ಕನ್ನಡಪ್ರಭ ವಾರ್ತೆ ತುರುವೇಕೆರೆತಾಲೂಕಿನ ಹಲವೆಡೆ ಶುಕ್ರವಾರ ತಡರಾತ್ರಿ ಮಿಂಚು, ಬಿರುಗಾಳಿ ಸಹಿತ ಸುರಿದ ಭರಣಿ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈ ವರ್ಷದ ಮೊದಲ ಭರಣೆ ಮಳೆ ಉತ್ತಮ ಆರಂಭ ನೀಡದಿದ್ದರೂ ಕೊನೆ ಹಂತದಲ್ಲಿ ತಾಲೂಕಿನ ಅಲ್ಲಲ್ಲಿ ಹದ ಮಳೆಯಾಗಿದೆ. ಮಧ್ಯರಾತ್ರಿ ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿದಿದೆ.
ಕಸಬಾ ವ್ಯಾಪ್ತಿಯ ತುರುವೇಕೆರೆ ಪಟ್ಟಣ, ತಾವರೇಕೆರೆ, ಪುರ, ಚಂಡೂರು, ಶ್ರೀರಾಂಪುರ, ತಾಳ್ಕೆರೆ ಹಾವಾಳ, ದಂಡಿನಶಿವರ ಹೋಬಳಿಯ ದಂಡಿನಶಿವರ, ಹಡವನಹಳ್ಳಿ ಸಾಧಾರಣ ಮಳೆಯಾಗಿದೆ.‘ಹುಲ್ಲೇಕೆರೆ, ಬಳ್ಳೆಕಟ್ಟೆ ಮತ್ತು ಹಟ್ಟಿಹಳ್ಳಿಯಲ್ಲಿ ಹದ ಮಳೆಯಾಗಿ ತೋಟ ಸಾಲುಗಳಲ್ಲಿ ನೀರು ಸಂಗ್ರಹವಾಗಿದೆ ಎಂದು ಹುಲ್ಲೇಕೆರೆ ರೈತ ಎಚ್.ಬಿ.ಗಂಗಾಧರ್ ತಿಳಿಸಿದರು.ಮಳೆಗಾಳಿಗೆ ಮರ ಮುರಿದು ಬಿದ್ದು ತಂಡಗ ವ್ಯಾಪ್ತಿಯ ಮಾವಿನಹಳ್ಳಿ ಗೋವಿಂದಘಟ್ಟ 3, ಹಿಂಡುಮಾರನಹಳ್ಳಿಯಲ್ಲಿ 11 ಕೆವಿ 2 ಕಂಬಗಳು, ಹಡವನಹಳ್ಳಿ ಗೊಲ್ಲರಹಟ್ಟಿ ವ್ಯಾಪ್ತಿ 12, ಹೆಗ್ಗೆ 2 ವಿದ್ಯುತ್ ಕಂಬಗಳು ಮುರಿದಿವೆ. ಹುಲಿಕೆರೆ, ತೊರೆಮಾವಿನಹಳ್ಳಿ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಲೈನ್ಗಳು ತುಂಡರಿಸಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ತೆರೆವು ಕಾರ್ಯದ ಮಾಡಿದ್ದಾರೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ.ರಾಜಶೇಖರ್ ತಿಳಿಸಿದರು.ಮನೆ ಗೋಡೆ ಕುಸಿತ: ಮಳೆಯಿಂದಾಗಿ ಕಸಬಾ ವ್ಯಾಪ್ತಿಯ ಪುರಗ್ರಾಮದ ಯಶೋದಮ್ಮ ಅವರ ವಾಸದ ಗೋಡೆ ಕುಸಿದು ಬಿದ್ದಿದೆ. ಮನೆಯ ಸಣ್ಣ ಪುಟ್ಟ ವಸ್ತುಗಳು ಹಾಳಾಗಿದ್ದು, ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಸಬಾ ಕಂದಾಯ ಅಧಿಕಾರಿ ಎಂ.ಬಿ.ಶಿವಕುಮಾರ ಸ್ವಾಮಿ ಹೇಳಿದರು.ಕೆಲವೆಡೆ ತೆಂಗಿನ ಮರಗಳು, ಅಡಿಕೆ ಮರಗಳು ಹಾಗು ಇನ್ನಿತರ ಮರಗಳು ಸಹ ಬಿರುಗಾಳಿಗೆ ಧರೆಗುರುಳಿವೆ. ಹಾನಿಯಾದ ಸ್ಥಳಕ್ಕೆತಂಡಗ ಬೆಸ್ಕಾಂ ಶಾಖಾಧಿಕಾರಿ ಎಂ.ಎಲ್.ಉಮೇಶ್ವರಯ್ಯ, ದಂಡಿನಶಿವರ ಬೆಸ್ಕಾಂ ಶಾಖಾಧಿಕಾರಿ ಸೋಮಶೇಖರ್, ಸಿಬ್ಬಂದಿ ಶಿವಕುಮಾರ್, ಶರತ್, ಮಹಾಂತೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.