ಹುಬ್ಬಳ್ಳಿ- ಶಿರಡಿಗೆ ಪಲ್ಲಕ್ಕಿ ಬಸ್‌ ಸಂಚಾರ

KannadaprabhaNewsNetwork | Published : Jan 18, 2024 2:02 AM

ಸಾರಾಂಶ

ಪ್ರಯಾಣಿಕರ ಬೇಡಿಕೆ ಹೆಚ್ಚಾಗಿರುವ ಹುಬ್ಬಳ್ಳಿ-ಶಿರಡಿ ಮಾರ್ಗದಲ್ಲಿ ಪಲ್ಲಕ್ಕಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಐಷಾರಾಮಿ‌ ಪಲ್ಲಕ್ಕಿ ಬಸ್‌ಗಳ ಸೇವೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಗಿದ್ದು, ಮೊದಲ ಎರಡು ಬಸ್‌ಗಳು ಹುಬ್ಬಳ್ಳಿ- ಶಿರಡಿ ನಡುವೆ ಸಂಚರಿಸುತ್ತವೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಎಸಿ ಸ್ಲೀಪರ್ ಅಂಬಾರಿ ಉತ್ಸವ, ನಾನ್ ಎಸಿ ಸ್ಲೀಪರ್ ಹಾಗೂ ವೇಗದೂತ ಸಾರಿಗೆ ಸೇರಿದಂತೆ ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸಂಸ್ಥೆಗೆ ಬಂದಿರುವ ನಾಲ್ಕು ಪಲ್ಲಕ್ಕಿ ಬಸ್‌ಗಳಲ್ಲಿ ಎರಡು ಬಸ್‌ಗಳನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ನೀಡಲಾಗಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಾಗಿರುವ ಹುಬ್ಬಳ್ಳಿ-ಶಿರಡಿ ಮಾರ್ಗದಲ್ಲಿ ಈ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಬಸ್‌ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಡುತ್ತದೆ. ಧಾರವಾಡ ಹೊಸ ಬಸ್ ನಿಲ್ದಾಣದಿಂದ 9ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಪುಣೆ, ಅಹ್ಮದನಗರ ಮಾರ್ಗವಾಗಿ ಮರುದಿನ ಬೆಳಗ್ಗೆ 8.45 ಗಂಟೆಗೆ ಶಿರಡಿಗೆ ತಲುಪುತ್ತದೆ‌.

ಇನ್ನೊಂದು ಬಸ್‌ ಶಿರಡಿಯಿಂದ ರಾತ್ರಿ 8 ಗಂಟೆಗೆ ಹೊರಟು ಬೆಳಗಾವಿಗೆ ಬೆಳಗ್ಗೆ 5-15ಕ್ಕೆ, ಧಾರವಾಡಕ್ಕೆ 6-15ಕ್ಕೆ ಹಾಗೂ ಹುಬ್ಬಳ್ಳಿಗೆ 7-15ಕ್ಕೆ ಆಗಮಿಸುತ್ತದೆ. ಮೂಲ ಪ್ರಯಾಣ ದರ, ಅಪಘಾತ ಪರಿಹಾರ ನಿಧಿ ಶುಲ್ಕ ಹಾಗೂ ಟೋಲ್ ಫೀ ಸೇರಿ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಶಿರಡಿಗೆ ₹1,280 ಧಾರವಾಡದಿಂದ ಶಿರಡಿಗೆ ₹1,230 ಹಾಗೂ ಬೆಳಗಾವಿಯಿಂದ ಶಿರಡಿಗೆ ₹1,080 ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್; ರಿಯಾಯಿತಿ www.ksrtc.in ಅಥವಾ KSRTC Mobile App ಪ್ರಮುಖ ಬಸ್ ನಿಲ್ದಾಣಗಳಲ್ಲಿರುವ ಬುಕ್ಕಿಂಗ್ ಕೌಂಟರ್ ಹಾಗೂ ಫ್ರಾಂಚೈಸಿ ಕೌಂಟರ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರಿಗೆ ವ್ಯವಸ್ಥಾಪಕರ ಹೆಸರಲ್ಲಿ ವಂಚನೆಗೆ ಯತ್ನ, ದೂರುಅಪರಿಚಿತ ವ್ಯಕ್ತಿಗಳು ವ್ಯಾಟ್ಸ್‌ಆಪ್ ನಂಬರ್‌ಗೆ ಎನ್‌ಡಬ್ಲೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಭಾವಚಿತ್ರವನ್ನು ಡಿಪಿ ಇಟ್ಟುಕೊಂಡುವಂಚಿಸಲು ಯತ್ನಿಸುತ್ತಿರುವ ಬಗ್ಗೆ ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರು ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅವರು ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ಫೋಟೋವನ್ನು ವ್ಯಾಟ್ಸ್‌ಆಪ್ ನಂ. ೯೯೧೦೨ ೯೧೫೫೭ಗೆ ಡಿಪಿ ಇಟ್ಟುಕೊಂಡಿದ್ದಾರೆ. ಅಲ್ಲದೇ, ಮೆಸೇಜ್ ಕಳುಹಿಸಿ ಮೊ. ನಂ. ೭೩೮೪೫ ೩೧೨೭೦ಗೆ ಹಣ ಹಾಕುವಂತೆ ಸಂದೇಶ ಕಳುಹಿಸುತ್ತಿದ್ದಾರೆ. ಈ ನಂಬರ್‌ಗಳ ಬಳಕೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಭರತ್ ಎಸ್. ದೂರು ನೀಡಿದ್ದಾರೆ.

Share this article