ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತ್ಯುತ್ಸವ ಕಾರ್ಯಕ್ರಮ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸುಪ್ರಭಾತ, ವಿಶೇಷ ಪಂಚಾಮೃತ ಅಭಿಷೇಕ, ಪೂಜೆ, ಅಲಂಕಾರ, ಅಷ್ಟೋತ್ತರ ಪಾರಾಯಣ, ಮನ್ಯುಸೂಕ್ತ ಹೋಮ ಮತ್ತು ಮಧು ಅಭಿಷೇಕ, ಪುಷ್ಪಾರ್ಚನೆ, ನರಸಿಂಹ ಕಥಾ ಪ್ರವಚನ, ಮೈಸೂರಿನ ರಾಮಚಂದ್ರಾಚಾರ್ಯ ಅವರಿಂದ ಹರಿ ನಾಮಸ್ಮರಣೆ ಕಾರ್ಯಕ್ರಮ, ಮಹಾನೈವೇದ್ಯ, ತೀರ್ಥಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಪಂಡಿತ್ ವೆಂಕಟೇಶ ಆಚಾರ್ಯ ಜಾಗಿರ್ದಾರ್ ಮಾತನಾಡಿ, ಧರ್ಮದ ವಿಜಯ, ಭಕ್ತರ ರಕ್ಷಣೆ ಮತ್ತು ಅಧರ್ಮ ನಾಶದ ಸಂಕೇತವಾಗಿದೆ. ದೇವರಲ್ಲಿ ಅಚಲ ನಂಬಿಕೆ ಇರುವವರೆಗೆ ಯಾರೂ ಹಾನಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಕಾಲವಿರಲಿ, ದುಷ್ಟಶಕ್ತಿಗೆ ಅವಕಾಶವಿಲ್ಲ. ಶಾಂತಿ, ನೆಮ್ಮದಿ, ಭಕ್ತಿಯಿಂದ ನಡೆದಾಗ ಮುಕ್ತಿ ಕಾಣಲು ಸಾಧ್ಯವಿದೆ ಎಂದರು.
ಮಹಿಳೆಯರು ಆರ್ಥಿಕವಾಗಿ ಸದೃಢರಾಗಲಿ
ರಾಣಿಬೆನ್ನೂರು: ಮಹಿಳೆಯರು ನರೇಗಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಪಿಡಿಒ ಬಿ.ಎಸ್. ಪಾಟೀಲ ತಿಳಿಸಿದರು.
ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದುಡಿಯೋಣ ಬಾ ಅಭಿಯಾನ ಮತ್ತು ಮಹಿಳಾ ಗ್ರಾಮಸಭೆಯ ಆಶ್ರಯದಲ್ಲಿ ಜರುಗಿದ ಆರೋಗ್ಯ ಸಭೆಯಲ್ಲಿ ಮಾತನಾಡಿದರು.ಮಹಿಳೆಯರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಬಲರಾಗಲು ಸಾಧ್ಯ ಎಂದರು.ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಾನಂದ ಮಾಳಗಿ, ಉಪಾಧ್ಯಕ್ಷ ರೇಷ್ಮಾಬಾನು ಎರೆಕುಪ್ಪಿ ಸದಸ್ಯರಾದ ಮಮತಾ ಕದರಮುಂಡಗಿ, ಶಕುಂತಲಾ ಶಿವಕ್ಕನವರ, ಉಜ್ಜನಗೌಡ ಪಾಟೀಲ, ಮಹಮ್ಮದ್ರಫೀಕ್ ಶೇತಸನದಿ, ಮಹಿಳಾ ಒಕ್ಕೂಟದ ಅಧ್ಯಕ್ಷ ಮೈತ್ರಾ ಮಾವಿನತೋಪ, ಕಾರ್ಯದರ್ಶಿ ಚೇತನ ಚಕ್ರಸಾಲಿ, ಕರ ವಸೂಲಿಗಾರ ಮಧು ದೇಸಾಯಿ, ಕಂಪ್ಯೂಟರ್ ಆಪರೇಟರ್ ವೆಂಕಟೇಶ ಹಾಗೂ ಎಂಬಿಕೆಎನ್ಸಿಆರ್ಪಿ ಮಹಿಳಾ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.