ನಿತ್ಯವೂ ಸಾಕಷ್ಟು ಜನ ನಮ್ಮ ಜೊತೆ ಫೋಟೋ ತೆಗೆಸಿಕೊಂಡು ಹೋಗ್ತಾರೆ. ಅಂಥವರು ಮಾಡಿದ್ದನ್ನೆಲ್ಲಾ ನಮ್ಮ ಮೇಲೆ ಹೇಳಿದರೆ ಏನು ಮಾಡಬೇಕು. ಊರಲ್ಲಿ ಏನೇ ಆದರೂ ನಾನೇ ಮಾಡಿದ್ದೀನಿ ಅಂದರೆ ಏನರ್ಥ ಎಂದು ಬಿಜೆಪಿ ಮುಖಂಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ನಿತ್ಯವೂ ಸಾಕಷ್ಟು ಜನ ನಮ್ಮ ಜೊತೆ ಫೋಟೋ ತೆಗೆಸಿಕೊಂಡು ಹೋಗ್ತಾರೆ. ಅಂಥವರು ಮಾಡಿದ್ದನ್ನೆಲ್ಲಾ ನಮ್ಮ ಮೇಲೆ ಹೇಳಿದರೆ ಏನು ಮಾಡಬೇಕು. ಊರಲ್ಲಿ ಏನೇ ಆದರೂ ನಾನೇ ಮಾಡಿದ್ದೀನಿ ಅಂದರೆ ಏನರ್ಥ ಎಂದು ಬಿಜೆಪಿ ಮುಖಂಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಶ್ನಿಸಿದರು.
ಡ್ರಗ್ಸ್ ದಂಧೆ, ಪಡಿತರ ಅಕ್ಕಿ ಅಕ್ರಮದಲ್ಲಿ ಸಚಿವರ ಆಪ್ತರ ವಿರುದ್ಧ ಎಫ್ಐಆರ್ ದಾಖಲಾಗಿವೆಯೆಂಬ ಬಿಜೆಪಿ ಆರೋಪಕ್ಕೆ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯಿಸಿದರು. ಯಾರೇ ಆಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಶಾಮನೂರು ವೇದಮೂರ್ತಿ ಚಿಕ್ಕಪ್ಪ ಲೋಕಣ್ಣನ ಮನೆಯವರು ಹಿಂದೆ ನಮ್ಮ ಪಕ್ಷದಿಂದ ಕಾರ್ಪೊರೇಟರ್ ಆಗಿದ್ದವರು. ಫೋಟೋ ತೆಗೆಸಿಕೊಳ್ಳುವುದೇನೂ ಅಪರಾಧವಲ್ಲ. ಸಾಕಷ್ಟು ಜನ ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಅಂತಹವರು ಮಾಡಿದ್ದನ್ನೆಲ್ಲಾ ನಮ್ಮ ಮೇಲೆ ಹೇಳಿದರೆ ಏನು ಮಾಡುವುದು? ಟೆಂಪೋ, ಲಾರಿ ಕೊಡಿಸುವೆ. ಸಹಾಯ ಮಾಡುತ್ತೇನೆ. ಒಳ್ಳೆಯ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳಿ ಅಂತಲೂ ಸಾಕಷ್ಟು ಜನರಿಗೆ ಬುದ್ಧಿ ಹೇಳಿದ್ದೇನೆ. ಬಿಜೆಪಿಯವರ ಆರೋಪ ದಾವಣಗೆರೆ ಜನ ನಂಬುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೂ ಹೇಳಿದ್ದೇನೆ. ಯಾರೇ ತಪ್ಪು ಮಾಡಿದರೂ ಕೇಸ್ ರಿಜಿಸ್ಟರ್ ಮಾಡುವಂತೆ ಸೂಚಿಸಿದ್ದೇನೆ. ಇಂತಹ ವಿಚಾರದಲ್ಲಿ ಎರಡು ಮಾಡಿಲ್ಲ ಎಂದು ಸಚಿವರು ಪುನರುಚ್ಛರಿಸಿದರು.
