ಕನ್ನಡಪ್ರಭ ವಾರ್ತೆ ಜಮಖಂಡಿ
ಇಂದಿನ ಸಮಾಜದ ಅಭಿರುಚಿ ಬದಲಾಗಿದೆ. ಹಾಡು, ಸಂಗೀತ, ಉಡುಗೆ-ತೊಡುಗೆ, ಬಾಂಧವ್ಯ, ಭಾಷೆ ಎಲ್ಲವೂ ಬದಲಾಗಿದೆ. ಸಮಾಜದ ದಿಕ್ಕು ಬದಲಾಗಿದೆ. ಯಾವ ಕಡೆಗೆ ಮುಖ ಮಾಡಿ ಹೊರಟಿದೆ ಗೊತ್ತಿಲ್ಲ. ಹಾಗಾಗಿ ಮೂಲ ಸಂಸ್ಕೃತಿ ಉಳಿಸದಿದ್ದರೆ ಉಳಿಗಾಲವಿಲ್ಲವೆಂದು ಅಥಣಿಯ ಮೋಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ ಎಚ್ಚರಿಸಿದರು.ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ 6ನೇ ದಿನವಾದ ಭಾನುವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮನ್ನು ಬದಲಾಯಿಸಲು ಸಂತ ಮಹಾಂತರು ಹುಟ್ಟಿಬರಬೇಕಾಗಿಲ್ಲ. ನಮಗೆ ನಾವೇ ಬದಲಾಗಬೇಕು. ಶರಣರ ಮುಂದುವರಿದ ಪೀಳಿಗೆಯಾಗಿ ಇಂದಿನವರ ಜವಾಬ್ದಾರಿ ಏನು? ಎಂದು ಪ್ರಶ್ನಿಸಿದ ಅವರು, ನಮ್ಮ ಸಾಹಿತ್ಯ, ಸಾಧ್ಯತೆಗಳಿಗೆ ನಾವೇ ಉತ್ತರವಾಗಬೇಕು. ಯುವಕರು ಸನ್ಮಾರ್ಗದಲ್ಲಿ ಸಾಗದಿದ್ದರೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.ಹೃದಯರೋಗತಜ್ಞ ನಾಡೋಜ ಡಾ.ಎಚ್.ಜಿ. ದಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತೇವೆಯೇ ಹೊರತು ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಚೌಕಟ್ಟಿನಲ್ಲಿಟ್ಟು ಅವರ ಸಂದೇಶಗಳ ಪ್ರಯೋಜನ ಇಡೀ ಸಮಾಜಕ್ಕೆ ತಲುಪದಂತೆ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಡಿಎಸ್ಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಾಮರಾವ ಘಾಟಗೆ ಮಾತನಾಡಿ, ಅಂದು ಬಸವಾದಿ ಶಿವಶರಣರು ಮಾಡಿದ ಪವಿತ್ರ ಕಾರ್ಯ ಇಂದಿಗೂ ಕೂಡ ದಲಿತರು, ಶೋಷಿತರು, ದುರ್ಬಲರು ಹಾಗೂ ಕೆಳಗೆ ಬಿದ್ದವರನ್ನು ಕೈ ಹಿಡಿದು ನಡೆಸುತ್ತಿದೆ. ಬಸವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಯೋಗಿ ಬಂದಾನೊ ಭೋಗ ಸುಖವ ತ್ಯಾಗ ಮಾಡಿ ಎಂಬ ಹಾಡು ಹೇಳಿ ಸದ್ಭಕ್ತರನ್ನು ರೋಮಾಂಚನಗೊಳಿಸಿದರು. ಝುಂಜರವಾಡದ ಬಸವರಾಜೇದ್ರ ಶರಣರು ಪ್ರವಚನ ನೀಡಿದರು. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು.
ಹೂವಿನ ಹಿಪ್ಪರಗಿ ವಿಶ್ವನಾಥ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಫಕೀರಸಾಬ ಬಾಗವಾನ, ಪ್ರಭುಲಿಂಗ ಜನವಾಡ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಚಿನ್ಮಯ ಜಿರಲಿ, ಪ್ರಗತಿಪರ ರೈತ ಮುದಕಪ್ಪ ಜಮಖಂಡಿ, ಜ್ಯೋತಿ ಮಹಿಳಾ ಮಂಡಳದ ಗೀತಾ ಮೇತ್ರಿ, ಉಪಾಧ್ಯಕ್ಷೆ ರೇಣುಕಾ ತೇಲಿ, ಬನಶಂಕರಿ ಮಹಿಳಾ ಮಂಡಳ ಕವಿತಾ ಬಿಜಾಪುರ, ನಗರಸಭೆ ಸದಸ್ಯೆ ಅನುಸೂಯಾ ಅಸುಗಡೆ ಇತರರು ಇದ್ದರು.ಗದುಗಿನ ಗವಾಯಿ ರವಿಕುಮಾರ ಬೆಣ್ಣಿ, ತಬಲಾ ವಾದಕ ಹನುಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಶರಣು ಸಮರ್ಪಿಸಿದರು.