ಅಕ್ರಮ ಬಾಂಗ್ಲಾ ವಲಸಿಗರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಠಕ

KannadaprabhaNewsNetwork | Published : Jan 24, 2025 12:50 AM

ಸಾರಾಂಶ

ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ವಕೀಲ ಕವನ್ ಗೌಡ ಒತ್ತಾಯಿಸಿದರು. ವಲಸಿಗರು ಈಗಾಗಲೇ ಬಾಡಿಗೆ ಮನೆ ಪಡೆದುಕೊಂಡು ಕರಾರು ಪತ್ರ ಪಡೆದುಕೊಂಡು ಹಂತ ಹಂತವಾಗಿ ಭಾರತೀಯ ಪ್ರಜೆಯಾಗಿ ಉಳಿಯುವ ಒಳಸಂಚು ನಡೆದಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಕ್ರಮ ಬಾಂಗ್ಲಾ ವಲಸಿಗರು ಕಂಟಕವಾಗಲಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ವಕೀಲ ಕವನ್ ಗೌಡ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತಾಡಿದ ಅವರು, ಆಲೂರು, ಸಕಲೇಶಪುರ, ಬೇಲೂರು ಸೇರಿದಂತೆ ಮಲೆನಾಡಿನ ವಿವಿಧೆಡೆ ಕೂಲಿಕಾರ್ಮಿಕರ ಹೆಸರಿನಲ್ಲಿ ಬಂದು ಇಲ್ಲೇ ಬಾಡಿಗೆ ಮನೆ ಪಡೆದು ವ್ಯಾಪಾರ ವಹಿವಾಟುಗಳನ್ನು ಪಡೆದುಕೊಂಡು ಹಂತಹಂತವಾಗಿ ಆಧಾರ್‌ ಕಾರ್ಡ್, ಓಟರ್ ಐಡಿ ಪಡೆದು ಭಾರತ ದೇಶದ ಪ್ರಜೆಯಾಗಿ ಇಲ್ಲೇ ನೆಲೆಸುವ ತಂತ್ರಗಾರಿಕೆ ನಡೆಯುತ್ತಿದೆ. ಕಾನೂನು ಪ್ರಕಾರ ವಿದೇಶಿಗರಿಗೆ ಭಾರತ ದೇಶದಲ್ಲಿ ನೆಲೆಸಲು ಅವಕಾಶ ಇಲ್ಲ, ಆದರೂ ನುಸುಳುಕೋರರು ಈಗಾಗಲೇ ಒಳನುಸುಳಿದ್ದಾರೆ. ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ಅವರ ಬಗ್ಗೆ ತನಿಖೆ ನಡೆಸಿ ಅಗತ್ಯ ದಾಖಲೆಗಳು ಇಲ್ಲದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ದೇಶಿಯರಿಗೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದರು.

ವಲಸಿಗರು ಈಗಾಗಲೇ ಬಾಡಿಗೆ ಮನೆ ಪಡೆದುಕೊಂಡು ಕರಾರು ಪತ್ರ ಪಡೆದುಕೊಂಡು ಹಂತ ಹಂತವಾಗಿ ಭಾರತೀಯ ಪ್ರಜೆಯಾಗಿ ಉಳಿಯುವ ಒಳಸಂಚು ನಡೆದಿದೆ. ಇದನ್ನು ನಿರ್ಲಕ್ಷ್ಯ ಮಾಡುವುದು ಬೇಡ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಕ್ರಮ ಬಾಂಗ್ಲಾ ವಲಸಿಗರು ಕಂಟಕವಾಗಲಿದ್ದಾರೆ. ಈ ಬಗ್ಗೆ ಎಚ್ಚರ ಅಗತ್ಯವಾಗಿದೆ ಎಂದು ಹೇಳಿದರು.

ಈ ವಿಚಾರವಾಗಿ ಕಾಫಿ ಬೆಳೆಗಾರರು ಹಾಗೂ ಪೊಲೀಸ್ ಇಲಾಖೆಯ ಬಹುದೊಡ್ಡ ಜವಾಬ್ದಾರಿ ಇದೆ. ಆರಂಭದಲ್ಲಿಯೇ ಮುಂದಾಗಬಹುದಾದ ಅನಾಹುತಗಳಿಗೆ ಕಡಿವಾಣ ಹಾಕದಿದ್ದರೆ ಭಾರತೀಯ ಪ್ರಜೆಗಳಿಗೆ ಸಮಸ್ಯೆ ಆಗಲಿವೆ. ಜೊತೆಗೆ ದೇಶೀಯ ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ಕಿತ್ತುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಇದೇ ರೀತಿಯ ಸಮಸ್ಯೆ ಉಂಟಾದಾಗ ಅಲ್ಲಿನ ಎಸ್ಪಿ ಎಚ್ಚೆತ್ತುಕೊಂಡು ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಹಾಸನಲ್ಲಿ ಕೂಡ ಸ್ಥಳೀಯ ಪೊಲೀಸ್ ಠಾಣೆ ಹಂತದಲ್ಲಿ ಅವರ ದಾಖಲೆ ಪರಿಶೀಲನೆ ಮಾಡುವ ಕೆಲಸಗಳು ಆಗಬೇಕಿದೆ ಎಂದು ಸಲಹೆ ನೀಡಿದರು.

Share this article