ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ । ಜಿಲ್ಲಾಡಳಿತಕ್ಕೆ ಮನವಿ
ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಸಂಚಾಲಕಿ ಚೈತ್ರ ಮಾಧ್ಯಮದೊಂದಿಗೆ ಮಾತನಾಡಿ, ‘ಹಾಸನದ ಡೈರಿ ಸರ್ಕಲ್ನಲ್ಲಿರುವ ಬಿಸಿಎಂ ಬಾಲಕಿಯರ ಎಂಜಿನಿಯರಿಂಗ್/ ಮೆಡಿಕಲ್ ವೃತ್ತಿಪರ ಹಾಸ್ಟೆಲ್ನಲ್ಲಿ ಇತ್ತೀಚಿಗೆ ನಡೆದಿರುವ ಘಟನೆಗಳು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದೆ. ಒಂದು ತಿಂಗಳ ನಡುವೆ ಎರಡು ಬಾರಿ ಅಪರಿಚಿತ ವ್ಯಕ್ತಿಗಳು ನಿಲಯದ ಒಳಗಡೆ ನುಗ್ಗಿದ್ದರು ಎಂದು ಕೆಲವು ವಿದ್ಯಾರ್ಥಿನಿಯರಿಂದ ತಿಳಿದು ಬಂದಿತ್ತು. ನಿಲಯದ ಪಾಲಕರಿಗೆ ಹಾಗೂ ಇಲಾಖೆಯ ತಾಲೂಕು ಅಧಿಕಾರಿಗಳಿಗೂ ಈ ಘಟನೆಯನ್ನು ತಿಳಿಸಿದ್ದರೂ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಹಾಗೂ ಭದ್ರತೆ ದೊರೆತಿಲ್ಲ’ ಎಂದು ದೂರಿದರು.
‘ಅಪರಿಚಿತ ವ್ಯಕ್ತಿ ಹಾಸ್ಟೆಲ್ ಒಳಗೆ ನುಗ್ಗಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಗಳು ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿದೆ. ರಾತ್ರಿ ವೇಳೆಯಲ್ಲಿ ಹಾಸ್ಟೆಲ್ನಲ್ಲಿ ಇರಲು ಭಯ ಹುಟ್ಟಿಸುತ್ತಿದೆ. ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿಗಳು ಒಮ್ಮೆಯೂ ಬಂದು ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡದೆ ಕೇವಲ ನಿಲಯ ಪಾಲಕರೊಂದಿಗೆ ಮಾತನಾಡಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.‘ಎಂಜಿನಿಯರಿಂಗ್/ ಮೆಡಿಕಲ್ ವಿದ್ಯಾರ್ಥಿನಿಲಯವನ್ನು ಸರಿಯಾದ ಸೂಕ್ತ ಭದ್ರತೆ ಇರುವ ನಿಲಯಕ್ಕೆ ವರ್ಗಾಯಿಸಬೇಕು. ಇಲ್ಲವೇ ನಿಲಯಕ್ಕೆ ಕಟ್ಟು ನಿಟ್ಟಿನ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಜತೆಗೆ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.
ವಿದ್ಯಾರ್ಥಿ ಎಐಡಿಎಸ್ಒ ಸಂಘಟನೆಯ ಸುಷ್ಮಾ, ಸೌಮ್ಯ ಹಾಗೂ ವಿವಿಧ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.