ಕನ್ನಡಪ್ರಭ ವಾರ್ತೆ ಅಜ್ಜಂಪುರ
ತಾಲೂಕಿನ ಚೆನ್ನಾಪುರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮ ಪುರುಷಾರ್ಥಗಳು ಎಲ್ಲರಿಗೂ ಬೇಕೇ ಬೇಕು. ಜೀವನ ವಿಧಾನವೇ ನಿಜವಾದ ಧರ್ಮ, ಸಕಲರ ಬಾಳಿನಲ್ಲಿ ಬಲವನ್ನು ತಂದು ಕೊಡುವುದೇ ಗುರುವಿನ ಪರಮಧರ್ಮವಾಗಿದೆ, ಶಿವ ಜ್ಞಾನದ ಹರಿವನ್ನು ಉಂಟುಮಾಡುವ ಶಕ್ತಿ ಗುರುವಿಗಲ್ಲದೆ ಬೇರೆ ಯಾರಿಗೂ ಇಲ್ಲ. ಜ್ಞಾನ ಸಂಜೀವಿನಿಯಾದ ಈ ಗುರುವಿನ ಕಾರುಣ್ಯವಿಲ್ಲದೆ ಬಾಳು ವಿಕಾಸಗೊಳ್ಳದು. ಮನುಷ್ಯನ ಮನಸ್ಸು ಲೌಕಿಕದಲ್ಲಿ ಬೆರೆತು ಮಲಿನಗೊಂಡ ಬಟ್ಟೆಯಂತಾಗಿದೆ. ಮನದ ಕನ್ನಡಿಯ ಮೇಲೆ ಧೂಳು ಮುಸುಕಿದ ಅಂಟಿದ ಜಾಡ್ಯ ಜಾಡಿಸಿ ಪರಿಶುದ್ಧಗೊಳಿಸಲು ಶ್ರೀ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕವಾಗಿಬೇಕು ಎಂದು ಹೇಳಿದರು.
ಸುಂದರವಾದ ಉಡುಗೆ ತೊಡಿಗೆಗಳಿಂದ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಹುದು ವಿನಃ ಬದುಕನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮ ಸಂಸ್ಕೃತಿ ಸಬ್ಯತೆ ಸದ್ಗುಣ ಮತ್ತು ಸಂಸ್ಕಾರ ಜನರ ನಿಜವಾದ ಆಸ್ತಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಹೊರಗಿನ ಸಿರಿ ಸಂಪತ್ತು ಹೆಚ್ಚುತ್ತಿದೆ ವಿನ ಒಳಗಿನ ಜ್ಞಾನ ಸಂಪತ್ತು ಬೆಳೆಯುತ್ತಿಲ್ಲ. ನಾಗರಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು ಎಂದರು.ಚಿಕ್ಕಮಗಳೂರು ಕುಮಾರಸ್ವಾಮಿ ರೇಣುಕಾಚಾರ್ಯರ ಸಾಮಾಜಿಕ ಸತ್ಕ್ರಾಂತಿ ಕುರಿತು ಉಪನ್ಯಾಸ ನೀಡಿದರು. ಎನ್.ಡಿ. ಪರಮೇಶ್ವರಪ್ಪ, ನಿವೃತ್ತ ಸೇನಾಧಿಕಾರಿ ಬಿ.ಎಸ್.ರಾಜು ಬಗ್ಗವಳ್ಳಿ ಮೊದಲಾದ ಗಣ್ಯರಿಗೆ ವಿಶೇಷ ಗುರು ರಕ್ಷೆ ನೀಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ರೇಣುಕಾಚಾರ್ಯರ ಭಾವಚಿತ್ರ ಅನಾವರಣ ನಡೆಯಿತು.
ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು, ಸಾಣೆಹಳ್ಳಿ ಕಲಾ ತಂಡದವರಿಂದ ಪ್ರಾರ್ಥನೆ ನಡೆಯಿತು ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು. ಅಜ್ಜಂಪುರ ತಾಲೂಕು ಜಂಗಮ ಸಮಾಜದ ಎಲ್ಲಾ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು, ಸಮಾರಂಭದ ನಂತರ ಅನ್ನದಾಸೋಹ ಜರುಗಿತು.