ್ರಮ ಮತ್ತು ಭಕ್ತಿಯ ಸಮರ್ಪಣೆ ಇದೆ.
ಜೆವಿಪ್ರಭು ಧರ್ಮಗುರುಗಳಿಂದ ಪ್ರಾರಂಭಗೊಂಡ ನೂತನ ದೇವಾಲಯದ ಕಟ್ಟಡ ಕನಸು ಪ್ರಸ್ತುತ ಧರ್ಮಗರುಗಳಾದ ರಾಜೇಶ್ ಅವರ ಕಾಲದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಹಳ್ಳಕೊಳಗಳಿಂದ ಕಚ್ಚ ರಸ್ತೆಯಲ್ಲಿ ಸೈಕಲ್ನಲ್ಲಿ ಓಡಾಡಿ ಧರ್ಮಗುರು ಅಲ್ಬರ್ಟ್ ಮಂಡೋನ್ಸಾ ಗೊನ್ಸಾವೆಲ್ಸ್ ಒಂದು ಪುಟ್ಟದಾದ ಧರ್ಮಕುಟ್ಟಿರವನ್ನು ನಿರ್ಮಿಸಿದರು.ಈ ದೇವಾಲಯದ ಧರ್ಮಗುರುಗಳಾಗಿ ವಂ.ರೆ.ಫಾದರ್ ರಾಜೇಶ್ ಅವರು 6 ವರ್ಷಗಳ ಹಿಂದೆ ಈ ದೇವಾಲಯದ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿಕೊಂಡರು. ಹಿಂದಿನ ಧರ್ಮಗುರುಗಳಾದ ರೇ.ಫಾ.ಸಂತೋಷ್ ಕಾಲಕ್ರಮೇಣ ಸಮುದಾಯದ ಕುಟುಂಬಗಳ ದ್ವಿಗುಣಗೊಳ್ಳುತ್ತಿರುವುದನ್ನು ಮನಗಂಡ ಅವರು ದೇವಾಲಯದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಅನಿವಾರ್ಯವಾಗಿದ್ದು, ಕಂಡುಕೊಂಡ ಅವರು ಹಾಗೂ ಶಿಷ್ಯ ವರ್ಗದವರೊಂದಿಗೆ ಚರ್ಚಿಸಿದಾಗ ದೇವಾಲಯದ ಅಭಿವೃದ್ಧಿ ಮತ್ತು ವಿಸ್ತರಣೆ ಕುರಿತು ಒಮ್ಮತದ ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಮಡಿಕೇರಿ ವಲಯ ಮುಖ್ಯಸ್ಥರ ಮೂಲಕ ಮೈಸೂರು ಧರ್ಮಕ್ಷೇತ್ರಕ್ಕೆ ವಿವರವಾದ ನೀಲಿನಕ್ಷೆಯನ್ನು ತಯಾರಿಸಿ ಕಳುಹಿಸಿಕೊಡಲಾಯಿತು. ಅಲ್ಲಿಂದ ಬಂದ ಆದೇಶದ ಪ್ರಕಾರ ದೇವಾಲಯವನ್ನು 22-08-2017 ರಲ್ಲಿ ನೂತನ ದೇವಾಲಯ ನಿರ್ಮಿಸುವ ಕಾರ್ಯಕ್ಕೆ ರೇ.ಫಾ.ಸಂತೋಷ್ ಆರಂಭಿಸಿ ತಳಪಾಯದ ಕಾರ್ಯವನ್ನು ನಿರ್ವಹಿಸಿದರು. ನಂತರದ ದಿನಗಳಲ್ಲಿ 2018 ರಲ್ಲಿ ವಂ.ರೆ.ಫಾದರ್ ರಾಜೇಶ್ ಅವರು ಆಗಮಿಸಿ ಅಭಿವೃದ್ಧಿ ಮತ್ತು ವಿಸ್ತರಣೆ ಕಾರ್ಯವನ್ನು ಮುಂದುವರೆಸಿ ಇದೀಗ ಪವಿತ್ರ ಕುಟುಂಬ ದೇವಾಲಯದ ಸದಸ್ಯರು ಮತ್ತು ಭಕ್ತರು ಶಿಷ್ಯ ವರ್ಗದವರ ಅಪಾರ ಪರಿಶ್ರಮ ದೇಣಿಗೆ ಮತ್ತು ಪ್ರಾರ್ಥನೆಗಳಿಂದ ನಾವಿಂದು ಕಾಣುತ್ತಿರುವ ನೂತನ ಕಟ್ಟಡ ಲೋಕಾರ್ಪಣೆಗೆ ಸಿದ್ಧವಾಗಿದ್ದು ಧರ್ಮಗುರುಗಳ ಆಶೀರ್ವಚನ ಮತ್ತು ನಿರಂತರ ಶ್ರದ್ಧಾ ಭಕ್ತಿಯ ಪೂಜೆಗೆ ಬಳಕೆಯಾಗಲಿದೆ. ದೇವಾಲಯಕ್ಕೆ ಸರ್ಕಾರದಿಂದ 25 ಲಕ್ಷ ರು. ಅನುದಾನ ಹಾಗೂ ದಾನಿಗಳು, ಭಕ್ತಾದಿಗಳಿಂದ ನೆರವು ದೊರೆತಿದ್ದು 1 ಕೋಟಿ ರು. ಗೂ ಮಿಕ್ಕಿ ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಧರ್ಮಗುರು ರಾಜೇಶ್ ಸಂತಸ ಹಂಚಿಕೊಂಡರು.
