ಹೊರಪೇಟಿ ಮಲ್ಲೇಶಪ್ಪ ಶೈಕ್ಷಣಿಕ ಸೇವೆ ಅನುಕರಣೀಯ

KannadaprabhaNewsNetwork |  
Published : Jan 05, 2026, 02:00 AM IST
04 HRR. 01ಹರಿಹರದ ಗುರುಭವನದಲ್ಲಿ ಹೊರಪೇಟಿ ಮಲ್ಲೇಶಪ್ಪನವರಿಗೆ ಅವರ ಅಭಿನಂದನಾ ಬಳಗದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅಲ್ಪಾವಧಿಯಲ್ಲಿಯೇ ಬೆಂಗಳೂರು ವಿಭಾಗ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪಡೆದ ಯಾರಾದರೂ ಇದ್ದರೆ ಅದು ಹೊರಪೇಟಿ ಮಲ್ಲೇಶಪ್ಪ ಎಂದು ವಿಶ್ರಾಂತ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಎಂದು ಪ್ರಶಂಸಿಸಿದ್ದಾರೆ.

- ಎಂ.ಎಸ್. ಪ್ರಸನ್ನ ಕುಮಾರ್ ಶ್ಲಾಘನೆ । "ಅಪರಂಜಿ " ಅಭಿನಂದನಾ ಗ್ರಂಥ ಬಿಡುಗಡೆ

- - -

ಕನ್ನಡಪ್ರಭ ವಾರ್ತೆ ಹರಿಹರ

ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅಲ್ಪಾವಧಿಯಲ್ಲಿಯೇ ಬೆಂಗಳೂರು ವಿಭಾಗ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪಡೆದ ಯಾರಾದರೂ ಇದ್ದರೆ ಅದು ಹೊರಪೇಟಿ ಮಲ್ಲೇಶಪ್ಪ ಎಂದು ವಿಶ್ರಾಂತ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಎಂದು ಪ್ರಶಂಸಿಸಿದರು.

ಹರಿಹರದ ಗುರುಭವನದಲ್ಲಿ ಹೊರಪೇಟಿ ಮಲ್ಲೇಶಪ್ಪ ಅವರಿಗೆ ಅವರ ಅಭಿನಂದನಾ ಬಳಗ ವತಿಯಿಂದ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದ ಸಂದರ್ಭ ಮಲ್ಲೇಶಪ್ಪ ಅಳವಡಿಸಿಕೊಂಡ ಅನೇಕ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿವೆ. ಅಂತಹ ಎಷ್ಟೋ ಕಾರ್ಯಕ್ರಮಗಳನ್ನು ಇಲಾಖೆ ರಾಜ್ಯಾದ್ಯಂತ ಜಾರಿಗೆ ತಂದಿದ್ದು ಹೆಮ್ಮೆಪಡುವ ವಿಷಯ ಎಂದರು.

ಅಲ್ಪ ಅವಧಿಯಲ್ಲಿಯೇ, "ನಮ್ಮ ಶಾಲೆ ಬೆಳಗಲಿ ನಮ್ಮ ಮಕ್ಕಳು ಕಲಿಯಲಿ " ಎಂಬ ಜನಪ್ರಿಯ ಕಾರ್ಯಕ್ರಮ ಮೂಲಕ ಶಿಕ್ಷಕರ ಮನವೊಲಿಸಿ, ₹40 ಲಕ್ಷಗಳಷ್ಟು ಸಾರ್ವಜನಿಕ ದಾನ ಪಡೆದು ಹರಿಹರ ತಾಲೂಕಿನ ಎಲ್ಲ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸಿದ್ದರು. ಬಡ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಿದ್ದು, ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಸಾರ್ವತ್ರೀಕರಣಕ್ಕಾಗಿ; ಶಿಕ್ಷಕರಿಗೆ ತರಬೇತಿ ನೀಡಿ, ಚೈತನ್ಯ ದೀಕ್ಷಾ ಸಮಾವೇಶ ಏರ್ಪಡಿಸಿದ್ದು, ಶಿಕ್ಷಕರ ಸೇವಾ ಪುಸ್ತಕಗಳನ್ನು ಶಿಕ್ಷಕರ ಕೈಗೇ ನೀಡಿ, ಸ್ಥಳದಲ್ಲೇ ಬಗೆಹರಿಸುವ ಗುರುಸ್ಪಂದನ, ವರ್ಷದ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿಯನ್ನು ಆರಂಭದಲ್ಲೇ ಕಟ್ಟಿಕೊಡುವ ಶಿಕ್ಷಕ ಮಾರ್ಗದರ್ಶಿ ಪುಸ್ತಕ ಹೊರತಂದಿದ್ದರು ಎಂದರು.

