ಕೊಪ್ಪಳ: ಕನಕದಾಸರ ಜಯಂತಿ ದಿನದಂದು ಭಾವಚಿತ್ರದ ಮೆರವಣಿಗೆ ಮಾಡಿದರೆ ಸಾಲದು, ಅವರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಕನಕದಾಸರು ದೇಶ ಕಂಡ ದಾಸ ಶ್ರೇಷ್ಠರು. ಅವರು ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ ಹೋಗಲಾಡಿಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಸಮ ಸಮಾಜ ಕಟ್ಟುವ ಕೆಲಸ ಮಾಡಿದ್ದರು. ಅಂಬೇಡ್ಕರ್, ಬಸವಣ್ಣ, ಕನಕದಾಸರು ಎಲ್ಲ ಸಮಾಜದ ಏಳ್ಗೇಗಾಗಿ ಶ್ರಮಿಸಿದ್ದರು ಎಂದರು.
ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, ಕನಕದಾಸರು ದಂಡನಾಯಕ ತಿಮ್ಮಪ್ಪನಾಗಿ ತನ್ನ ಲೌಕಿಕ ಜೀವನ ತ್ಯಜಿಸಿ ಎಲ್ಲ ಸಿರಿ ಸಂಪತ್ತನ್ನು ತ್ಯಾಗಮಾಡಿ ಸಮಾಜದ ಸುಧಾರಣೆಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅವರು ಸಮಾಜ ಸುಧಾರಣೆಗಾಗಿ ಕೀರ್ತನೆಗಳ ಮೂಲಕ ಜಾತಿ ಮುಖ್ಯ ಅಲ್ಲ ನೀತಿ ಮುಖ್ಯ. ತಮ್ಮ ಭಕ್ತಿಯಿಂದ ಶ್ರೀಕೃಷ್ಣನನ್ನೆ ತನ್ನೆಡೆಗೆ ಒಲಿಸಿಕೊಂಡಿರುವುದನ್ನು ನಾವು ಕಾಣುತ್ತೆವೆ. ಸಿದ್ದರಾಮಯ್ಯನವರು 16ನೇ ಶತಮಾನದಲ್ಲಿ ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದು ಅವರು ಸಮಾಜದ ಕಟ್ಟಕಡೆಯ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮೆಲ್ಲರ ಆಶಯದಂತೆ ಇತ್ತಿಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಕನಕದಾಸ ಮೂರ್ತಿ ಅನಾವರಣ ಗೊಳಿಸಿದರು ಎಂದರು.ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಮಾತನಾಡಿ, ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರು ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯ ಬೆಳೆಸಲು ದಾಸ ಸಾಹಿತ್ಯ, ಭಕ್ತಿ ಪಂಥದ ಮೂಲಕ ಮನುಕುಲಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದಾರೆ. ಕನಕದಾಸರು ಒಬ್ಬ ದಂಡನಾಯಕನಾಗಿದ್ದು, ತನ್ನ ಸಿರಿ, ಸಂಪತ್ತು ಎಲ್ಲವನ್ನು ತ್ಯಾಗಮಾಡಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಹಾಲಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಜಡಿಯಪ್ಪ ಬಂಗಾಳಿ, ಭರಮಪ್ಪ ಹಟ್ಟಿ, ವಿರೂಪಣ್ಣ ಕುರುಬರ, ಬೀರಪ್ಪ ಅಂಡಗಿ ಸೇರಿದಂತೆ ಸಮಾಜದ ಇತರೆ ಮುಖಂಡರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.