ಇಡಗುಂಜಿ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ

KannadaprabhaNewsNetwork | Published : Feb 17, 2024 1:15 AM

ಸಾರಾಂಶ

ಪುರಾಣ ಪ್ರಸಿದ್ಧ ಕ್ಷೇತ್ರವಾದ ಮ್ಹಾತೋಬಾರ ವಿನಾಯಕನ ಸನ್ನಿಧಿಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ಮಹಾಸ್ಯಂದನ ರಥೋತ್ಸವ ನಡೆಯಿತು. ಅಂದಾಜು ನಲವತ್ತು ಕ್ವಿಂಟಲ್ ಪಂಚಖಾದ್ಯ ನೈವೇದ್ಯವಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು.

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಮ್ಹಾತೋಬಾರ ವಿನಾಯಕನ ಸನ್ನಿಧಿಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ಮಹಾಸ್ಯಂದನ ರಥೋತ್ಸವ ನಡೆಯಿತು.ದೇವರ ಕೀರ್ತಿಯನ್ನು ಸಾರುವ ರಥದ ತುತ್ತತುದಿಯಲ್ಲಿರುವ ಕಲಶ ದೇವಾಲಯದಲ್ಲಿ ಆಗಮ ಶಾಸ್ತ್ರಾನುಸಾರ ತ್ರಿಕಾಲ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿರುವ ಪಾರಂಪರಿಕ ಅರ್ಚಕ ಕುಟುಂಬದವರಿಂದಲೇ ಸಮರ್ಪಣೆಗೊಂಡು ಕಂಗೊಳಿಸುತ್ತಿರುವುದು ವಿಶೇಷವಾಗಿ ಕಂಡು ಬಂದಿತು. ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಸರ್ವೋಚ್ಚ ನ್ಯಾಯಾಲಯ ದೇವಾಲಯಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ರಿಸೀವರ್ ಆಗಿ ನೇಮಿಸಿದೆ. ಪ್ರಸ್ತುತ ಜಿಲ್ಲಾ ನ್ಯಾಯಾಧೀಶರು ಮುಂದಾಳತ್ವದಲ್ಲಿ, ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಎಲ್ಲ ವೃತ್ತಿಯವರೂ ತಮ್ಮ ತಮ್ಮ ವೃತ್ತಿಗನುಗುಣವಾಗಿ ಇಲ್ಲಿ ಸೇವೆ ಸಲ್ಲಿಸುತ್ತಾರೆ. ರಥ ಸಪ್ತಮಿಯ ದಿನ ಸುತ್ತಲಿನ ಬಹುತೇಕ ರೈತರು ತಾವು ಬೆಳೆದ ಬೆಳೆಗಳನ್ನು ತಂದು ದೇವರಿಗೆ ಕಾಣಿಕೆಯಾಗಿ ಸಲ್ಲಿಸುತ್ತಾರೆ. ಅಡಕೆ ಗೊನೆ, ತೆಂಗಿನ ಕಾಯಿ, ಬಾಳೆಗೊನೆಗಳನ್ನು ರಥಕ್ಕೆ ಕಟ್ಟಿ ಉತ್ತಮ ಫಸಲಿಗಾಗಿ ಬೇಡಿಕೊಂಡರು. ಅಂದಾಜು ನಲವತ್ತು ಕ್ವಿಂಟಲ್ ಪಂಚಖಾದ್ಯ ನೈವೇದ್ಯವಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಮಾಘ ಶುಕ್ಲ ಬಿದಿಗೆಯಂದು ಫಲ ಸಮರ್ಪಣೆ, ಮೃತ್ತಿಕಾಹರಣ, ಅಂಕುರಾರ್ಪಣದೊಂದಿಗೆ ಪ್ರಾರಂಭವಾಗುವ ಜಾತ್ರೆ ಮಾಘ ಶುಕ್ಲ ಸಪ್ತಮಿಯಂದು ಮಹಾಸ್ಯಂದನ ರಥೋತ್ಸವದೊಂದಿಗೆ ಸಂಪನ್ನವಾಗುತ್ತದೆ. ಸದಾ ನಿಂತುಕೊಂಡೇ ತನ್ನ ಸನ್ನಿಧಿಗೆ ಬರುವ ಭಕ್ತರ ದುಗುಡ ದುಮ್ಮಾನಗಳನ್ನು ಆಲಿಸುವ ಬಾಲ ಗಣಪತಿ ರಥಾರೂಢನಾದಾಗ ಕಣ್ತುಂಬಿಕೊಳ್ಳುವ ಕ್ಷಣಗಳು ತಮ್ಮ ಜೀವನದ ಪಾವನ ಕ್ಷಣಗಳೆಂದು ಭಕ್ತರು ಎಣಿಸುತ್ತಾರೆ.

