ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯದಂತೆ ಆಡಳಿತ: ರಾಹುಲ್‌ ಗಾಂಧಿ ಭರವಸೆ

KannadaprabhaNewsNetwork | Published : May 3, 2024 1:02 AM

ಸಾರಾಂಶ

ಮಹಿಳೆಯರಿಗೆ ಸಮಾನ ಮೀಸಲು ಹಂಚಿಕೆ, ಎಸ್ಸಿ-ಎಸ್ಟಿ, ಒಬಿಸಿ ಸೇರಿ ಇತರರಿಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ರಾಯಚೂರಿನಲ್ಲಿ ಕೆಪಿಸಿಸಿಯ ಪ್ರಜಾಧ್ವನಿ 2 ಸಮಾವೇಶದಲ್ಲಿ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯದಂತೆ ಆಡಳಿತ ನಡೆಸಲಿದ್ದು, ಮಹಿಳೆಯರಿಗೆ ಸಮಾನವಾಗಿ ಮೀಸಲು ಹಂಚಿಕೆ, ಎಸ್ಸಿ-ಎಸ್ಟಿ, ಒಬಿಸಿ ಸೇರಿ ಇತರರಿಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಎಐಸಿಸಿ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದರು.

ಸ್ಥಳೀಯ ವಾಲ್ಕಾಟ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪ್ರಜಾಧ್ವನಿ 2 ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಎಲ್ಲ ಜನರ ವಿಶ್ವಾಸಕ್ಕೆ ತೆಗೆದುಕೊಂಡು ದೇಶಕ್ಕೆ ನೀಡಿದ ಸಂವಿಧಾನವನ್ನು ಕಾಂಗ್ರೆಸ್‌ ರದ್ದುಪಡಿಸಲು ಹುನ್ನಾರ ನಡೆಸಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಹಾಗೂ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಒಬ್ಬ ಮಹಿಳೆಯ ಅಕೌಂಟ್ ಗೆ ವರ್ಷಕ್ಕೆ ಲಕ್ಷ ರು. ಹಾಕುತ್ತೇವೆ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ಒದಗಿಸಲಾಗುವುದು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವ ಧನ ದುಪ್ಪಟ್ಟು ಮಾಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆ ದಿನದ ಕೂಲಿ ಮೊತ್ತವನ್ನ 400 ರು. ಹೆಚ್ವಿಸುತ್ತೇವೆ ಎಂದರು.

ಜಾತಿ ಜನಗಣತಿ ಮಾಡಿಸಿ, ದೇಶದ ಸಂಪತ್ತಿನಲ್ಲಿ ಯಾವ ಯಾವ ಜಾತಿಯವರ ಆಸ್ತಿ ಎಷ್ಟಿದೆ ಎಂಬುವುದನ್ನ ಬಯಲಿಗೆ ತರುತ್ತೇವೆ. ಜೊತೆಗೆ ದಲಿತರಿಗೆ, ಹಿಂದುಳಿದ ವರ್ಗ ಮತ್ತು ಆದಿವಾಸಿ ಜನಾಂಗದವರಿಗೆ ತಮ್ಮಆಸ್ತಿ ಎಷ್ಟಿದೆ ಎಂಬುವುದು ಗೊತ್ತಾಗಲಿದೆ. ನಿಜವಾದ ರಾಜಕಾರಣ ಜಾತಿಗಣತಿ ನಿಮ್ಮ ಕೈ ಸೇರಿದ ಮೇಲೆ ಆರಂಭವಾಗಲಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್ ಬೋಸರಾಜು ಪ್ರಸ್ತಾವಿಕವಾಗಿ ಮಾತನಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ, ಸಚಿವರಾದ ಕೆ.ಎಚ್ ಮುನಿಯಪ್ಪ, ಕಾರ್ಯಾಧ್ಯಕ್ಷ ಎ.ವಸಂತಕುಮಾರ, ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಶರಣಗೌಡ ಬಯ್ಯಾಪುರ,ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮಾಜಿ ಸಚಿವ ತನ್ವೀರ ಶೇಠ, ವಿನಯಕುಮಾರ ಸೊರಕೆ, ಮಾಜಿ ಶಾಸಕ ಸಯ್ಯದ್ ಯಾಸಿನ್, ಮುಖಂಡರಾದ ಜಿ.ಬಸವರಾಜರೆಡ್ಡಿ, ರವಿ ಬೋಸರಾಜು, ರುದ್ರಪ್ಪ ಅಂಗಡಿ ಹಾಗೂ ಮತ್ತಿತರರಿದ್ದರು. ನಗರಸಭೆ ಸದಸ್ಯ ಜಯಣ್ಣ ನಿರೂಪಿಸಿದರು.

Share this article