(ರಾಜ್ಯಕ್ಕೂ ಮುಖ್ಯ, ಕೊಡಗು) ಹೊಸೂರು: ಆನೆ ದಾಳಿಗೆ ಮಹಿಳೆ ಬಲಿ

KannadaprabhaNewsNetwork | Published : Jan 25, 2024 2:08 AM

ಸಾರಾಂಶ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊಸೂರಿನ ಬೇಬಿ (55) ಮೃತಪಟ್ಟ ಮಹಿಳೆ. ಸಂಜೆ 6 ಗಂಟೆಗೆ ಕೆಲಸ ಮುಗಿಸಿ, ಅಂಗಡಿಗೆ ದಿನಸಿ ಸಾಮಗ್ರಿಗಳನ್ನು ತೆಗೆದು ಮನೆಗೆ ತೆರಳುತಿರುವ ವೇಳೆ ಆನೆ ದಿಢೀರನೆ ಬಂದು ಮಹಿಳೆಯ ಮೇಲೆ ದಾಳಿ ಮಾಡಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಕಾಡಾನೆಗಳ ದಾಳಿ ಹಾವಳಿ ಮುಂದುವರಿದಿದೆ. ದಾಳಿಗೆ ಬುಧವಾರ ಜೀವಹಾನಿ ಸಂಭವಿಸಿದೆ.

ಆನೆ ದಾಳಿಗೆ ಮಹಿಳೆ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಅಮ್ಮತ್ತಿ ಸಮೀಪದ ಹೊಸೂರುವಿನಲ್ಲಿ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊಸೂರಿನ ಬೇಬಿ (55) ಮೃತಪಟ್ಟ ಮಹಿಳೆ. ಸಂಜೆ 6 ಗಂಟೆಗೆ ಕೆಲಸ ಮುಗಿಸಿ, ಅಂಗಡಿಗೆ ದಿನಸಿ ಸಾಮಗ್ರಿಗಳನ್ನು ತೆಗೆದು ಮನೆಗೆ ತೆರಳುತಿರುವ ವೇಳೆ ಆನೆ ದಿಢೀರನೆ ಬಂದು ಮಹಿಳೆಯ ಮೇಲೆ ದಾಳಿ ಮಾಡಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪುಂಡಾನೆ ಪುಂಡಾಟ: ಸೋಮವಾರಪೇಟೆ ತಾಲೂಕಿನ ಬಾಣಾವರ ರಸ್ತೆಯಲ್ಲಿ ಬುಧವಾರ ಸಂಜೆ 4.30 ಕಾಡಾನೆಯೊಂದು ಕಾಣಿಸಿಕೊಂಡು ವಾಹನ ಸವಾರರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು.

ಹಲವು ಸಮಯದಿಂದ ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮುಂದುವರಿಯುತ್ತಲೇ ಇದೆ. ನಾಗರಿಕರು ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಜನಪ್ರತಿನಿತಿಧಿಗಳೂ ಕ್ರಮದ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಆನೆ ದಾಳಿ: ಶಾಸಕ ಪೊನ್ನಣ್ಣ ಭೇಟಿ

ಅಮ್ಮತ್ತಿ ಸಮೀಪದ ಹೊಸೂರು ಗ್ರಾಮದ ಮಹಿಳೆ ಬೇಬಿ ಆನೆ ದಾಳಿಯಿಂದ ಮೃತಪಟ್ಟಿದ್ದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಬುಧವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಊರಿಗೆ ಬಂದು ಕಾಡಾನೆಗಳು ದಾಳಿ ಮಾಡುತ್ತಿದೆ. ಕಾಡಾನೆ ಹಿಡಿಯಲು ಈಗಾಗಲೇ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಅರಣ್ಯಾಧಿಕಾರಿಗಳ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.ಕಾಡಾನೆ ಹಾವಳಿ ಹೆಚ್ಚಿರುವ ಕಡೆಗಳಲ್ಲಿ ಅಧಿಕಾರಿಗಳು, ಟಾಸ್ಕ್ ಫೋರ್ಸ್ ತಂಡ ಕೆಲಸ ಮಾಡಬೇಕು ಎಂದು ಶಾಸಕರು ಸೂಚಿಸಿದರು.

Share this article