ದೇವಳದ ಹಿನ್ನೆಲೆ: ಲೋಕಕಲ್ಯಾಣಕ್ಕಾಗಿ ತಪೋನಿರತರಾಗಿದ್ದ ಮುನಿ ವಾಲಖಿಲ್ಯರಿಗೆ ಪದೇ ಪದೇ ವಿಘ್ನಗಳು ಎದುರಾದಾಗ ನಾರದ ಮುನಿಗಳ ಮಾರ್ಗದರ್ಶನದಂತೆ ವಾಲಖಿಲ್ಯರು ಪರಶುರಾಮ ಸೃಷ್ಟಿಯ ಶರಾವತಿಯ ಸನಿಹದಲ್ಲಿ ಹಸಿರು ವನರಾಶಿಯಿಂದ ಕೊಂಗೊಳಿಸುತ್ತಿದ್ದ ಇಡಾಕುಂಜದಲ್ಲಿ ವಿಘ್ನನಿವಾರಕ ವಿನಾಯಕನನ್ನು ಪ್ರತಿಷ್ಠಾಪಿಸಿ ಆರಾಧಿಸಿದ್ದರು ಎನ್ನುವುದು ಈ ದೇವಾಲಯದ ಪೌರಾಣಿಕ ಹಿನ್ನಲೆಯಾಗಿದೆ.ಋಷಿ ಮುನಿಗಳಿಂದ ಪೂಜಿಸಲ್ಪಟ್ಟ, ಆಳರಸರಿಂದ ಆರಾಧಿಸಲ್ಪಟ್ಟ ಮಹಾಗಣಪತಿ ಇಂದಿಗೂ ಭಕ್ತರ ಪಾಲಿಗೆ ಕೇಳಿದ್ದನ್ನು ಕೊಡುವ ವರದ ಹಸ್ತನಾಗಿಯೇ ಪ್ರಸಿದ್ಧಿಯನ್ನು ಹೊಂದಿದ್ದು ಅದೇ ಕಾರಣದಿಂದ ಜಾತಿ ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯ ಸಮಾಜದವರ ಆರಾಧ್ಯ ದೇವನಾಗಿದ್ದು, ಸಂಕಷ್ಟಿ, ವಿನಾಯಕ ಚೌತಿ, ಮಹಾಚೌತಿ, ಸಂಕ್ರಾಂತಿ, ರಥಸಪ್ತಮಿ ಮುಂತಾದ ವಿಶೇಷ ದಿನಗಳಲ್ಲಿ ದೇಶ ವಿದೇಶದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ಶ್ರೀದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ.

ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿವಿಧ ರಂಗದ ಬಹುತೇಕ ಸಾಧಕರು ಇಡಗುಂಜಿಗೆ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. ಹಣ್ಣು ಕಾಯಿ, ಪಂಚಕಜ್ಜಾಯ, ಮೋದಕ ನಿತ್ಯ ನೈವೇದ್ಯವಾಗುತ್ತದೆ. ಆಗಮಿಸುವ ಭಕ್ತರಿಗೆ ಪ್ರತಿದಿನವು ಪ್ರಸಾದ ಭೋಜನ ವ್ಯವಸ್ಥೆಯಿದೆ. ಗಣ ಹೋಮ ಸತ್ಯನಾರಾಯಣ ಕಥೆ, ಯಜ್ಞ ಯಾಗಗಳು ನಿರಂತರ ನಡೆಯುತ್ತಿರುತ್ತವೆ.

Share this article