ಹರಿಹರ ಶಾಸಕ ವಿರುದ್ಧ ವಾಗ್ದಾಳಿ:
ನನ್ನ ಮೇಲೆ ಆರೋಪಗಳನ್ನು ಮಾಡದಿದ್ದರೆ ಅವರ ಬೇಳೆ ಬೇಯಬೇಕಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಸಕಾರಾತ್ಮಕ ಆಲೋಚನೆ, ಆರೋಗ್ಯಕರ ಚರ್ಚೆ ಇದ್ದಾಗ ಮಾತ್ರ ಅಭಿವೃದ್ಧಿ ಕಾರ್ಯ ಆಗುತ್ತವೆ. ಎಲುಬಿಲ್ಲದ ನಾಲಗೆ ಅಂತ ಮಾತಾಡಿದರೆ ಲೀಡರ್ ಆಗುವುದಿಲ್ಲ. ಲೀಡರ್ಶಿಪ್ ಕ್ವಾಲಿಟಿ ಇರಬೇಕು ಎಂದು ಹರೀಶ್ಗೆ ಸಲಹೆ ನೀಡಿದರು.
ಎಲ್ಲ ಇಲಾಖೆಗಳಿಗೂ ತೆರಳಿ, ಫಂಡ್ ತೆಗೆದುಕೊಳ್ಳಲು ಹೇಳಿ. ಎಲ್ಲೆಲ್ಲಿ ಏನೇನು ಕೆಲಸ ಆಗಿವೆ ನೋಡಿಕೊಳ್ಳಲು ಹೇಳಿ. ಸಣ್ಣತನ ಬಿಟ್ಟು, ಮೊದಲು ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಹೇಳಿ. ಹರಿಹರದಲ್ಲಿ ಹೋಗಿ ಏನಾಗಿದೆಯೆಂದು ಜನರನ್ನು ಕೇಳುವುದಕ್ಕೆ ಹೇಳಿ. ನಾನೆಷ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಅನ್ನೋದಲ್ಲ. ಅಭಿವೃದ್ಧಿ ಕೆಲಸ ಮಾಡಲು ಹೇಳಿ ಎಂದು ಮಲ್ಲಿಕಾರ್ಜುನ ಬಿ.ಪಿ.ಹರೀಶಗೆ ತಾಕೀತು ಮಾಡಿದರು.
- - -
(ಬಾಕ್ಸ್) *
ಪುತ್ರ ಸಮರ್ಥನಿಗೆ ಟಿಕೆಟ್ ನೀಡುವಂತೆ ಕೆಲವರು ಆಗ್ರಹಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಎಸ್ಸೆಸ್ಸೆಂ, ಸಮರ್ಥ ಇನ್ನೂ ಯಂಗ್ ಇದ್ದಾನೆ. ಅವನಿಗೆ ಇನ್ನೂ ಟೈಮ್ ಇದೆ. ಅವನನ್ನೂ ಕರೆಸಿ, ಅವನ ಬಾಯಿಯಲ್ಲಿ ಏನು ಬರುತ್ತದೋ ಕೇಳುತ್ತೇನೆ. ಸಹೋದರ ಎಸ್.ಎಸ್.ಗಣೇಶ ಹೆಸರು ಸಹ ಮುನ್ನೆಲೆಗೆ ಬರುತ್ತಿದೆ. ಉಪ ಚುನಾವಣೆಗೆ ನಿಲ್ಲಲು ಆಸಕ್ತಿ ಇದೆಯಾ ಅಂತಾ ಅವನನ್ನೂ ಕರೆಸಿ, ಕೇಳುತ್ತೇನೆ. ಇದುವರೆಗೂ ಈ ಬಗ್ಗೆ ಯಾವುದೇ ಚರ್ಚೆಗಳೂ ತಮ್ಮ ಮನೆಯಲ್ಲಿ ಆಗಿಲ್ಲ. ಅಭ್ಯರ್ಥಿ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.