ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅಂಬೇಡ್ಕರ್ ಶಿಕ್ಷಣದ ಮಹತ್ವವನ್ನು ಸಾರಿ, ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಎಲ್ಲರೂ ಅವರನ್ನು ಸ್ಮರಿಸುವ ಜೊತೆಗೆ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ಎಸಿಪಿ ಸುಂದರರಾಜು ಹೇಳಿದರು. ಕೊಳ್ಳೇಗಾಲದ ಭೀಮನಗರ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಸ್ದಳದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಗೀತಗಾಯನ, ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕೊಳ್ಳೇಗಾಲ ಎಲ್ಲರಿಗೂ ಹೆಮ್ಮೆಪಡುವಂತಾಗಿದೆ. ಅಂಬೇಡ್ಕರ್ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇದನ್ನರಿತು, ನಾವು ಶಿಕ್ಷಣ ಪಡೆಯುವಲ್ಲಿ ಹಿಂದುಳಿದರೆ ಬದುಕಿನಲ್ಲೂ ಹಿಂದುಳಿದಂತೆಯೇ ಸರಿ ಎಂದರು. ಕಾರ್ಯಕ್ರಮದ ಹಿನ್ನೆಲೆ ಕೊಳ್ಳೇಗಾಲ ಮಧುವಣಗಿತ್ತಿಯಂತೆ ಕಂಗೊಳಿಸಿದೆ, ದಸರಾ ಮಾದರಿ ದೀಪಾಲಂಕಾರ ಜನರ ಗಮನ ಸೆಳೆದಿದೆ. 4 ದಿನಗಳ ಕಾಲ ಭೀಮನಗರದ ಯಜಮಾನರು, ಮುಖಂಡರು ಒಗ್ಗಟ್ಟು ಪ್ರದಶಿ೯ಸಿ ನಡೆಸಿದ ಈ ಕಾರ್ಯಕ್ರಮ ಗಮನ ಸೆಳೆದಿದೆ ಎಂದರು.ಡಿವೈಎಸ್ಪಿ ಮಹಾನಂದ ಮಾತನಾಡಿ, ಅಂಬೇಡ್ಕರ್ ಜ್ಞಾನದ ಸಂಕೇತ, ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು. ಭೀಮನಗರದಲ್ಲಿ 4 ದಿನಗಳ ಕಾಲ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆದಿದೆ. ರಕ್ತದಾನ ಶಿಬಿರದಲ್ಲಿ 103 ಯೂನಿಟ್ ರಕ್ತ ಸಂಗ್ರಹವಾಗಿರುವುದು ನಿಜಕ್ಕೂ ಹೆಮ್ಮೆ ವಿಚಾರ. ಕಾರ್ಯಕ್ರಮ ಸಂಘಟಿಸಲು ಭೀಮ ಬಂಧುಗಳು, ಯಜಮಾನರು ಸಾಕಷ್ಟು ಶ್ರಮಿಸಿದ್ದಾರೆ, ಅದರ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಶಿವಮಾದಯ್ಯ ಅಂಬೇಡ್ಕರ್ ಕುರಿತ ಗೀತೆಯನ್ನು ಸುಮಧುರವಾಗಿ ಹಾಡಿದರು. ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುರಸ್ಕಾರ, ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಎಚ್.ಕೆ.ಟ್ರಸ್ಟ್ ಸಂಸ್ಥಾಪಕಿ ಪ್ರೇಮಲತಾ ಕೃಷ್ಣಸ್ವಾಮಿ, ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ, ಯಜಮಾನರಾದ ವರದರಾಜು, ನಟರಾಜು ಸೇರಿದಂತೆ ಹಲವರು ಗೌರವಿಸಿದರು. ನಿಂಪು ರಾಜೇಶ್, ರಾಜಶೇಖರಮೂರ್ತಿ, ಎಂ ನಟರಾಜಮಾಳಿಗೆ, ರಮೇಶ್, ಸಿದ್ದಾರ್ಥ್, ಲಿಂಗರಾಜು, ಸಿದ್ದಪ್ಪಾಜಿ, ನಟರಾಜು, ಚಂದು, ಸಾಗರ್ ಇನ್ನಿತರರಿದ್ದರು.