19ರಂದು ಧಾರವಾಡ ಐಐಟಿ 6ನೇ ಘಟಿಕೋತ್ಸವ

KannadaprabhaNewsNetwork |  
Published : Jul 17, 2025, 12:30 AM IST
16ಡಿಡಬ್ಲೂಡಿ3,4ಧಾರವಾಡ ಐಐಟಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿದರು.  | Kannada Prabha

ಸಾರಾಂಶ

ಘಟಿಕೋತ್ಸವದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಪ್ರೊ. ಅಭಯ್ ಕರಂದ್ಕರ್ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಐಐಟಿ- ಗೋವಾ ನಿರ್ದೇಶಕ ಧೀರೇಂದ್ರ ಕಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಧಾರವಾಡ: ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) 6ನೇ ಘಟಿಕೋತ್ಸವ ಜು. 19ರಂದು ಕ್ಯಾಂಪಸ್‌ನಲ್ಲಿ ನಡೆಯಲಿದ್ದು, 164 ಬಿಟೆಕ್, 30 ಎಂಟೆಕ್, 13 ಎಂಎಸ್ ಮತ್ತು 20 ಪಿಎಚ್‌ಡಿ ಸೇರಿದಂತೆ ಒಟ್ಟು 227 ಅಭ್ಯರ್ಥಿಗಳು ಶೈಕ್ಷಣಿಕ ಪದವಿಗಳನ್ನು ಪಡೆಯಲಿದ್ದಾರೆ ಎಂದು ಐಐಟಿ- ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಪ್ರೊ. ಅಭಯ್ ಕರಂದ್ಕರ್ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಐಐಟಿ- ಗೋವಾ ನಿರ್ದೇಶಕ ಧೀರೇಂದ್ರ ಕಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪದಕ ಪಡೆದವರಿವರು:

ಘಟಿಕೋತ್ಸವದಲ್ಲಿ ಎಲೆಕ್ಟ್ರಿಕ್‌ ಎಂಜನಿಯರಿಂಗ್ ವಿಭಾಗದಲ್ಲಿ ಹೆಚ್ಚಿನ ಅಂಕಗಳಿಸಿದ ಪೊಮಾಜಿ ರಿಷಭ್ ಶರದ್‌ಗೆ ರಾಷ್ಟ್ರಪತಿ ಚಿನ್ನದ ಪದಕ ಹಾಗೂ ಭೌತಶಾಸ್ತ್ರ ವಿಭಾಗದ ಕೆ. ಅಭಿರಾಮ್ ನಿರ್ದೇಶಕರ ಚಿನ್ನದ ಪದಕ ಹಾಗೂ 7 ಬೆಳ್ಳಿ ಪದಕಗಳನ್ನು ಹಾಗೂ ಸಿಎಸ್‌ನಿಂದ ಅಗ್ರಿಮ್ ಜೈನ್, ಇಇಯಿಂದ ಎನ್. ಸಂಜೀವ್, ಮೆಕ್ಯಾನಿಕಲ್‌ನಿಂದ ಎಲೂರಿ ಹರ್ಷಿತಾ, ಎಂಜಿನಿಯರಿಂಗ್ ಭೌತಶಾಸ್ತ್ರದಿಂದ ಜತಿನ್ ಲಾಥರ್, ಇ ಆ್ಯಂಡ್‌ ಸಿದಿಂದ ಕೌಶಿಕ್ ಶಿವಾನಂದ್ ಪೊವಾರ್, ಏರೋಸ್ಪೇಸ್ ಎಂಜಿನಿಯರಿಂಗ್‌ನಿಂದ ಜಶ್ವಂತ್ ಪೊಲಿಮೆರಾ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ನಿಂದ ಕಾರ್ತಿಕೇಯ ಕುಮಾರ್ ಸಿಂಗ್ ಬೆಳ್ಳಿ ಪದಕಗಳನ್ನು ಪಡೆಯಲಿದ್ದಾರೆ ಎಂಬ ಮಾಹಿತಿ ನೀಡಿದರು.

ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಸ್ಯಾಮ್ ಮಾಣೆಕ್ಷಾ ರಾಷ್ಟ್ರೀಯ ಭದ್ರತಾ ಅಧ್ಯಯನ ಮತ್ತು ಸಂಶೋಧನೆ ಕೇಂದ್ರವನ್ನು ಧಾರವಾಡ ಐಐಟಿಗೆ ಕೇಂದ್ರ ಸರ್ಕಾರವು ಮಂಜೂರು ಮಾಡಿದ್ದು, ಈ ಕೇಂದ್ರ ಇನ್ನಷ್ಟೇ ಕಾರ್ಯೋನ್ಮುಖವಾಗುತ್ತಿದೆ ಎಂದು ಪ್ರೊ. ದೇಸಾಯಿ ಹೇಳಿದರು.

ಮೂಲಸೌಕರ್ಯ ಯೋಜನಾ ವ್ಯವಸ್ಥೆಯ ಡೀನ್‌ ಅಮೃತ ಹೆಗಡೆ ಮಾತನಾಡಿ, ಐಐಟಿಯಲ್ಲಿ ಹಂತ 1ಬಿ ಅಡಿಯಲ್ಲಿ ಕೇಂದ್ರ ಸಚಿವ ಸಂಪುಟವು ₹2,200 ಮಂಜೂರು ಮಾಡಿದೆ ಮತ್ತು ಮುಂದಿನ 4 ವರ್ಷಗಳ ವರೆಗೆ ಹೆಚ್ಚುವರಿ ಶೈಕ್ಷಣಿಕ ಬ್ಲಾಕ್‌ಗಳು, ಪ್ರಯೋಗಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ವಸತಿ, ಹೊರಾಂಗಣ ಕ್ರೀಡಾ ಮೂಲಸೌಕರ್ಯ, ಹಸಿರು ಇಂಧನ ಸೇರಿದಂತೆ ಇತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಐಐಟಿ ಡೀನ್‌ಗಳಾದ ಪ್ರೊ. ಸೂರ್ಯಪ್ರತಾಪ ಸಿಂಗ್, ಪ್ರೊ. ದಿಲೀಪ್ ಎ.ಡಿ, ರಿಜಿಸ್ಟಾರ್ ಡಾ. ಕಲ್ಯಾಣಕುಮಾರ, ಪ್ರೊ. ಅಮರನಾಥ ಹೆಗಡೆ, ಪ್ರೊ. ಕೆ.ವಿ. ಜಯಕುಮಾರ, ಪ್ರೊ. ಎನ್.ಎಸ್. ಪುನೇಕರ, ಪ್ರೊ. ಸಿ. ರವಿಕುಮಾರ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!