ರೈತ ಕೋಟಾದಡಿ ನಾನು ಸಚಿವ ಸ್ಥಾನ ಕೇಳಿದ್ದೆ: ಶಿವಗಂಗಾ

KannadaprabhaNewsNetwork |  
Published : Aug 07, 2026, 01:30 AM IST
6ಕೆಡಿವಿಜಿ3-ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ. | Kannada Prabha

ಸಾರಾಂಶ

ಸಂಪುಟ ವಿಸ್ತರಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಸಾದರ ಲಿಂಗಾಯತ ಕೋಟಾದಡಿ ಅವಕಾಶ ಇತ್ತು. ಪಟ್ಟಿ ಬಿಡುಗಡೆಯ ವೇಳೆ ಕ್ಲರಿಕಲ್ ಮಿಸ್ಟೇಕ್ ಆಗಿತ್ತೋ, ಏನೋ ಎಂದು ಚನ್ನಗಿರಿ ಕ್ಷೇತ್ರ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

- ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ನಿಭಾಯಿಸುತ್ತೇನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂಪುಟ ವಿಸ್ತರಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಸಾದರ ಲಿಂಗಾಯತ ಕೋಟಾದಡಿ ಅವಕಾಶ ಇತ್ತು. ಪಟ್ಟಿ ಬಿಡುಗಡೆಯ ವೇಳೆ ಕ್ಲರಿಕಲ್ ಮಿಸ್ಟೇಕ್ ಆಗಿತ್ತೋ, ಏನೋ ಎಂದು ಚನ್ನಗಿರಿ ಕ್ಷೇತ್ರ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಬ್ಲ್ಯಾಕ್‌ಮೇಲ್ ನಡೆಯುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ ಎಂದಿದ್ದವರು ಈಗ ಎಲ್ಲಿದ್ದಾರೆ? ರಾಜೀನಾಮೆ ಕೊಡುತ್ತೇವೆ ಎಂದವರೆಲ್ಲಾ ಈಗ ಸಿಎಂ ಮನೆಯಲ್ಲಿದ್ದಾರೆ ಎಂದರು.

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕ್ಲರಿಕಲ್ ಮಿಸ್ಟೇಕ್ ಆಗಿರಬಹುದೆಂದು ನಾವು ತಿಳಿದುಕೊಂಡಿದ್ದೆವು. ಹಿಂದಿನ ಸಲ 7 ಜನ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು. ಈ ಬಾರಿ 6 ಜನರಿಗೆ ಸಚಿವ ಸ್ಥಾನ ಕೊಟ್ಟಿದ್ದರು. ಸಾದರ ಲಿಂಗಾಯತ ಕೋಟಾದಡಿ ಅವಕಾಶ ಇದ್ದು. ಅದನ್ನು ಮನಗಂಡು ಬದಲಾವಣೆ ಮಾಡಿರಬಹುದು ಎಂದು ಅವರು ತಿಳಿಸಿದರು.

ನಾನು ಜಾತಿವಾರು, ಜಿಲ್ಲಾವಾರು ಕೋಟಾದಡಿ ಸಚಿವ ಸ್ಥಾನವನ್ನು ಕೇಳಿರಲಿಲ್ಲ. ರೈತ ಕೋಟಾದಡಿ ಸಚಿವ ಸ್ಥಾನ ಕೇಳಿದ್ದೆ. ಇನ್ನೂ ನನಗೆ ವಯಸ್ಸಿದೆ. ಮುಂದೆ ಅವಕಾಶಗಳೂ ಇವೆ. ಸಚಿವ ಸ್ಥಾನವನ್ನೇ ನಿಭಾಯಿಸುತ್ತೇನೆ ಅಂದ ಮೇಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ಅದನ್ನೂ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮನೆಯ ಮಗ ನಾನು. ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ. ಮನೆ ಮಗನಿಗೆ ಯಾವಾಗಲೂ ಆಶೀರ್ವಾದ ಇದ್ದೇ ಇರುತ್ತದೆ. ಮುಂದೆ ಬಹಳ ಅವಕಾಶಗಳೂ ಇವೆ. ನನ್ನನ್ನು ಮಂತ್ರಿ ಮಾಡುತ್ತಾರೆಂದು ನಾನು ಡಿ.ಕೆ.ಶಿವಕುಮಾರ ಅವರ ಪರ ಮಾತನಾಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದರಿಂದ ಡಿ.ಕೆ.ಶಿ.ಯವರ ಪರ ಮಾತನಾಡಿದ್ದೆವು. ಸಂಘಟನೆಗೆ ಶಕ್ತಿ ತುಂಬಲು ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದೆವು. ನಾನೇ ಮುಖ್ಯಮಂತ್ರಿಯಾದಷ್ಟು ಖುಷಿಯಾಗುತ್ತಿದೆ ಎಂದು ತಮ್ಮ ನೆಚ್ಚಿನ ನಾಯಕ ಸಿಎಂ ಆಗಿದ್ದಕ್ಕೆ ಬಸವರಾಜ ಶಿವಗಂಗಾ ಹರ್ಷ ವ್ಯಕ್ತಪಡಿಸಿದರು.

