ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಂಘಟನೆಗಳ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಈ ಹಿಂದೆ ರಾಜ್ಯ ಸರ್ಕಾರದಿಂದ ಶೀಘ್ರ ವಿದ್ಯುತ್ ಯೋಜನೆ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅವಕಾಶ ನೀಡಲಾಗಿತ್ತು. ಈ ಯೋಜನೆಯಡಿ ವಿದ್ಯುತ್ ನಿಗಮಗಳು ರೈತರಿಂದ ಶುಲ್ಕ ಮಾತ್ರ ಕಟ್ಟಿಸಿಕೊಂಡು ಗರಿಷ್ಠ 500 ಮೀಟರ್ ದೂರದವರೆಗೆ ಉಚಿತವಾಗಿ ವಿದ್ಯುತ್ ಮಾರ್ಗ, ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಸವಲತ್ತು ಕಲ್ಪಿಸುತ್ತಿದ್ದವು. ಇದೀಗ ರಾಜ್ಯ ಸರ್ಕಾರಿ ಈ ಯೋಜನೆಯನ್ನು ರದ್ದುಗೊಳಿಸಿರುವುದರಿಂದ ಇನ್ನು ಮುಂದೆ ರೈತರು ಹೊಸದಾಗಿ ಟಿಸಿ ಪಡೆಯಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿದೆ. ಭೀಕರ ಬರಗಾಲ ಎದುರಿಸುತ್ತಿರುವ ರೈತರನ್ನು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ. ರಾಜ್ಯ ಸರ್ಕಾರ ರೈತರನ್ನು ಗಮನದಲ್ಲಿಟ್ಟುಕೊಂಡು ತನ್ನ ಆದೇಶವನ್ನು ವಾಪಸು ಪಡೆದು ಈ ಹಿಂದಿನ ಪದ್ಧತಿಯನ್ನು ಮರು ಜಾರಿಗೆ ತರಬೇಕೆಂದು ಆಗ್ರಹಿಸಿದರು.ರೈತ ಸಂಘ ಮತ್ತು ಹಸಿರುಸೇನೆಯ ತಾಲೂಕು ಅಧ್ಯಕ್ಷ ಎಂ.ಎಚ್. ಮಹೇಶ್, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಡೇವಿಡ್ ಮಾತನಾಡಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ದಯಾನಂದ್, ಮುದಾಸಿರ್, ಸದಾಶಿವ, ಪುರಸಭಾ ಮಾಜಿ ಉಪಾಧ್ಯಕ್ಷ ಎಚ್.ಎಸ್. ವರದರಾಜು, ಬಸಪ್ಪ, ಕುಬೇರೇಗೌಡ, ಬಲವೇಂದ್ರ ಅಗ್ರಹಾರ ಕುಮಾರ್, ವೈರಮುಡಿ, ಗಿರೀಶ್, ಭಾಸ್ಕರ್ ಹೊಸೂರು, ಗ್ರಾಪಂ ಸದಸ್ಯ ಕುಮಾರ್, ಪುರುಷೋತ್ತಮ್ ಇದ್ದರು. ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದು ಗಿರೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.