ಹಾನಗಲ್ಲ: ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗ ಒದಗಿಸುವ ಮಹತ್ತರ ಯೋಜನೆಗಳ ಮೂಲಕ ಹಾವೇರಿ-ಗದಗ ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸಲು ನಿರಂತರ ನಿಮ್ಮ ಸಂಪರ್ಕದಲ್ಲಿದ್ದು, ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಹಾನಗಲ್ಲ ತಾಲೂಕಿನ ನರೇಗಲ್ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಲ್ಲಿ ಜಗಮೆಚ್ಚಿದ ರೀತಿಯಲ್ಲಿ ಭಾರತ ಪ್ರಜ್ವಲಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮೆಲ್ಲರ ನಿರೀಕ್ಷೆಯನ್ನು ಯಶಸ್ವಿ ಮಾಡಿದ್ದಾರೆ. ದೇಶದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನರೇಂದ್ರ ಮೋದಿಜಿ ಮತ್ತೆ ಪ್ರಧಾನಿಯಾಗಲೇಬೇಕು. ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಜನರ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ನಿರ್ಲಿಪ್ತ ಸ್ಥಿತಿಯಲ್ಲಿ ರಾಜ್ಯ ಸರಕಾರವಿದೆ. ಬಿಜೆಪಿ ನೀಡಿದ ಜನತೆಯ ಅನುಕೂಲಕರವಾದ ವಿದ್ಯಾನಿಧಿ, ಕಿಸಾನ ಸಮ್ಮಾನದ ರಾಜ್ಯದ ಪಾಲು ಬಂದ್ ಮಾಡಿದ ಕಾಂಗ್ರೆಸ್ಗೆ ಇನ್ನೇನು ಅಭಿವೃದ್ಧಿಯ ಬಗೆಗೆ ಮಾತಾನಾಡಲು ಹಕ್ಕಿದೆ. ದೇಶದ ಸುಭದ್ರತೆ ಸಮೃದ್ಧತೆಯನ್ನು ಕಾಪಾಡುವ ಬಿಜೆಪಿಗೆ ಎಲ್ಲರೂ ಮತ ಹಾಕುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಮೋದಿಜಿ ಮತ್ತೆ ಪ್ರಧಾನಿಯಾಗಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ ಕಟ್ಟೇಗೌಡರ, ನಿಂಗಪ್ಪ ಗೊಬ್ಬೇರ, ಮಲ್ಲಿಕಾರ್ಜುನ ಹಾವೇರಿ, ಮಲ್ಲಿಕಾರ್ಜು ಅಗಡಿ, ಮಾಲತೇಶ ಸೊಪ್ಪಿನ, ಸಂದೀಪ ಪಾಟೀಲ, ಎಂ.ಆರ್. ಪಾಟೀಲ, ಬಸವರಾಜ ಹಾದಿಮನಿ, ಬಿ.ಎಸ್. ಅಕ್ಕಿವಳ್ಳಿ, ಎಂ.ಎಸ್. ಕೋತಂಬರಿ ಮೊದಲಾದವರಿದ್ದರು.