ದೇವಾಲಯದಲ್ಲಿ ಅತ್ಯಂತ ಆಕರ್ಷಣಿಯವಾಗಿ ಕಸೂರಿ ಕೆಲಸಗಳಿಂದ ಕೂಡಿದ ಪೂಜ್ಯಬಲಿಪೀಠ ಪ್ರಭುಕ್ರಿಸ್ತರ ಪ್ರರಮಪ್ರಸಾದ ಪೆಟ್ಟಿಗೆ ಸೇರಿದಂತೆ ಪ್ರಭುಕ್ರಿಸ್ತರ ಮಾನವರ ರಕ್ಷಣೆಗಾಗಿ ಶಿಲುಬೆಯ ಮೇಲೆ ಮರಣಹೊಂದಿರುವ ಪ್ರತಿಮೆ, ಪ್ರಭುಕ್ರಿಸ್ತರ ಸಾಕು ತಂದೆ ಜೋಸೆಫ್ ಹಾಗೂ ತಾಯಿ ಮರಿಯಮ್ಮನವರ ಪವಿತ್ರ ಕುಟುಂಬದ ಪ್ರತಿಮೆಗಳು ಹಾಗೂ ವಿವಿಧ ಸಂತರ ಸೆಬಾಸ್ಟೀನ್, ಅಂತೋಣಿ ಮತ್ತಿತರರ ಪ್ರತಿಮೆಗಳನ್ನು ಅಳವಡಿಸಲಾಗಿದೆ. ಹೊರಾಂಗಣವನ್ನು ಸುಮಾರು 70 ಅಡಿ ಎತ್ತರದ ಗೋಪುರವನ್ನು ನಿರ್ಮಿಸಲಾಗಿದ್ದು ಪ್ರಭುಕ್ರಿಸ್ತರ ಪ್ರತಿಮೆಯನ್ನು ಮೇಲ್ಬಾಗದಲ್ಲಿ ಅಳವಡಿಸಿದ್ದು, ದೇವಾಲಯವು ಅತ್ಯಂತ ಆಕರ್ಷಕವಾಗಿ ಭಕ್ತರನ್ನು ತನ್ನಡೆಗೆ ಆಕರ್ಷಿಸುತ್ತಿದೆ.ಅಂದಿನಿಂದ ನಿರಂತರವಾಗಿ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯ ಹಗಲು ರಾತ್ರಿ ಎನ್ನದೆ ವಂದನೀಯ ಧರ್ಮಗುರುಗಳು ಸೇರಿದಂತೆ ಜಾನಿಸಿಕ್ವೇರಾ, ಪ್ರವೀಣ್ ಡಿಸೋಜ, ನವೀನ್ ಡಿಸೋಜ, ಜಾನ್ ಪೀಂಠೋ ಸೇರಿದಂತೆ ಹಲವರು ಮಂದಿ ಶ್ರಮವಹಿಸಿ ಕಾರ್ಯವನ್ನು ನಿರ್ವಹಿಸಿದ್ದಾರೆ ಎಂದು ಧರ್ಮಗುರು ರಾಜೇಶ್ ತಿಳಿಸಿದರು.