ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ (ಪುತ್ತರಿ) ಹಬ್ಬವನ್ನು ನಾಲ್ಕುನಾಡು ವ್ಯಾಪ್ತಿಯಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಪಟಾಕಿ ಬಾಣ ಬಿರುಸುಗಳ ಸದ್ದಿನೊಂದಿಗೆ ವಿವಿಧ ದೇವಾಲಯ, ಐನ್ ಮನೆ, ಕೊಡವ ಸಮಾಜಗಳಲ್ಲಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ನಾಡಿನಲ್ಲೆಡೆ ಬತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು.ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆಯಂಡ, ಕಲಿಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ ಸೇರಿದಂತೆ ಅಮ್ಮಂಗೇರಿಯವರು ಹಾಗೂ ಊರ ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ಅಮ್ಮಂಗೇರಿಯ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿಬೊಳಕ್ ಹಿಡಿದು ದೇವಾಲಯಕ್ಕೆ ಪ್ರದಕ್ಷಿಣೆ ಮಾಡಿ ಆಗಮಿಸಿದರು. ಅನಂತರ ದೇವರನ್ನು ಸ್ತುತಿಸುವುರೊಂದಿಗೆ ದುಡಿಕೊಟ್ ಪಾಟ್ ಅನ್ನು ಕುಡಿಯರ ಮುತ್ತಪ್ಪ ಮತ್ತು ಸಂಗಡಿಗರು ಹಾಡಿದರು. ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಪೊಂಗೇರ ಉಲ್ಲಾಸ್ ನೆರವೇರಿಸಿದರು. ಬಳಿಕ ಅಮ್ಮಂಗೇರಿಯ ಜ್ಯೋತಿಷ್ಯರು ಈ ಹಿಂದೆ ನಿರ್ಧರಿಸಿದಂತೆ ಶನಿವಾರ ರಾತ್ರಿ ನಿಗದಿತ ಸಮಯಕ್ಕೆ ಅಂಬಲವಾಸಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆಯೊಂದಿಗೆ ಗದ್ದೆ ಕಡೆ ಸಾಗಿದರು ಜೊತೆಗೆ ಡೋಲು ಮೇಳ ಪಟಾಕಿಗಳ ಮೊರೆತ ದೊಂದಿಗೆ ಪೊಲಿಪೊಲಿ ಬಾ ಉದ್ಘೋಷಗಳ ನಡುವೆ ಗದ್ದೆಯಲ್ಲಿ ಕದಿರಿಗೆ ಪೂಜೆ ನೆರವೇರಿಸಿ ಕದಿರನ್ನು ಕಟಾವು ಮಾಡಿ ಭಕ್ತಾದಿಗಳ ಕೈಯಲ್ಲಿ ನೀಡಲಾಯಿತು .ಈ ಸಂದರ್ಭ ಶುಭ ಸಂಕೇತವಾಗಿ ಆಕಾಶದ ಕಡೆಗೆ ಗುಂಡು ಹಾರಿಸಿ ಉದ್ಘೋಷಗಳು ಮುಗಿಲು ಮುಟ್ಟಿದವು. ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅರ್ಚಕರಿಗೆ ತೆನೆಗಳನ್ನು ಹಸ್ತಾಂತರಿಸಿದರು ಅವರು ತೆನೆಗಳನ್ನು ದೇವಾಲಯದ ನಮಸ್ಕಾರ ಮಂಟಪದಲ್ಲಿರಿಸಿ ಅರ್ಚಕರಾದ ಕುಶ ಭಟ್, ಪ್ರಸಾದ್ ಬತ್ತದ ತೆನೆಗಳನ್ನು ಪೂಜಿಸಿ ವಿಶೇಷ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ನೆರೆ ಕಟ್ಟಿ ದೇವಾಲಯದ ಗರ್ಭಗುಡಿ ಸೇರಿದಂತೆ ವಿವಿಧ ಕಡೆ ಪ್ರಥಮವಾಗಿ ಕದಿರು ಕಟ್ಟಲಾಯಿತು.
ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅರ್ಚಕರು ಕದಿರನ್ನು ವಿತರಿಸಿದರು. ಅನಂತರ ಭಕ್ತಾದಿಗಳು ಕದಿರನ್ನು ಹೊತ್ತು ಪೊಲಿಪೊಲಿ ದೇವಾ ಉದ್ಘೋಷದೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹುತ್ತರಿಯ ಅಂಗವಾಗಿ ಪಟಾಕಿಗಳ ಅಬ್ಬರ ಜೋರಾಗಿ ಮನೆಮನೆಗಳಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮಾರ್ದನಿಸಿತು.