ಕನಕಪುರ: ಇಂದು ಕ್ರೀಡಾ ಜಗತ್ತು ವಿಫುಲ ಅವಕಾಶಗಳನ್ನು ಕಲ್ಪಿಸುತ್ತಿದ್ದು, ಕ್ರೀಡೆಗಳಲ್ಲಿಯೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರೂರಲ್ ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮಿ ಹೇಳಿದರು. ನಗರದ ರೂರಲ್ ಪದವಿ ಕಾಲೇಜಿನ ಕ್ರೀಡಾ ವಿಭಾಗ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಅಂತರ ಕಾಲೇಜು ಮಹಿಳಾ ವಾಲಿಬಾಲ್ ಟೂರ್ನಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಪೋಷಕರು, ಶಿಕ್ಷಕರು ಗುರುತಿಸಿ ಸ್ಪರ್ಧೆಗಳಿಗೆ ಉತ್ತಮ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ 26 ಕಾಲೇಜುಗಳಿಂದ 12 ತಂಡಗಳು ಭಾಗವಹಿಸಿದ್ದವು. ಆರ್ಇಎಸ್ ಮೈದಾನದಲ್ಲಿ ನಡೆದ ಸ್ಪರ್ಧೆಗಳಲ್ಲಿ ಕನಕಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆಯಿತು. ರೂರಲ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ಹಳೆಯ ವಿದ್ಯಾರ್ಥಿನಿ ಹಾಗೂ ರಾಷ್ಟ್ರೀಯ ಮಟ್ಟ ಕ್ರೀಡಾಪಟು ಡಾ.ಸೀಮಾ, ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲ ಎಂ.ಟಿ ಬಾಲಕೃಷ್ಣ, ಉಪಪ್ರಾಂಶುಪಾಲ ದೇವರಾಜು, ರೂರಲ್ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಕುಮಾರಸ್ವಾಮಿ ಇತರರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರದ ರೂರಲ್ ಕಾಲೇಜು ಆವರಣದಲ್ಲಿ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ರೂರಲ್ ಕಾಲೇಜು ತಂಡ.