ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮನೆಯ ಮಾಳಿಗೆ ಕುಸಿದಿರುವುದು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಸಮೀಪದ ಹುಣಸಿಹೊಳೆಯಲ್ಲಿ ಬಿರುಗಾಳಿ ಮಳೆಗೆ ನಾಲ್ಕು ಮನೆಗಳ ಪತ್ರಾಸಗಳಿಗೆ (ಟಿನ್ ಶೀಟ್) ಮನೆ ಕುಸಿದರೆ, ದೇವರಗೋನಾಲದಲ್ಲಿ ಒಂದು ಮನೆ ಮಾಳಿಗೆ ಕುಸಿದಿದೆ. ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಗುರುವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಆರಂಭವಾದ ಬಿರುಗಾಳಿ ಸಹಿತ ಮಳೆಗೆ ನಾಲ್ಕು ಮನೆಗಳ ಪತ್ರಾಸಗಳು ಹಾರಿ ಹೋಗಿವೆ. ಒಂದು ಮನೆಯ ಮಾಳಿಗೆ ಕುಸಿದಿದೆ. 20ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ. ವೈರ ಸುಮಾರು 5ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ದೇವರಗೋನಾಲದಲ್ಲಿ ಮಳೆಗಾಳಿಗೆ ಒಂದು ಮನೆಯ ಮಾಳಿಗೆ ಕುಸಿತಗೊಂಡಿದೆ. ದೇವತ್ಕಲ್ ಗ್ರಾಮದಲ್ಲಿ ಬಿರುಗಾಳಿಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಎರಡು ಗ್ರಾಮಗಳಿಗೂ ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುಮಾರು 30 ನಿಮಿಷ ಬೀಸಿದ ಗಾಳಿಗೆ ಮರಗಳು ಭೂಮಿ ಮುಟ್ಟಿ ಎದ್ದೇಳುತ್ತಿದ್ದವು ಎಂದು ಹುಣಸಿಹೊಳೆ ನಾಗರಿಕರು ತಿಳಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಹಾನಿ ಪರಿಶೀಲಿಸಿದ್ದಾರೆ. ಕಳೆದ ಮೂರು ದಿನಗಳಿಂದ ಕತ್ತಲೆ ಕೂಪದಲ್ಲಿ ಮುಳುಗಿದ್ದೇವೆ. ಜೆಸ್ಕಾಂ ಅಧಿಕಾರಿಗಳು ದಿನಕ್ಕೊಂದು ಕಥೆ ಹೇಳುತ್ತಾ ಕೊಡುತ್ತೇವೆ ಎನ್ನುವ ದಿನವೇ ಮಳೆಗಾಳಿ ಬಂದು ವಿದ್ಯುತ್ ಮುರಿದು ಬಿದ್ದಿವೆ. ಕಂಬ ಇಲ್ಲ ಎನ್ನುತ್ತಿದ್ದಾರೆ. ಇನ್ನೊಂದು ತಿಂಗಳಾದರೂ ನಮ್ಮ ಕರೆಂಟ್ ದೂರದ ಮಾತು. ಅಧಿಕಾರಿಗಳು ಜನರ ಸಮಸ್ಯೆಗೆ ಕ್ಯಾರೆ ಎನ್ನುತ್ತಿಲ್ಲ ಎಂಬುದಾಗಿ ದಲಿತ ಮುಖಂಡ ಮರಿಲಿಂಗ ಆಕ್ರೋಶ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.