ಫೆ. 28ರೊಳಗೆ ಫಲಕದಲ್ಲಿ 60% ಕನ್ನಡ ಇಲ್ಲದಿದ್ದರೆ ಮತ್ತೆ ಹೋರಾಟ: ಕರವೇ

KannadaprabhaNewsNetwork |  
Published : Feb 01, 2024, 02:07 AM ISTUpdated : Feb 01, 2024, 12:59 PM IST
Narayana Gowda

ಸಾರಾಂಶ

ಫೆ.28 ನಾಮಫಲಕ ಅಳವಡಿಕೆಗೆ ಕೊನೆಯ ದಿನ. ಕಾನೂನು ಬೆದರಿಕೆಯ ಮೂಲಕ ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು,

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಫೆ.28ರೊಳಗೆ ರಾಜಧಾನಿ ಬೆಂಗಳೂರಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡಮಯ ಆಗದಿದ್ದರೆ ಪುನಃ ಬೀದಿಗಿಳಿದು ಹೋರಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಫಲಕದಲ್ಲಿ ಕನ್ನಡ ಅಳವಡಿಸುವ ಕುರಿತು ಕರವೇ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಬೆಂಬಲ ಸಿಕ್ಕಿದೆ. ಸರ್ಕಾರ, ಪೊಲೀಸರು ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. 

ಗಡುವು ನೀಡಿದಂತೆ ಫೆ.28ರೊಳಗೆ ರಾಜಧಾನಿ ಬೆಂಗಳೂರಲ್ಲಿ ನಾಮಫಲಕಗಳು ಕನ್ನಡಮಯ ಆಗದಿದ್ದರೆ ಪುನಃ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಇನ್ನು, ನಾಮಫಲಕದಲ್ಲಿ ಶೇ.60 ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ. ಅವರಿಗೆ ಯಾವುದಾದರೂ ಒತ್ತಡ ಇದೆಯೆ? ಮಾರ್ವಾಡಿ, ಸಿಂಧಿ, ಹಿಂದಿಗಳು ಇದರ ಹಿಂದಿದ್ದಾರಾ ಎಂಬ ಅನುಮಾನವಿದೆ. 

ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟವಿಲ್ಲ ಅಂದ್ರೆ ವಾಪಸ್ ಕೇಂದ್ರಕ್ಕೆ ಹೋಗಬಹುದು. ನಾಡು ನುಡಿಯ ವಿಚಾರದಲ್ಲಿ ಯಾರೂ ಆಟವಾಡಬಾರದು. ಕನ್ನಡ ನೆಲದಲ್ಲಿ ಇರಬೇಕು ಎಂದರೆ ಸುಗ್ರೀವಾಜ್ಞೆ ಪ್ರತಿಗೆ ಸಹಿ ಮಾಡಬೇಕಿತ್ತು ಎಂದು ಹೇಳಿದರು.

ರಾಜ್ಯಪಾಲರು ಸಹಿ ಹಾಕದೆ ಇರಬಹುದು. ಆದರೆ, ಅಧಿವೇಶನದಲ್ಲಿ ಶಾಸಕರು ಪಕ್ಷಬೇಧವನ್ನು ಮರೆತು ಒಪ್ಪಿಗೆ ನೀಡಬೇಕು. ರಾಜ್ಯಪಾಲರು ಸಹಿ ಮಾಡದಿರುವುದು ಕರ್ನಾಟಕಕ್ಕೆ, ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪರಿಗಣಿಸುತ್ತೇವೆ. 

ಅವರು ಕನ್ನಡದ, ಕನ್ನಡಿಗರ ಭಾವನೆಯ ಪರವಾಗಿರಬೇಕು. ಇಲ್ಲದಿದ್ದರೆ ಅವರು ನಮ್ಮ ಭಾವನೆಗೆ ಸ್ಪಂದಿಸಲಿಲ್ಲ ಎಂಬ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.

ಫೆ.28 ನಾಮಫಲಕ ಅಳವಡಿಕೆಗೆ ಕೊನೆಯ ದಿನ. ಕಾನೂನು ಬೆದರಿಕೆಯ ಮೂಲಕ ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. 

ಹಿಂದಿನ ಹೋರಾಟದಲ್ಲಿ ನಾನು ಜೈಲಿಗೆ ಹೋಗಲು ಹಿಂದಿ ರಾಜ್ಯದಿಂದ ಬಂದವರ, ಅಧಿಕಾರಿಗಳ ಕೈವಾಡವಿತ್ತು ಎಂಬುದು ನಮ್ಮ ಗಮನಕ್ಕೆ ಬಂದಿದೆ.

ನಮಗೆ ಜೈಲು ಹೊಸದಲ್ಲ. ಹೋರಾಟಗಾರರನ್ನು ಜೈಲಿಗೆ ಕಳಿಸುವ ಇಂತಹ ಧೋರಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಗಡುವಿನ ಬಳಿಕ ಕರವೇ ಪುನಃ ಹೋರಾಟವನ್ನು ಮುಂದುವರಿಸಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