ಕನ್ನಡಪ್ರಭ ವಾರ್ತೆ ಕೋಲಾರ
ಚುನಾವಣೆ ಅಧಿಸೂಚನೆ ಘೋಷಣೆಯಾದ ನಂತರ ಇದುವರೆಗೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ೨೩ ಪ್ರಕರಣಗಳು ದಾಖಲು ಮಾಡಿದೆ. ಸುಮಾರು ೫೦ ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಹಾಗೂ ಇದನ್ನು ಸಾಗಿಸಲು ಬಳಸಿದ ೨ ಲಾರಿ ಹಾಗೂ ೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಬಸವರಾಜ್ ತಿಳಿಸಿದರು.ನಗರದ ಅಬಕಾರಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ೧೭.೦೭೩ ಲೀಟರ್ ಬೀರ್, ೧೦೭ ಕೇಸ್ ಮದ್ಯ ಸೇರಿದಂತೆ ಸುಮಾರು ೫೦ ಲಕ್ಷ ರು.ಗಳ ಮೌಲ್ಯದ ಮಧ್ಯ ವಶಪಡಿಸಿಕೊಂಡಿದೆ, ಜಿಲ್ಲೆಯ ಗಡಿ ಹಾಗೂ ವಿವಿಧ ಭಾಗಗಳಲ್ಲಿ ಚೆಕ್ ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಚಿಲ್ಲರೆ ಅಂಗಡಿಗಳಿಗೆ ಎಚ್ಚರಿಕೆಗ್ರಾಮೀಣ ಪ್ರದೇಶದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಿದಲ್ಲಿ ಪ್ರಕರಣ ದಾಖಲು ಮಾಡಿ ಬೀಗ ಮುದ್ರೆ ಜಡಿಯಲಾಗುವುದು, ವೈನ್ ಶಾಪ್ಗಳು ಲೋಕಸಭಾ ಚುನಾವಣೆಯ ಪ್ರಯುಕ್ತ ಟೋಕನ್ ಹಂಚುವುದು ಮುಂತಾದ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಪರವನಾಗಿ ರದ್ದುಗೊಳಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಕಾಲದಲ್ಲಿ ಹೆಚ್ಚು ಮದ್ಯ ಮಾರಾಟವಾಗದಂತೆ ಮದ್ಯದ ಅಂಗಡಿಗಳು ಜಾಗೃತಿ ವಹಿಸಬೇಕು, ಹೆಚ್ಚು ಮಾರಾಟವಾದಲ್ಲಿ ಸಮರ್ಪಕವಾದ ಕಾರಣ ತಿಳಿಸಿಬೇಕೆಂದು ಸೂಚಿಸಲಾಗಿದೆ.ಮಾರಾಟ ಸಮಯ ನಿಗದಿ
ಇದೇ ಸಂದರ್ಭದಲ್ಲಿ ನಗರದ ಬಸ್ ನಿಲ್ದಾಣ ಸುತ್ತಮುತ್ತ ವೈನ್ ಶಾಪ್ಗಳಲ್ಲಿ ನಿಗದಿತ ಸಮಯ ಉಲ್ಲಂಘಿಸಿ ಬೆಳಂಬೆಳಗ್ಗೆಯೇ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಸೇರಿದಂತೆ ಇತರೆ ದೂರುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ತಂಡವನ್ನು ರಚಿಸಲಾಗುವುದು. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಮಾ.೨೫ ರಂದು ಜಿಲ್ಲಾ ಆಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಭೆ ಆಯೋಜಿಸಿದೆ ಎಂದು ಮಾಹಿತಿ ನೀಡಿದರು.