ಬಿಜೆಪಿ 28 ಸ್ಥಾನ ಗೆದ್ರೆ, ರಾಜೀನಾಮೆ ಕೊಡುವೆ: ಶಾಸಕ ಬೇಳೂರು ಗೋಪಾಲಕೃಷ್ಣ

KannadaprabhaNewsNetwork |  
Published : May 17, 2024, 12:35 AM ISTUpdated : May 17, 2024, 01:32 PM IST
ಪೋಟೊ: 16ಎಸ್‌ಎಂಜಿಕೆಪಿ02: ಬೇಳೂರು ಗೋಪಾಲಕೃಷ್ಣ  | Kannada Prabha

ಸಾರಾಂಶ

ಚುನಾವಣೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ನನಗೆ ವೋಟು ಕೊಡಿ ಎಂದು ಎಲ್ಲೂ ಕೇಳಲಿಲ್ಲ. ಹಾಗೆ ಕೇಳುವ ತಾಕತ್ತು ಅವರಿಗೆ ಇರಲಿಲ್ಲ. ಅವರು ಮೋದಿಗೆ ವೋಟು ಕೊಡಿ ಎಂದು ಕೇಳಿದ್ದಾರೆ. ವಿಮಾನ ನಿಲ್ದಾಣವೊಂದು ಬಿಟ್ಟರೆ ಅವರ ಸಾಧನೆ ಏನು ಇಲ್ಲ.  

 ಶಿವಮೊಗ್ಗ :. ಅವರು ಹೇಳಿದಷ್ಟು ಸೀಟು ಬಂದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಅಷ್ಟು ಸೀಟು ಬರದಿದ್ದರೆ ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲು ಎಸೆದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ನನಗೆ ವೋಟು ಕೊಡಿ ಎಂದು ಎಲ್ಲೂ ಕೇಳಲಿಲ್ಲ. ಹಾಗೆ ಕೇಳುವ ತಾಕತ್ತು ಅವರಿಗೆ ಇರಲಿಲ್ಲ. ಅವರು ಮೋದಿಗೆ ವೋಟು ಕೊಡಿ ಎಂದು ಕೇಳಿದ್ದಾರೆ. ವಿಮಾನ ನಿಲ್ದಾಣವೊಂದು ಬಿಟ್ಟರೆ ಅವರ ಸಾಧನೆ ಏನು ಇಲ್ಲ. ಯಾವ ಸರ್ಕಾರ ಬಂದಿದ್ದರೂ ವಿಮಾನ ನಿಲ್ದಾಣ ಆರಂಭಿಸುತ್ತಿದ್ದರು. ಅದೇನು ದೊಡ್ಡ ವಿಷಯವೇ ಅಲ್ಲ ಎಂದರು.

ಈ ಬಾರಿ ಮೋದಿಯ ಆಟ ನಡೆಯುವುದಿಲ್ಲ. ರಾಘವೇಂದ್ರ ಮತ್ತು ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಸಾಧನೆಯೆಂದರೆ ಭ್ರಷ್ಟಾಚಾರ ಮಾತ್ರ. ಈ ಭ್ರಷ್ಟಾಚಾರದ ಹಡಬೆ ದುಡ್ಡಿನಿಂದಲೇ ಚುನಾವಣೆ ಮಾಡಿದ್ದಾರೆ. ಅವರ ಆಸ್ತಿಗಳು ಎಲ್ಲೆಲ್ಲಿವೆ ಎಂದು ಗೊತ್ತಿದೆ. ಅವರ ಪಾಪದ ಕೊಡ ತುಂಬುತ್ತಿದೆ. ಈ ಅಪ್ಪ ಮಕ್ಕಳ ಬಗ್ಗೆ ಬಿಜೆಪಿಯ ಮುಖಂಡರೇ ತಿರುಗಿ ಬಿದ್ದಿದ್ದಾರೆ ಎಂದು ಖಾರವಾಗಿ ಹೇಳಿದರು.

