ಕನ್ನಡಪ್ರಭ ವಾರ್ತೆ ಉಡುಪಿ
ಏ.21ರಂದು ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠದಿಂದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಮತ್ತು ಶ್ರೀ ಸುಶ್ರೀಂದ್ರತೀರ್ಥರು ಅನುಗ್ರಹ ಮಂತ್ರಾಕ್ಷತೆ ಹಾಗೂ ಕೃಷ್ಣ ಪ್ರತಿಮೆ ಪಡೆದು ಯಕ್ಷಗಾನ ಪರಿಕರಗಳೊಂದಿಗೆ ನೂತನ ಕಟ್ಟಡಕ್ಕೆ ಸದಸ್ಯರು ಆಗಮಿಸಲಿದ್ದಾರೆ. 10 ಗಂಟೆಗೆ ನೂತನ ಕಟ್ಟಡದ ದ್ವಾರಪೂಜೆ ನಡೆಯಲಿದ್ದು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಪ್ರದರ್ಶನ ಸೇವೆ:ಮಧ್ಯಾಹ್ನ 3.30ಕ್ಕೆ ಹೊಸ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನ ಸೇವೆ ನಡೆಯಲಿದ್ದು, ನಂತರ ಕಟ್ಟಡದ ಹಿಂಭಾಗ ನಿರ್ಮಿಸಿದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವನ್ನು ಇನ್ಫೋಸಿಸ್ ಫೌಂಡೇಶನ್ ವಿಶ್ವಸ್ಥ ಸುನಿಲ್ ಕುಮಾರ್ ಧಾರೇಶ್ವರ್ ಉದ್ಘಾಟಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು, ಅದಮಾರು ಶ್ರೀ ಈಶಪ್ರಿಯ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಶುಭಾಸಂಶನೆಗೈಯಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿರುವರು ಎಂದರು.