ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಯೋಗ್ಯತೆ ಇದೆ. ಆದರೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಹಾಗೆಂದು ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಯೂ ಇಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ನನ್ನದು ಒಂದು ರೀತಿಯಲ್ಲಿ ದಾನಶೂರ ಕರ್ಣ ಮತ್ತು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದರು.
ನನ್ನ ದೆಹಲಿ ಭೇಟಿ ವೇಳೆ ಯಾವುದೇ ರಾಜೀ ಸಂಧಾನ ನಡೆದಿಲ್ಲ. ನಾಯಕರ ಜೊತೆ ಒಟ್ಟಿಗೆ ಕುಳಿತು ಚಹಾ ಕುಡಿದಿದ್ದೇವೆ ಅಷ್ಟೇ. ಜೊತೆಗೆ ಹೈಕಮಾಂಡ್ ನಾಯಕರು ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರತಿಪಕ್ಷ ನಾಯಕ ಆರ್. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಎಂದು ಪ್ರಶ್ನಿಸಿದ ಅವರು, ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಬಿಜೆಪಿ ಪಕ್ಷ ಸೇರಿಕೊಂಡಿದೆ. ನಮ್ಮ ಬಿಜೆಪಿ ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಯಾರ ಹೆಸರೂ ಹೇಳದೆ ವ್ಯಂಗ್ಯವಾಡಿದ ಅವರು ನಾಯಕತ್ವಕ್ಕಾಗಿ ನಮ್ಮ ಹೋರಾಟ ಅಲ್ಲ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಯಾರು ವಿರೋಧ ಪಕ್ಷ ನಾಯಕ ಮತ್ತು ಯಾರು ರಾಜ್ಯಾಧ್ಯಕ್ಷನಾಗಬೇಕು ಅಂತ ಕೇಳಿದಾಗ ಬಹುತೇಕರು ಯತ್ನಾಳ್ ಅವರನ್ನೇ ಮಾಡಬೇಕು ಎಂದರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಚಾಟಿ ಬೀಸಿದರು.
ಚುನಾವಣೆ ಮುನ್ನ ಮೀಸಲು ಘೋಷಿಸಿ: ಬರುವ ಲೋಕಸಭಾ ಚುನಾವಣೆ ಅಷ್ಟರಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ನಾವು ಪಾಠ ಕಲಿಸುತ್ತೇವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಎಚ್ಚರಿಕೆ ನೀಡಿದರು.