ಬಸವರಾಜ ಹಿರೇಮಠ
ಕಲಘಟಗಿ ತಾಲೂಕಿನ 75 ಗ್ರಾಮಗಳ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ 02ನೇ ಹಂತದ ಕಾಮಗಾರಿಗೆ ಸಚಿವ ಸಂಪುಟವು ಇತ್ತೀಚೆಗೆ ಅನುಮೋದನೆ ನೀಡಿದ್ದು, ಕಲಘಟಗಿ ತಾಲೂಕಿನ ಈ ಗ್ರಾಮಗಳ ಜನರಿಗೂ ಸಂತಸ ತಂದಿದೆ.
ಈ ಭಾಗದ ಅನ್ನದಾತರ ಬಹುದಿನಗಳ ಬೇಡಿಕೆಯಾಗಿದ್ದ ಹಾಗೂ ಸಂತೋಷ್ ಲಾಡ್ ಕನಸಾದ ಈ ಏತ ನೀರಾವರಿ ಯೋಜನೆ ಈ ಎರಡು ಯೋಜನೆಗಳಿಂದಾಗಿ ಸಾಕಾರಗೊಳ್ಳುತ್ತಿದ್ದು, ನಿರಂತರ ಶ್ರಮ ಹಾಗೂ ಪ್ರಯತ್ನ ಫಲ ಕೊಟ್ಟಂತಾಗಿದೆ. ಈ ನೀರೆತ್ತುವ ಯೋಜನೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಜರುಗಬೇಕಿದೆ ಅಷ್ಟೇ. ಅಂತರ್ಜಲ ಮಟ್ಟ ಹೆಚ್ಚಿಸುವ ಶಾಶ್ವತ ನೀರಾವರಿ ಯೋಜನೆ ಇದಾಗಿದ್ದು, ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಈ ಕೆರೆ ತುಂಬಿಸುವ ಯೋಜನೆಯಿಂದ ಅನುಕೂಲವಾಗಲಿದೆ ಎಂಬುದಂತೂ ಸತ್ಯ.ಯಾವ್ಯಾವ ಮತ್ತಷ್ಟು ಕೆರಗಳು: ಸೋಮನಕೊಪ್ಪದ ತೋಪಿನ ಕೆರೆ, ಹಿತ್ತಲ ಕೆರೆ, ಶಿವನ ಕೆರೆ, ದ್ಯಾವನಕೊಪ್ಪದ ಜೊಂಡಿ ಕೆರೆ, ವಡಕಟ್ಟೆ ಕೆರೆ, ಸುಡಗಾಡ ಕೆರೆ, ವೀರಭದ್ರೇಶ್ವರ ಕೆರೆ, ಹುಣಸೀಕಟ್ಟಿಯ ಕೆಂಪಗೇರಿ, ದೊಡ್ಡಗೌಡನಕೆರೆ, ಆಸ್ತಿಕಟ್ಟಿಯ ಜೋಂಡ ಕೆರೆ, ಹೊಸ ಕೆರೆ, ಬೆಳ್ಳಿಗಟ್ಟಿ ಕೆರೆ, ಕುಡಿ ಕೆರೆ, ಬೆಂಡಿಗಟ್ಟಿಯ ಐಯ್ಯತ್ತಪ್ಪನ ಕೆರೆ, ನೆಲ್ಲಿ ಹರವಿಯ ತುಂಬಿ ಕೆರೆ, ಕೊರವರ ಕೆರೆ, ಹೊಸಕೇರಿ, ಅತ್ತಿಮರದ ಕೆರೆ, ದೊಡ್ಡವಡ್ಡಕೆರೆ, ಕಣಗಲ್ ಕೆರೆ, ಅರಳಿಹೊಂಡದ ವಡ್ಡಿನ ಕೆರೆ, ಜಿ. ಹುಲಿಕಟ್ಟಿಯ ಚಿಕ್ಕು ಕೆರೆ, ದೊಡ್ಡ ಕೆರೆ, ದ್ಯಾಮಾಪೂರದ ಹೀರೆ ಕೆರೆ, ಸಿದ್ದಪ್ಪನ ಕೆರೆ, ದೇಸಾರ ಕೆರೆ, ನಾಗನೂರಿನ ಹೀರೆ ಕೆರೆ, ಹೊಸಗೇರಿ, ಸೋಲಾರಕೊಪ್ಪದ ಹಿರೇಕೆರೆ, ಅಗಸಿ ಕೆರೆ, ಸೂರಶೆಟ್ಟಿಕೊಪ್ಪದ ಬ್ಯಾಡಗೇರಿ ಕೆರೆ, ಕ್ಯಾತನ ಕೆರೆ, ಗಂಜಿಗಟ್ಟಿಯ ಲಕ್ಕವನಕೆರೆ, ಮೆಟ್ಟಿ ಕೆರೆ, ಚಿಕ್ಕೇರಿ, ಕಾಮಶೆಟ್ಟಿ ಕೆರೆ, ಬೋಗೆನಾಗರಕೊಪ್ಪದ ಕೇರಿ ಕೆರೆ, ಕೆಂಪಗೇರಿ, ದೇಸರ ಕೆರೆ, ಹಿಂಡಸಗೇರಿಯ ಯಲಗಟಗಿ ಕೆರೆ, ತಾವರಗಟ್ಟಿಯ ಬಸಪ್ಪನ ಕೆರೆ, ಕಣಕಲ್ ಕೆರೆ, ಆಲದಕಟ್ಟಿಯ ಹೀರೆ ಕೆರೆ, ಹನುಮಾಪೂರದ ಕೆರೆ, ಗೌಳ್ಯಾನಕೆರೆ, ವಡ್ಡಮ್ಮನ ಕೆರೆ, ಹಲಿಯಾ ಹೊಂಡಾ, ಬಮ್ಮಿಗಟ್ಟಿಯ ಬದ್ನಿಗಟ್ಟಿ ಕೆರೆ, ಬೆಲವಂತರದ ಚಲಮರಿ ಕೆರೆ, ಈಚನಹಳ್ಳಿಯ ಜೊಂಡಿ ಕೆರೆ, ಸುರಳಿಕಟ್ಟಿಯ ದೊಡ್ಡ ಕೆರೆ, ಸಣ್ಣ ಕೆರೆ.
ಶೀಘ್ರ ಚಾಲನೆ ಸಿಗಲಿ: ಈಗಾಗಲೇ ಕಲಘಟಗಿಯ 41 ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಬೇಡಿಕೆಯಂತೆ ಶಾಸಕರು, ಸಚಿವರೂ ಆದ ಸಂತೋಷ ಲಾಡ್ 2ನೇ ಹಂತದ ಏತ ನೀರಾವರಿ ಯೋಜನೆಗೂ ಸರ್ಕಾರದಿಂದ ಒಪ್ಪಿಗೆ ತಂದು ಕ್ಷೇತ್ರದ ಜನರಿಗೆ ಕೊಡುಗೆ ನೀಡಿದ್ದಾರೆ. ಆದಷ್ಟು ಶೀಘ್ರ ಈ ಯೋಜನೆಗೂ ಚಾಲನೆ ದೊರೆಯಲಿ ಎಂದು ಕಲಘಟಗಿಯ ಮುಖಂಡರಾದ ಮಂಜುನಾಥ ಮುರಳ್ಳಿ ಹೇಳಿದರು.