ಗದಗ: ಕಲಾವಿದರಿಗೆ ಸ್ಥಾನಮಾನ ನೀಡಿ, ಪ್ರೋತ್ಸಾಹ ನೀಡಿ ಸಹಕರಿಸಿದರೆ ಮಾತ್ರ ಕಲಾ ಕ್ಷೇತ್ರ ಬೆಳೆಯುತ್ತದೆ ಎಂದು ಹಿರಿಯ ಕಲಾವಿದ ಪ್ರೊ. ಅಶೋಕ ಅಕ್ಕಿ ಹೇಳಿದರು.
ಸರ್ಕಾರ ಕಲಾ ವಿದ್ಯಾರ್ಥಿಗಳ ನೇಮಕಾತಿ ಮಾಡುವ ಮುಖಾಂತರ ಕಲಾಕ್ಷೇತ್ರ ಬೆಳೆಸಬೇಕು. ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೂ ಕಲಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಾಚಾರ್ಯ ಪ್ರೇಮಾ ಹಂದಿಗೋಳ ಮಾತನಾಡಿ, ಲಿಯೋನಾರ್ಡ ಡ. ವಿಂಚಿ ರಚಿಸಿದ ಮೊನಾಲಿಸಾ ಕಲಾಕೃತಿ ಈ ಜಗತ್ತಿಗೆ ನೀಡಿದ ಮಹಾನ್ ಕೊಡುಗೆ, ಈ ಕಲಾಕೃತಿಯ ಆಕರ್ಷಣೆ ಎಂದರೆ ಮುಗುಳುನಗೆ, ಒಬ್ಬ ವಾಸ್ತುಶಿಲ್ಪಿಯಾಗಿ, ಸಂಗೀತ ಕಲಾವಿದನಾಗಿ ಹಲವಾರು ಕಲೆಗಳನ್ನು ಸಿದ್ಧಿಸಿದ ಮಹಾ ಕಲಾಚೇತನ ಅವರು, ಕಲಾವಿದರಾದ ನಾವೆಲ್ಲ ಅವರ ಆದರ್ಶ ಬದುಕನ್ನು ಅನುಕರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಲಾವಿದರಿಗೆ ಅವಕಾಶ ನೀಡಲು ಕಸಾಪ ಇಂತಹ ವಿಭಿನ್ನ ಕಾರ್ಯಕ್ರಮ ರೂಪಿಸುತ್ತ ಬಂದಿದೆ. ಕೇವಲ ಉಪನ್ಯಾಸಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೆ, ಕಲಾವಿದರು ತಮ್ಮ ಕಲೆಯಿಂದ ವೇದಿಕೆ ಪ್ರದರ್ಶನ ನೀಡಲು ಅವಕಾಶ ನೀಡುವ ಈ ವಿಭಿನ್ನ ಗಾನ ಕುಂಚ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು ಎಂದು ಹೇಳಿದರು.
ಗಾನ ಕುಂಚದಲ್ಲಿ ಪ್ರೊ. ಬಿ.ಸಿ. ಕುತ್ನಿ, ಬಸವರಾಜ ನೆಲಜೇರಿ, ಶ್ರೀಕಾಂತ ವಿ. ಪಾಟೀಲ, ಸಲಿಂ ತೆಗ್ಗಿನಮನಿ, ಸಂತೋಷ ಕ್ಯಾದಿಗೇರಿ ಅವರು ಮನಮೋಹಕ ಚಿತ್ರ ರಚಿಸಿ ಜನಮನ ಸೆಳೆದರು.
ಬಿ.ಕೆ. ನಿಂಬನಗೌಡರ, ಆರ್.ಎಸ್. ಬಾಪುರೆ, ಚನ್ನಪ್ಪಗೌಡರ, ಡಿ.ಎಸ್. ತಳವಾರ, ಕಪಲಿ, ನಯನಾ ಕುತ್ನಿ, ನಿರ್ಮಲಾ ತರವಾಡೆ, ಕಸ್ತೂರಿ ಕಡಗದ, ಸಂದಿಗೌಡರ, ರತ್ನಕ್ಕ ಪಾಟೀಲ ಇದ್ದರು.ಡಾ. ಬಿ.ಎಲ್. ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ನೆಲಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.