ಕನ್ನಡಪ್ರಭ ವಾರ್ತೆ ಹರಿಹರ
ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾದರೆ ನೀರು ಇರುವ ಖಾಸಗಿ ಬೋರ್ವೆಲ್ಗಳ ಮಾಲೀಕರಿಂದ ಬಾಡಿಗೆ ಪಡೆಯಲು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಸೂಚನೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರಿನ ಅಭಾವ ಕಂಡು ಬಂದರೆ ಕೂಡಲೇ ಖಾಸಗಿ ವ್ಯಕ್ತಿಗಳಿಂದ ನೀರು ಬಾಡಿಗೆ ಪಡೆದು ಜನರಿಗೆ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರು ಪೂರೈಸಿ ಎಂದು ಸಲಹೆ ನೀಡಿದ್ದಾರೆ. ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ನೀರಿನ ಮೌಲ್ಯ ಮತ್ತು ಮುಂದಾಗುವ ಅಭಾವದ ಕುರಿತು ಗ್ರಾ.ಪಂ ಮತ್ತು ನಗರಸಭೆ ಹಾಗೂ ಪುರಸಭೆ ಸರ್ಕಾರಿ ವಾಹನಗಳ ಮೂಲಕ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಬೇಕೆಂದರು.
ಸರ್ಕಾರದ ಅಧೀನದಲ್ಲಿರುವ ಎಲ್ಲಾ ಬೋರ್ವೆಲ್ಗಳ ಸುತ್ತಲೂ ಇಂಗು ಗುಂಡಿಗಳ ಕಡ್ಡಾಯವಾಗಿ ನಿರ್ಮಿಸಲು ಅಧಿಕಾರಿಗಳು ಮುಂದಾಗಬೇಕು. ಅದೇ ರೀತಿ ಗ್ರಾಮ ಪಂಚಾಯತ್, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ರೈಜಿಂಗ್ ಪೈಪ್ಲೈನ್ ಗಳಿಗೆ ಅಕ್ರಮವಾಗಿ ಸಂಪರ್ಕ ಹೊಂದಿರುವ ನಳಗಳ ಕೂಡಲೇ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ. ಶೀಘ್ರದಲ್ಲಿ ಕೆಇಬಿ ಅಧಿಕಾರಿಗಳ ಸಭೆ ನಡೆಸಿ ಭದ್ರಾ ಚಾನಲ್ ಮತ್ತು ತುಂಗಭದ್ರ ನದಿಗೆ ಅಳವಡಿಸಿರುವ ರೈತರ ಪಂಪ್ಸೆಟ್ ಗಳ ವಿದ್ಯುತ್ ಕಡಿತ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸುಲ್ಪಿ, ಪಂಚಾಯತ್ ರಾಜ್ ಅಭಿಯಂತರರಾದ ಗಿರೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸೇರಿ ಟಾಸ್ಕ್ ಫೋರ್ಸ್ ಅಧಿಕಾರಿಗಳಿದ್ದರು.