ಕನ್ನಡಪ್ರಭ ವಾರ್ತೆ ಶಿವಮೊಗ್ಗ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ಕೂಡಲೆ ರದ್ದು ಮಾಡಬೇಕು. ಸಿಎಂ ಸಿದ್ದರಾಮಯ್ಯ ಜಮೀರ್ ಅಹಮದ್ ಬಾಲ ಹಿಡಿದುಕೊಂಡು ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಕ್ಫ್ ಬೋರ್ಡ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಠಮಾರಿತನ ಧೋರಣೆಯನ್ನು ಮುಂದುವರೆಸುವಂತೆ ಕಾಣುತ್ತದೆ. ಇಡೀ ರಾಜ್ಯವನ್ನೇ ಇಸ್ಲಾಮಿಕರಣ ಮಾಡಲು ಹೊರಟಿದೆ. ಈಗಾಗಲೇ ಸುಮಾರು ₹1.10ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ವಕ್ಫ್ ವಿವಾದಗಳು ತಲೆ ಎತ್ತಿವೆ. ರೈತರ ಜಮೀನುಗಳು, ಸಾಧುಸಂತರ ಮಠಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಇದರಲ್ಲಿ ಸೇರಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಬಾಲು, ಮೋಹನ್ಕುಮಾರ್ ಜಾದವ್, ಶಂಕರನಾಯ್ಕ್, ಕುಬೇರಪ್ಪ, ಚನ್ನಬಸಪ್ಪ, ಮೋಹನ್ ಮತ್ತಿತರರು ಇದ್ದರು.
ರಾಜ್ಯವನ್ನು ಇಸ್ಲಾಮಿಕರಣ ಮಾಡಲು ಹೊರಟಿದ್ದಾರೆವಕ್ಫ್ ಆಸ್ತಿ ಎಂದು ರೈತರ ಭೂಮಿ ಕಬಳಿಸಿ ರಾಜ್ಯವನ್ನು ಇಸ್ಲಾಮಿಕರಣ ಮಾಡಲು ಹೊರಟಿದ್ದಾರೆ. ಹಾಗಾಗಿ ವಕ್ಫ್ಗೆ ಇರುವ ಪರಮೋಚ್ಛ ಅಧಿಕಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಕೇಂದ್ರ ಸರ್ಕಾರದ ಸಮಿತಿಗೆ ಪತ್ರ ಬರೆಯುತ್ತೇನೆ. ಬಸವರಾಜ ಬೊಮ್ಮಾಯಿ ಆಕಾಶದಿಂದ ಇಳಿದು ಬಂದವರಲ್ಲ. ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಸಲು ಮುಂದಾದವರೆಲ್ಲರು ದೇಶ ದ್ರೋಹಿಗಳೇ. ತಮಗೆ ಬೇಕಾದಂತೆ ಮುಸ್ಲಿಮರಿಗಾಗಿ ಆಸ್ತಿ ಕಬಳಿಸಿದರೆ ರಕ್ತ ಕ್ರಾಂತಿ ಆಗಲಿದೆ. ಮುಸ್ಲಿಮರು ಹುಲಿ ಬಾಯಿಗೆ ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು. ಈಗಾಗಲೇ ಸಾಧು ಸಂತರು ಎಚ್ಚೆತ್ತುಕೊಂಡಿದ್ದಾರೆ. ಹೋರಾಟಕ್ಕಾಗಿ ನನ್ನನ್ನು ಕರೆದಿದ್ದಾರೆ. ಸಾಧುಸಂತರೇ ಜಾಗೃತಿಗೊಂಡಿರುವುದು ತುಂಬ ಸಂತೋಷದ ವಿಷಯ. ನಾಳೆ ನಾಡಿದ್ದರಲ್ಲಿ ಬಾಗಲಕೋಟೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಧುಸಂತರೊಂದಿಗೆ ಮಾತನಾಡುವೆ ಎಂದು ಅವರು ತಿಳಿಸಿದರು.