ನಾಗರಿಕ ವಲಯದಲ್ಲಿ ಭಾರತ ಸೇವಾದಳ ಮಹತ್ವದ ಪಾತ್ರ: ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್.

KannadaprabhaNewsNetwork | Published : Jun 30, 2024 12:50 AM

ಸಾರಾಂಶ

ದೇಶದ ಉದ್ದಗಲಕ್ಕೂ ಭಾರತ ಸೇವಾದಳದ ಸ್ವಯಂಸೇವಕರು ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ನಾಗರಿಕ ಸೇವೆಯಲ್ಲಿ ತನ್ನದೇ ಪಾತ್ರ ವಹಿಸುತ್ತಿದೆ ಎಂದು ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್. ಹೇಳಿದರು. ಅರಸೀಕೆರೆಯಲ್ಲಿ ‘ಶಿಕ್ಷಕ, ಶಿಕ್ಷಕಿಯರ ಪುನಶ್ಚೇತನ ಶಿಬಿರ’ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪುನಶ್ಚೇತನ ಶಿಬಿರ ಕಾರ್ಯಾಗಾರ । ಸರ್ವಧರ್ಮದ ಸಾಮೂಹಿಕ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ದೇಶದ ಉದ್ದಗಲಕ್ಕೂ ಭಾರತ ಸೇವಾದಳದ ಸ್ವಯಂಸೇವಕರು ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ನಾಗರಿಕ ಸೇವೆಯಲ್ಲಿ ತನ್ನದೇ ಪಾತ್ರ ವಹಿಸುತ್ತಿದೆ ಎಂದು ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್. ಹೇಳಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕ, ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ‘ಶಿಕ್ಷಕ, ಶಿಕ್ಷಕಿಯರ ಪುನಶ್ಚೇತನ ಶಿಬಿರ’ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

‘ನಮ್ಮ ಸೇವಾ ಕಾರ್ಯ ಚಟುವಟಿಕೆಗಳಿಗೆ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸ್ವಯಸೇವಾ ಸಂಘಗಳ ಸಹಕಾರ ಅವಶ್ಯಕತೆ ಇದೆ. ಎಲ್ಲರ ಸ್ವಾರ್ಥ ರಹಿತ ಸಹಕಾರ ಇದ್ದರೆ ಮಾತ್ರ ಶಿಬಿರಗಳು ಯಶಸ್ವಿಯಾಗುತ್ತವೆ. ಸಾರ್ವಜನಿಕ ವಲಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ಹೆಚ್ಚಿನ ಶಕ್ತಿಯೂ ದೊರೆಯುತ್ತದೆ. ಭಾರತ ಸೇವಾದಳ ಸಮಿತಿಯೊಂದಿಗೆ ನೂತನವಾಗಿ ತರಬೇತಿ ಪಡೆದ ಶಿಕ್ಷಕರು ನಿರಂತರ ಸಂಪರ್ಕ ಇಟ್ಟುಕೊಂಡು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಕೋರೋನಾ ಹಬ್ಬಿದ ಸಮಯದಲ್ಲಿ ಭಾರತ ಸೇವಾದಳ ಸಮಿತಿ ತನ್ನದೇ ಸೇವೆ ಸಲ್ಲಿಸಿದೆ. ದೇಶದಾದ್ಯಂತ ಸೇವಾದಳಕ್ಕೆ ತನ್ನದೇ ಆದಂತಹ ಸಂಪರ್ಕ ಕೊಂಡಿಗಳಿವೆ’ ಎಂದು ತಿಳಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ದೀಪ ಮಹೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಆಹಾರ ಪದ್ಧತಿಯಲ್ಲಿ ಕ್ರಮವಿರಲಿ. ಗುಣಮಟ್ಟದ ಆಹಾರ ಸೇವನೆಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಬೇಕರಿ ತಿನಿಸು, ಪದಾರ್ಥಗಳು ಮೈದಾ ಸೇರಿದಂತೆ ಸಕ್ಕರೆ ಅಂಶದ ಪದಾರ್ಥಗಳ ಜತೆ ಕಾಫಿ, ಟೀ ಯಂತಹ ಪಾನೀಯಗಳನ್ನು ನಿಯಂತ್ರಿಸಿ. ಊಟದ ನಂತರ ತಕ್ಷಣವೇ ನಿದ್ರೆ ಮಾಡಬೇಡಿ. ಬೆಳಿಗ್ಗೆ ಹೆಚ್ಚುವರಿಯಾಗಿ ಆಹಾರ ಸೇವಿಸಿ, ನಂತರ ದೈನಂದಿನ ಕಾರ್ಯಗಳನ್ನು ಪ್ರಾರಂಭಿಸಿ. ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರವನ್ನು ನೀಡಲು ಪ್ರಯತ್ನಿಸಿ. ಪ್ರಕೃತಿದತ್ತವಾದ ಉಸಿರಾಟ ಏರಿಳಿತದ ಬಗ್ಗೆ ಗಮನ ಇರಲಿ. ಆಹಾರ ಸೇವನೆಯ ಪದ್ಧತಿ ಅನುಷ್ಠಾನದ ಜತೆ ಯೋಗಭ್ಯಾಸದ ಬಗ್ಗೆ ಆಸಕ್ತಿ ಇರಲಿ. ಮಕ್ಕಳಿಗೆ ಐದು ವರ್ಷ ತುಂಬುವ ಮುಂಚೆಯೇ ನಾಲಿಗೆ ಉಪಯೋಗದ ಮಹತ್ವ, ಶುಚಿತ್ವ ಮತ್ತು ಬಳಕೆ ಪರಿಚಯಿಸಬೇಕು ಎಂದು ತಿಳಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ವಿಷ್ಣುವರ್ಧನ್ ಮಾತನಾಡಿ ಮಕ್ಕಳ ನಾಯಕತ್ವ ಶಿಬಿರ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಶಿಬಿರಗಳನ್ನು ಎಲ್ಲ ಶಾಲೆಗಳ ಶಿಕ್ಷಕರಿಗೆ ನಡೆಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತರಬೇತಿ ಪಡೆದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಶಿಕ್ಷಕರಿಗೆ ಇಂದಿನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಮೂಹಿಕ ಸರ್ವಧರ್ಮದ ಪ್ರಾರ್ಥನೆಯನ್ನು ಮಾಡಲಾಯಿತು. ಭಾರತ ಸೇವಾದಳದ ಶಾರೀರಿಕ ಅಭ್ಯಾಸಗಳು ಮತ್ತು ಗೀತೆಗಳ ಅಭ್ಯಾಸಗಳು, ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ಯೋಗಾಸನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು

ಬಾಣಾವರ ವೃತ್ತ ಶಿಕ್ಷಣ ಸಂಯೋಜಕ ವೈ.ಕೆ ಮಲ್ಲೇಶ್, ಸಾಹಿತಿ ಮಾಲಾ ಚೆಲುವನಹಳ್ಳಿ, ತಾಲೂಕು ಸೇವಾ ದಳ ಘಟಕ ಕಾರ್ಯದರ್ಶಿ ಎನ್ .ವಿ. ರಾಮಕೃಷ್ಣಪ್ಪ, ಬಿ.ಆರ್.ಪಿ ಪುಷ್ಪಾವತಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತಕುಮಾರ್, ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಮಹೇಶ್ ಸೇರಿ ತರಬೇತಿ ಪಡೆದ ಶಿಕ್ಷಕರು ಇದ್ದರು.

Share this article