ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಗೃಹ ರಕ್ಷಕ ಸಿಬ್ಬಂದಿಯು ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರ್ಟಿಒ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಜತೆಗೆ ಆಯಾ ಇಲಾಖೆಗಳ ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಾರೆ. ತುರ್ತು ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಪ್ರಾಣ ರಕ್ಷಣೆಗೆ ಮುಂದಾಗುತ್ತಾರೆ ಎಂದು ವೃತ್ತ ನಿರೀಕ್ಷಕ ಪ್ರದೀಪ್ ಬಿ.ಆರ್. ಶ್ಲಾಘಿಸಿದರು.ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ಆಯೋಜನೆ ಮಾಡಿದ್ದ ಗೃಹರಕ್ಷಕ ದಳದ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಜಕೀಯ, ಪ್ರತಿಭಟನೆ, ಜಾತ್ರೆ, ಉತ್ಸವಗಳು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಹ, ಅಗ್ನಿ ಅವಘಡ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಪೊಲೀಸರ ಜತೆಗೆ ಕೈ ಜೋಡಿಸುವ ನಿಮ್ಮಗಳಿಗೆ ನೈಪುಣ್ಯತೆಯಿಂದ ಕೂಡಿದ ತರಬೇತಿ ನೀಡಿ, ಅಗತ್ಯ ಸೌಲಭ್ಯ ನೀಡಿದಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ನಿಮ್ಮಿಂದ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಅಧಿಕಾರಿ ಧರ್ಮೇಂದ್ರ ಎಚ್.ಎಲ್. ಕಾರ್ಯಕ್ರಮದ ಆದ್ಯಕ್ಷತೆ ವಹಿಸಿ ಮಾತನಾಡಿದರು. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಕೃಷ್ಣಯ್ಯ ಅವರನ್ನು ಗೌರವಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.ಗೃಹರಕ್ಷಕ ದಳದ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೨೫ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಹಾಸನ ಹಿಮ್ಸ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತು, ಮಂಜುನಾಥ್, ಗಾಯಿತ್ರಿಉ, ಆಶ್ವತ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಪ್ರಕಾಶ್ ರಕ್ತದಾನ ಶಿಬಿರದ ಕರ್ತವ್ಯದಲ್ಲಿ ಸೇವೆಗೈದರು.ಸೀನಿಯರ್ ಪ್ಲ. ಕಮಾಂಡರ್ ಪ್ರದೀಪ್ ಎಚ್.ಆರ್., ಪ್ಲ.ಕಮಾಂಡರ್ ದಿನೇಶ್ ಎಚ್.ಎಸ್., ಘಟಕಾಧಿಕಾರಿ ನಾಗೇಶ್ ಎನ್., ಸಿಬ್ಬಂದಿಗಳಾದ ನರಸಿಂಹಮೂರ್ತಿ, ಸುರೇಶ್, ರಮೇಶ್, ರಂಗನಾಥ್, ನವೀನ್, ಮಧು, ರವಿ, ವಸಂತಬಾಬು, ಪೃಥ್ವಿ, ಶೋಭ, ರಂಗಮ್ಮ, ಇತರರು ಇದ್ದರು.