ಕೋಟ್ಯಾಂತರ ರುಪಾಯಿ ಭ್ರಷ್ಟಾಚಾರ:

ಶಿವಮೊಗ್ಗದಲ್ಲಿ 2 ಬಹುದೊಡ್ಡ ಹಗರಣಗಳಿವೆ. ಶಾಹಿ ಗಾರ್ಮೆಂಟ್ಸ್‌ಗೆ 285 ಎಕರೆ ಜಮೀನನ್ನು ಕೊಡುವ ಅಗತ್ಯವೇನಿತ್ತು. 10 ಎಕರೆ ಸಾಕಿತ್ತಲ್ಲವೇ. ಸಾಗರದಲ್ಲಿ 5 ಎಕರೆ ಮಾತ್ರ ಕೊಟ್ಟಿದ್ದೇವೆ. ಶಿವಮೊಗ್ಗದಲ್ಲಿ ಏಕೆ? ಈ ಹಗರಣದಲ್ಲಿ ರಾಘವೇಂದ್ರ ಅವರು ಕೋಟ್ಯಾಂತರ ರು. ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಮಾತಿದೆ. ಹಾಗಾಗಿ ಇದನ್ನು ತನಿಖೆ ಮಾಡಬೇಕು. ಹಾಗೆಯೇ ಡಿಸಿಸಿ ಬ್ಯಾಂಕ್‍ನಲ್ಲೂ ಕೂಡ ನೇಮಕಾತಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರು. ಭ್ರಷ್ಟಾಚಾರದ ಹಗರಣವಾಗಿದೆ. ಇದನ್ನು ಕೂಡ ತನಿಖೆಗೆ ಆಗ್ರಹಿಸಿದರು.

ಯಾರು ಏನೇ ಹೇಳಲಿ ನಮ್ಮ ಪಕ್ಷದವರು ಸುಮ್ಮನಿದ್ದರು ನಾನು ಇದನ್ನು ಬಿಡುವುದಿಲ್ಲ. ಈ ಎರಡು ಪ್ರಮುಖ ಹಗರಣಗಳನ್ನು ಸಿಐಡಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ನಮ್ಮ ಸರ್ಕಾರ ಇದನ್ನು ತನಿಖೆಗೊಳಪಡಿಸದಿದ್ದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಎಸ್‌ಐಟಿ ಸಾಕು:

ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣವನ್ನು ಹೇಳುವುದಕ್ಕೆ ನಾಚಿಕೆಯಾಗುತ್ತದೆ. ಈ ಎಚ್.ಡಿ.ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳಿಂದ ನಮ್ಮ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದಿದ್ದರು. ಈಗ ಪ್ರಜ್ವಲ್ ದಾರಿ ತಪ್ಪಿದ್ದಾನೆ. ಅದಕ್ಕೆ ಯಾರು ಹೊಣೆ. ರಾಜ್ಯ ಸರ್ಕಾರ ಹೆಚ್ಚು ವಿಳಂಬ ಮಾಡದೇ ಆತನನ್ನು ಬಂಧಿಸಬೇಕು. ಇಂತಹ ಕೆಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ತರವಲ್ಲ. ಇದಕ್ಕೆ ಎಸ್‌ಐಟಿನೇ ಸಾಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಲಾಜಿ, ಮಧು, ಜಿ.ಪದ್ಮನಾಬ್ ಮುಂತಾದವರಿದ್ದರು.

ಯಾರು ಬಂದರೂ ಸರ್ಕಾರ ಬೀಳಿಸಲಾಗಲ್ಲ

ಬಿಜೆಪಿಗರು ಲೋಕಸಭೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎನ್ನುತ್ತಿದ್ದಾರೆ. ಅದ್ಯಾರೋ ಶಿಂಧೆ ಎನ್ನುವವರು ಕೂಡ ಇದನ್ನೇ ಹೇಳಿದ್ದಾರೆ. ಆದರೆ, ಯಾರೇ ಬರಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ ಎಂದರು. ಅದ್ಯಾರೋ ಹಿಂದೆ ಕೆಲವು ಮೂರ್ಖರು ಪಕ್ಷಾಂತರ ಮಾಡಿದರು ಎಂದ ಮಾತ್ರಕ್ಕೆ ಈ ಬಾರಿಯ ಕಾಂಗ್ರೆಸ್ ಶಾಸಕರು ಯಾರೂ ಮಾರಾಟಕ್ಕಿಲ್ಲ. ಯಾರೂ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಈ ಸಲ ಕಾಂಗ್ರೆಸ್‍ನಲ್ಲಿ ಇರುವವರು ಸ್ಟ್ರಾಂಗ್ ಎಂಎಲ್‍ಎಗಳು ಎಂದು ಶಾಸಕ ಬೇಳೂರು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