- - -

(ಬಾಕ್ಸ್‌)

* ನಾಗೇಂದ್ರಗೆ ಸಚಿವ ಸ್ಥಾನ: ಬಿಜೆಪಿ ವಿರೋಧಕ್ಕೆ ಆಕ್ರೋಶ

- ಜೈಲಿಗೆ ಹೋಗಿದ್ದ ಯಡಿಯೂರಪ್ಪನೋರಿಗೆ ಸಿಎಂ ಮಾಡಲಿಲ್ವಾ: ಶಿವಗಂಗಾ ಪ್ರಶ್ನೆ ದಾವಣಗೆರೆ: ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಮಾಡಿದ್ದ ಬಿಜೆಪಿಯವರು ಈಗ ಬಿ.ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದ್ಕಕ್ಕೆ ವಿರೋಧಿಸುತ್ತಿದ್ದಾರೆ. ನಾಗೇಂದ್ರ ಮೇಲೆ ಆರೋಪ ಇದೆಯೇ ಹೊರತು, ಅಪರಾಧ ಸಾಬೀತಾಗಿಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ವಿಪಕ್ಷ ಮುಖಂಡರ ಟೀಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಯಾರ ಮೇಲೆ ಇಲ್ಲ ಹೇಳಿ? ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಮೇಲೂ ಮುಖ್ಯಮಂತ್ರಿ ಮಾಡಿದ್ದರು. ಭ್ರಷ್ಟಾಚಾರದ ಆರೋಪ ಸಾಬೀತಾಗಿದ್ದರೆ, ಜೈಲಲ್ಲಿ ಇದ್ದರೆ ಅವಕಾಶ ಸಿಗುವುದಿಲ್ಲ. ಆದರೆ, ಬಿ.ನಾಗೇಂದ್ರ ವಿರುದ್ಧದ ಆರೋಪವೇ ಸಾಬೀತಾಗಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಸರಿಯಾಗಿಯೇ ಇದೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದ್ದು ಸರಿಯಾದ ಕ್ರಮವಾಗಿದೆ ಎಂದರು.

ಬಿ.ನಾಗೇಂದ್ರ ಅವರಿಗೆ ದೆಹಲಿಗೆ ಹೋಗಲು ಅವಕಾಶ ಇಲ್ಲವೆಂಬ ಮಾತುಕೇಳಿ ಬರುತ್ತಿದೆ. ದೆಹಲಿಗೆ ಹೋಗದಂತಹ ರಾಜ್ಯಮಟ್ಟದ ಖಾತೆಯನ್ನು ನೀಡಿದರೆ ಅಲ್ಲಿಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತರು ಅಂತಾ ಇದರಲ್ಲಿ ಬರುವುದಿಲ್ಲ. ಪ್ರಾಂತ್ಯವಾರು, ಜಾತಿವಾರು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಆರ್.ಬಿ.ತಿಮ್ಮಾಪುರಗೆ ಬಿಟ್ಟು, ಬಸವಂತಪ್ಪಗೆ ಮಂತ್ರಿ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವ ಸಂಪುಟ ವಿಸ್ತರಣೆ ಪೂರ್ವದಲ್ಲಿ ಜಾತಿವಾರು, ಪ್ರಾಂತ್ಯವಾರು ಲೆಕ್ಕಾಚಾರದ ಮೇಲೆಯೇ ತೀರ್ಮಾನ ಆಗಿ ಹೋಗಿದೆ. ಈಗ ಆ ವಿಚಾರದ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ. ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಸರಿಯಾಗಿಯೇ ಇದೆ ಎಂದು ಬಸವರಾಜ ಶಿವಗಂಗಾ ಸಂಪುಟ ವಿಸ್ತರಣೆ, ಜಾತಿವಾರು ಮತ್ತು ಪ್ರಾಂತ್ಯವಾರು ಲೆಕ್ಕಾಚಾರದಲ್ಲಿ ಸಚಿವರ ಆಯ್ಕೆ ಕ್ರಮವನ್ನು ಸಮರ್ಥಿಸಿಕೊಂಡರು.

- - -

-6ಕೆಡಿವಿಜಿ3: ಬಸವರಾಜ ವಿ. ಶಿವಗಂಗಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ, ನಾಡಿದ್ದು ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ
ಸೆ.1ಕ್ಕೆ ದೆಹಲಿ ಚಲೋ: ಸಿಪಿಐನಿಂದ ಜಾಗೃತಿ, ಪಾದಯಾತ್ರೆ