ನಗರಸಭೆಯಲ್ಲಿ ಭರವಸೆ
ಹಾಸನ ನಗರಸಭೆಗೆ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭೂತ ಪೂರ್ವ ಸ್ವಾಗತವನ್ನು ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದರು. ಸಚಿವರು ಎಲ್ಲರನ್ನು ಪರಿಚಯ ಮಾಡಿಕೊಂಡು ಸಮಸ್ಯೆಯನ್ನು ಆಲಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ೨೫ ಹಳ್ಳಿಗಳು ಹಾಸನ ನಗರಸಭೆಗೆ ಸೇರಿದ್ದು, ಪೌರಕಾರ್ಮಿಕರ ಕೊರತೆಯಿಂದ ಹಾಸನ ನಗರದ ಸ್ವಚ್ಛತೆ ಕಾರ್ಯ ಕುಂಠಿತವಾಗಿದ್ದು, ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ವಿಳಂಬವಾದ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದನ್ನೆಲ್ಲಾ ಪರಿಶೀಲನೆ ಮಾಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು, ವಿಶೇಷವಾದ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು.
ಪೌರಕಾರ್ಮಿಕರ ಬಗ್ಗೆಯೂ ಹೇಳಲಾಗದ ಸಮಸ್ಯೆ ಇದೆ. ಖಾಲಿ ಇರುವ ಕಾರ್ಮಿಕ ಹುದ್ದೆಯನ್ನು ಏಕೆ ಭರ್ತಿ ಮಾಡಿಲ್ಲ ಎಂದು ಕೇಳಿದ್ದಾರೆ. ಅದು ಕೂಡ ಆದೇಶವಾಗಲಿದೆ. ನಗರಸಭೆಗೆ ಅವಶ್ಯಕವಾಗಿ ಬೇಕಾಗಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.‘ಐದು ಗ್ಯಾರಂಟಿ ಮಾಡಿರುವುದರಿಂದ ಹಣವು ಬಡವರಿಗೆ ಹಂಚಿ ಹೋಗಿ ಅವರಿಗೆ ಲಾಭವಾಗಿದೆ. ನಾನು ಹಾಸನ ನಗರಸಭೆಗೆ ಬಂದು ವಿಚಾರಿಸಿ ಪರಿಚಯ ಮಾಡಿಕೊಂಡು ಹೋಗಲು ಬಂದಿದ್ದೇನೆ. ಹಾಸನ ನಗರಸಭೆಯಲ್ಲಿ ಸಮಸ್ಯೆ ಇದ್ದು, ತುರ್ತಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚೆ ಮಾಡಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ರಹೀಂ ಖಾನ್ ಮಾತನಾಡಿದರು.