ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಲ್ಲ ಅರ್ಹತೆ ಇದ್ದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಿಲ್ಲ. ನಮ್ಮದು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಬೇಸರ ವ್ಯಕ್ತಪಡಿಸಿದರಲ್ಲದೆ, ಮೈಸೂರಿನಲ್ಲಿ ಹಳ್ಳಿ ಹಕ್ಕಿ ಇದೆಯಾದರೆ, ಇಲ್ಲಿ ನಾನು ಸ್ವತಂತ್ರ ಹಕ್ಕಿಯಾಗಿದ್ದೇನೆ ಎಂದು ಪರೋಕ್ಷವಾಗಿ ಪಕ್ಷದ ರಾಜ್ಯ ನಾಯಕರಿಗೆ ಟಾಂಗ್ ನೀಡಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಯೋಗ್ಯತೆ ಇದೆ. ಆದರೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಹಾಗೆಂದು ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಯೂ ಇಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ನನ್ನದು ಒಂದು ರೀತಿಯಲ್ಲಿ ದಾನಶೂರ ಕರ್ಣ ಮತ್ತು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದರು.
ನನ್ನ ದೆಹಲಿ ಭೇಟಿ ವೇಳೆ ಯಾವುದೇ ರಾಜೀ ಸಂಧಾನ ನಡೆದಿಲ್ಲ. ನಾಯಕರ ಜೊತೆ ಒಟ್ಟಿಗೆ ಕುಳಿತು ಚಹಾ ಕುಡಿದಿದ್ದೇವೆ ಅಷ್ಟೇ. ಜೊತೆಗೆ ಹೈಕಮಾಂಡ್ ನಾಯಕರು ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರತಿಪಕ್ಷ ನಾಯಕ ಆರ್. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಎಂದು ಪ್ರಶ್ನಿಸಿದ ಅವರು, ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಬಿಜೆಪಿ ಪಕ್ಷ ಸೇರಿಕೊಂಡಿದೆ. ನಮ್ಮ ಬಿಜೆಪಿ ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಯಾರ ಹೆಸರೂ ಹೇಳದೆ ವ್ಯಂಗ್ಯವಾಡಿದ ಅವರು ನಾಯಕತ್ವಕ್ಕಾಗಿ ನಮ್ಮ ಹೋರಾಟ ಅಲ್ಲ ಎಂದರು.
ನಾನು ಮಂತ್ರಿ ಆಗಲು, ರಾಜ್ಯಾಧ್ಯಕ್ಷ ಆಗಲು, ವಿರೋಧ ಪಕ್ಷದ ನಾಯಕ ಆಗಲು ಸ್ವಾಮೀಜಿಯಿಂದ ಲಾಬಿ ಮಾಡಲ್ಲ. ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದ್ದರು. ಜನ ಅದಕ್ಕೆ ತಲೆ ಕಡೆಸಿಕೊಳ್ಳದೆ ಹಣ ಇಸ್ಕೊಂಡ್ರು, ನನಗೇ ಮತ ಹಾಕಿದರು.ಸಾಮಾಜಿಕ ಜಾಲತಾಣದಲ್ಲಿ ಯಾರು ವಿರೋಧ ಪಕ್ಷ ನಾಯಕ ಮತ್ತು ಯಾರು ರಾಜ್ಯಾಧ್ಯಕ್ಷನಾಗಬೇಕು ಅಂತ ಕೇಳಿದಾಗ ಬಹುತೇಕರು ಯತ್ನಾಳ್ ಅವರನ್ನೇ ಮಾಡಬೇಕು ಎಂದರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಚಾಟಿ ಬೀಸಿದರು.
ಬಿದ್ಹೋಗೋ ಪಕ್ಷಕ್ಕೆ ಖರ್ಗೆಗೆ ಅಧ್ಯಕ್ಷರು: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ವಾರಂಟಿಯೇ ಇರಲ್ಲ. ಹಣವೆಲ್ಲಾ ಗ್ಯಾರಂಟಿಗೆ ಹೋಗುತ್ತಿದೆ. ಲೋಕಸಭಾ ಚುನಾವಣೆ ನಂತರ ಎಲ್ಲಾ ಗ್ಯಾರಂಟಿ ನಿಲ್ಲಲಿದೆ. ಬಿದ್ದೋಗೋ ಪಕ್ಷಕ್ಕೆ ಖರ್ಗೆಗೆ ಅಧ್ಯಕ್ಷರಾಗಿಸುತ್ತಾರೆ. ರಾಹುಲ್ ಪ್ರಧಾನ ಮಂತ್ರಿ ಅಭ್ಯರ್ಥಿ ಎನ್ನುತ್ತಾರೆ. ಅವನೊಬ್ಬ ಟೈಮ್ ಪಾಸ್ ಗಿರಾಕಿ ಎಂದು ಲೇವಡಿ ಮಾಡಿದರು.ಚುನಾವಣೆ ಮುನ್ನ ಮೀಸಲು ಘೋಷಿಸಿ: ಬರುವ ಲೋಕಸಭಾ ಚುನಾವಣೆ ಅಷ್ಟರಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ನಾವು ಪಾಠ ಕಲಿಸುತ್ತೇವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಎಚ್ಚರಿಕೆ ನೀಡಿದರು.