ಕನ್ನಡಪ್ರಭ ವಾರ್ತೆ ಕೋಲಾರಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರ ತಡೆಗೆ ಜಾಗೃತಿ ಮೂಡಿಸುವುದರ ಜತೆಗೆ ಮಕ್ಕಳನ್ನು ಜೀತ ಮತ್ತು ಭಿಕ್ಷಾಟನೆಗೆ ಪ್ರೇರೇಪಿಸುವ ಕೃತ್ಯಗಳ ತಡೆಗೆ ವಿದ್ಯಾರ್ಥಿ ಸಮುದಾಯ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಕರೆ ನೀಡಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜೀತ ಪದ್ಧತಿ ಅಪರಾಧ
ಜುಲೈ ೩೦ ರಂದು ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನವನ್ನು ಆಚರಿಸುತ್ತಿದು, ಇದು ಈ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ಪ್ರಯತ್ನ ನಡೆಸಬೇಕು, ಈ ಸಾಮಾಜಿಕ ಪಿಡುಗನ್ನು ತಡೆಯಬೇಕು ಎಲ್ಲಾ ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಸಹಕಾರ ನಿಡಬೇಕು ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಮಕ್ಕಳಿಗೆ ಪೊಲೀಸ್ ಸಹಾಯವಾಣಿ ೧೧೨, ಮಕ್ಕಳ ಸಹಾಯವಾಣಿ ೧೦೯೮, ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಿ, ಇದನ್ನು ಬಳಸಿಕೊಳ್ಳಲು ಕೋರಿದರು.
ನಿರಂತರ ಜಾಗೃತಿ ಅಗತ್ಯಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಲಿ ಮಾನವ ಕಳ್ಳಸಾಗಾಣಿಕೆ, ಮಾದಕ ವಸ್ತುಗಳ ಬಳಕೆಯಿಂದಾಗಿ ಮಹಿಳೆಯರು,ಮಕ್ಕಳ ಜೀವನ ಹಾಳಾಗುತ್ತಿದ್ದು, ಇವುಗಳಿಂದ ರಕ್ಷಿಸಲು ನಿರಂತರ ಜಾಗೃತಿ ಅಗತ್ಯ ಎಂದರು.ಕೆಜಿಎಫ್ನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ ಮಾತನಾಡಿ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ, ಮಕ್ಕಳು ಮೊಬೈಲ್ಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಮೊಬೈಲ್ ದುಷ್ಟರಿಣಾಮಗಳ ಕುರಿತು ಮಕ್ಕಳಿಗೆ ಅರಿವು ನೀಡುವ ಕೆಲಸವಾಗಲಿ ಎಂದರು.ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಹಲವಾರು ಕಠಿಣ ಕಾನೂನುಗಳು ಜಾರಿಯಾಗಿವೆ ಎಂದು ತಿಳಿಸಿದ ಅವರು, ಮಕ್ಕಳ ರಕ್ಷಣಾ ಘಟಕದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಉಪಪ್ರಾಂಶುಪಾಲೆ ಫರೀದಾ ಬೇಗಂ ಇದ್ದರು.