ದಾಂಡೇಲಿ: ಫೆ. ೧೭ ಮತ್ತು ಫೆ. ೧೮ರಂದು ಹಾರ್ನಬಿಲ್ ಹಕ್ಕಿ ಹಬ್ಬ ನಗರದ ಹಾರ್ನ್ ಬಿಲ್ ಭವನದಲ್ಲಿ ನಡೆಯಲಿದ್ದು, ದೇಶ ಹಾಗೂ ರಾಜ್ಯದ ಪಕ್ಷಿ ಪ್ರಿಯರು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ. ತಿಳಿಸಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕಾರವಾರದ ಶಾಸಕ ಸತೀಶ ಕೃಷ್ಣ ಸೈಲ್ ಇರುವರು. ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಆನಂತರ ಅದೇ ವೇದಿಕೆಯಲ್ಲಿ ಹಾರ್ನ್ಬಿಲ್ ಹಕ್ಕಿಯ ಜೀವನ ಕ್ರಮ ಮತ್ತು ಸಂತತಿ ರಕ್ಷಣೆ ಕುರಿತಂತೆ ೫ ವಿಭಾಗದಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಶಾಲಾ ಮಕ್ಕಳಿಗೆ ಹಾರ್ನ್ಬಿಲ್ ಪಕ್ಷಿ ಜಾಗೃತಿಗಾಗಿ ಚಿತ್ರಕಲಾ, ನಿಬಂಧ, ರಸಪ್ರಶ್ನೆ, ಕ್ಲೇ ಮಾಡೆಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.ಸಂಜೆ ಪಕ್ಷಿ ತಜ್ಞರೊಂದಿಗೆ ಪಕ್ಷಿ ವೀಕ್ಷಣೆ ಹಾಗೂ ಕ್ಷೇತ್ರ ಕಾರ್ಯ ಚಟುವಟಿಕೆ ಹಾಗೂ ಸಫಾರಿ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ. ೧೮ರಂದು ತಾಂತ್ರಿಕ ವಿಭಾಗದ ಎರಡು ಗೋಷ್ಠಿಗಳು ಹಾಗೂ ಹಾರ್ನ್ಬಿಲ್ ೨.೦ ವಿಶೇಷ ಚರ್ಚಾ ಕಾರ್ಯಕ್ರಮ ಹಾಗೂ ಸಮಾರೋಪ ನಡೆಯಲಿದೆ. ಈ ಹಬ್ಬದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರಿಣತರು ಹಾರ್ನಬಿಲ್ ಕುರಿತು ಏರ್ಪಡಿಸಲಾಗುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಚಾರ ಮಂಡಿಸಿ, ಪಕ್ಷಿ ಸಂರಕ್ಷಣೆ ಹಾಗೂ ಸಂತತಿ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಸ್ಥಳೀಯರ ಸಹಭಾಗಿತ್ವದಲ್ಲಿ ಹಾರ್ನ್ಬಿಲ್ ಹಕ್ಕಿ ಹಬ್ಬವನ್ನು ಯಶಸ್ವಿಗೊಳಿಸಲು ಈ ಮೂಲಕ ಅವರು ವಿನಂತಿಸಿದ್ದಾರೆ.ಎಸಿಎಫ್ ಸಂತೋಷ ಚವ್ಹಾಣ, ಆರ್ಎಫ್ಒ ಅಪ್ಪಾರಾವ್ ಕಲಶೆಟ್ಟಿ, ಸಂಗಮೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.