ಕನ್ನಡಪ್ರಭ ವಾರ್ತೆ ಧಾರವಾಡ
ಹವಾಮಾನ ಬದಲಾವಣೆಯು ಸಿಹಿನೀರಿನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ತಾಪಮಾನ ಏರಿಕೆಯು ಮಳೆಯ ನಮೂನೆಗಳನ್ನು ಬದಲಾಯಿಸುವುದು, ಶುಷ್ಕ ದಿನಗಳ ಸಂಖ್ಯೆಯಲ್ಲಿ ಹೆಚ್ಚಳ, ಅಲ್ಪಾವಧಿಯಲ್ಲಿ ಧಾರಾಕಾರ ಮಳೆ ಮತ್ತು ಹವಾಮಾನ ವೈಪರೀತ್ಯಗಳು, ಇವುಗಳೆಲ್ಲವೂ ಬರ ಮತ್ತು ಪ್ರವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದು ಪ್ರತಿಯಾಗಿ, ಆಹಾರ ಸರಬರಾಜು ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಇಕೋ ವಿಲೇಜಿನ ನಿರ್ದೇಶಕರು ಮತ್ತು ಪರಿಸರವಾದಿ ಪಿ.ವಿ. ಹಿರೇಮಠ ಹೇಳಿದರು.ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಮತ್ತು ಕವಿವಿ ಯುವ ರೆಡ್ ಕ್ರಾಸ್ ಘಟಕ ಜಂಟಿಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ನೀರಿಗಾಗಿ ನಾರಿಯರ ನಡೆಯಲ್ಲಿ ಮಾತನಾಡಿದರು.
ಭವಿಷ್ಯದಲ್ಲಿ ನೀರು ಸಂಘರ್ಷದ ಪ್ರಮುಖ ಮೂಲವಾಗಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಬೇಡಿಕೆ ಗಗನಕ್ಕೇರುತ್ತಿದೆ ಮತ್ತು ಸಿಹಿನೀರಿನ ಮೀಸಲು ತೀವ್ರವಾಗಿ ಒತ್ತಡಕ್ಕೊಳಗಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಸಂಪನ್ಮೂಲಗಳು ಕುಸಿಯುತ್ತಿರುವುದು ಮತ್ತು ನೀರಿನ ಅಸಮರ್ಥ ಬಳಕೆ ಗಂಭೀರ, ಕಳವಳಕಾರಿ ವಿಷಯ ಎಂದು ಎಚ್ಚರಿಸಿದರು.ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್. ಸಾಳುಂಕೆ ನಡಿಗೆಗೆ ಚಾಲನೆ ನೀಡಿದರು. ಕರ್ನಾಟಕ ಕಲಾ ಕಾಲೇಜಿನಿಂದ ಆರಂಭವಾದ ನಡೆ ರಂಗಾಯಣದ ಹತ್ತಿರದ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವರೆಗೆ ನಡೆಯಿತು. ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಸಂಗೀತಾ ಬಾಗೇವಾಡಿ, ಸಂಘಟಕ ಮಾರ್ತಾಂಡಪ್ಪ ಕತ್ತಿ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷರಾದ ಸುನೀಲ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು.
ಶರಯೂ ನಾಯಕ್, ಆದಿತಿ ಕನವಳ್ಳಿ, ಸುಮನ್ ಹೆಬ್ಳಿಕರ್, ವೀಣಾ ಹಿರೇಮಠ, ರಮ್ಯಾ ಶಿನೋದ್, ರಂಜಿತಾ ಜಾಧವ್, ಶೀತಲ ಲದ್ವಾ, ಗೀತಾ ಹದ್ಲಿ ತಂಡ, ಸುನಿತಾ ಹಿರೇಮಠ, ಸುಮಿತ್ರಾ ಸಿದ್ದಾಶ್ರಮ, ರೇಣುಕಾ ಭರತ, ಸುಜಾತಾ ಆನಿಶೆಟ್ಟರ್, ಗುಲ್ಜನ್ ಸಿಂಗ್, ಅರುಣ್ ಕುಮಾರ್ ಶೀಲವಂತ, ಗಿರೀಶ್ ಬೆಟಗೇರಿ, ಮಾಂತೇಶ್ ಗುಂಜಟ್ಟಿ, ಸೋಮಪುರ ಶಿವರೆಡ್ಡಿ ಇದ್ದರು.