ಇಂತಹ ಜನಪ್ರಿಯ, ಅರ್ಥಪೂರ್ಣ ಕಾರ್ಯಕ್ರಮಗಳ ಜಾರಿ ಮೂಲಕ ಉತ್ತಮ ಕೆಲಸವನ್ನು ನಿರ್ವಹಿಸಿದ ಮಲ್ಲೇಶಪ್ಪ ಉಪನಿರ್ದೇಶಕರಾಗಿ ಬಡ್ತಿ ಹೊಂದಿದರಲ್ಲದೇ, ಕಾಗಿನೆಲೆ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಾಗಿಯೂ ಗಮನೀಯ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಸಚಿವರ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿದ ಹೊರಪೇಟೆ ಮಲ್ಲೇಶಪ್ಪ ಮಾತನಾಡಿ, ಇಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ. ಶಿಕ್ಷಕರ, ಜನಪ್ರತಿನಿಧಿಗಳ, ಪೋಷಕರ, ಆಶಯಗಳು ಮತ್ತು ಅವರ ಯೋಚನೆಗಳನ್ನು ಯೋಜನೆಗಳನ್ನಾಗಿ ರೂಪಿಸಿ ಜಾರಿಗೆ ತಂದಿದ್ದೇನೆ. ಪ್ರಸನ್ನ ಕುಮಾರ್ ಅವರನ್ನು ಒಳಗೊಂಡಂತೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನವೂ ನನ್ನ ಏಳಿಗೆಗೆ ಕಾರಣ ಎಂದು ಸ್ಮರಿಸಿದರು.

"ಅಪರಂಜಿ " ಅಭಿನಂದನಾ ಹೊತ್ತಿಗೆಯನ್ನು ನಿವೃತ್ತ ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು. ಹೊರಪೇಟಿ ಮಲ್ಲೇಶಪ್ಪ ಅವರು ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ರಚಿಸಿದ ಪ್ಯಾಕೆಟ್ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.

ಅಭಿನಂದನಾ ಬಳಗದ ಸಂಚಾಲಕ ಎಸ್.ಎಚ್. ಹೂಗಾರ್ ಅವರು ಹೊರಪೇಟೆ ಮಲ್ಲೇಶಪ್ಪ ಅವರಿಗೆ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶಾಲಾ ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮಲ್ಲೇಶಪ್ಪನವರ ಅಭಿಮಾನಿಗಳು ಸನ್ಮಾನಿಸಿದರು.

ಹರಿಹರದ ಹಾಲಿ ಶಿಕ್ಷಣಾಧಿಕಾರಿ ಡಿ.ದುರ್ಗಪ್ಪ ಅಧ್ಯಕ್ಷತೆ ವಹಿಸಿದ್ದರು. ಬಳಗದ ಸಂಚಾಲಕರಾದ ಎಸ್. ಎಚ್. ಹೂಗಾರ್, ಡಿ.ಎಂ. ಮಂಜುನಾಥಯ್ಯ, ಸದಸ್ಯರಾದ ಗದಿಗೆಪ್ಪ ವೈ. ಹಳೇಮನಿ, ಆರ್.ಆರ್. ಮಠ, ಕುಬೇಂದ್ರಪ್ಪ ಮೆಕ್ಕಪ್ಪನವರ್, ಅಶ್ಫಾಕ್ ಅಹಮದ್. ಬಿ.ತಿಪ್ಪೇಸ್ವಾಮಿ. ಸಿ.ಜಯಣ್ಣ ಕೊಕ್ಕನೂರು. ಎಸ್.ಹನುಮಂತಪ್ಪ, ಈಶಪ್ಪ ಬೂದಿಹಾಳ್. ಎನ್.ಡಿ.ಧನ್ಯಕುಮಾರ್, ಅಭಿಮಾನಿಗಳಾದ ವಿವೇಕಾನಂದ ಸ್ವಾಮಿ, ಸಿ.ಎನ್. ಹುಲಿಗೇಶ್, ಬಿ.ರೇವಣಸಿದ್ದಪ್ಪ, ಪೈಸಾ ನಾಗರಾಜ್, ಬಿ.ಮಗ್ದುಮ್, ಕೆ.ಬಿ. ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.

ಶಿಕ್ಷಕಿ ನಾಗರತ್ನಮ್ಮ ಪ್ರಾರ್ಥಿಸಿದರು. ರೇವಣಸಿದ್ದಪ್ಪ ಅಂಗಡಿ ಸ್ವಾಗತಿಸಿದರು. ಡಿ.ಎಂ. ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವಣ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಬಿಆರ್‌ಸಿ ಕುಬೇಂದ್ರ ಮೇಕಪ್ಪನವರ್ ವಂದಿಸಿದರು.

- - -

-04HRR.01:

ಹರಿಹರ ನಗರದ ಗುರುಭವನದಲ್ಲಿ ಹೊರಪೇಟಿ ಮಲ್ಲೇಶಪ್ಪ ಅವರಮ್ಮಿ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